ಕರ್ನಾಟಕ

karnataka

ಗಂಡು ಮಗು ಬೇಕು ಅಂತಾ ಪ್ರೀತಿಸಿದವಳಿಗೆ ಕೈಕೊಟ್ಟ ಪ್ರೊಫೆಸರ್​​.. ಕಾನೂನು ಹೋರಾಟಕ್ಕಿಳಿದ ಪತ್ನಿ..

By

Published : Sep 6, 2021, 4:15 PM IST

couple
ಷಣ್ಮುಖಪ್ಪ ಕಾರಭಾರಿ ಹಾಗೂ ಪತ್ನಿ ಸರೋಜಾ ()

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಮಹಿಳೆಗೆ ಅನ್ಯಾಯ ಮಾಡಿದ ಕಿರಾತಕ ಗಂಡನನ್ನು ಅರೆಸ್ಟ್ ಮಾಡುತ್ತಿಲ್ಲ. ಬದಲಾಗಿ ಆತನಿಗೆ ಸಾಥ್ ನೀಡುತ್ತಿದ್ದಾರೆ ಅಂತಾ ಮಹಿಳೆ ಆರೋಪಿಸಿದ್ದಾರೆ. ನಮಗೆ ನ್ಯಾಯ ಕೊಡಿ ಎಂದು ಪೊಲೀಸರಿಗೆ ಅಂಗಲಾಚುತ್ತಿದ್ದಾರೆ..

ಗದಗ :ವಿದ್ಯಾರ್ಥಿಗಳಿಗೆ ಆದರ್ಶದ ಪಾಠ ಮಾಡುವ ಪ್ರೊಫೆಸರ್ ವೊಬ್ಬರು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಗಂಡು ಮಗು ಜನಿಸಿಲ್ಲ ಎಂಬ ಕಾರಣಕ್ಕೆ ಪ್ರೀತಿ ಮಾಡಿ ಮದುವೆಯಾದ ಪತ್ನಿಗೆ ಮೋಸ ಮಾಡಿ 2ನೇ ಮದುವೆಯಾಗಿದ್ದಾರೆ.

ಗಂಡನ ಈ ಮೋಸದಿಂದ ಕಂಗೆಟ್ಟ ಮೊದಲ ಪತ್ನಿ ಮೂವರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡರೂ ಯಾವುದೇ ಕ್ರಮ ಜರುಗಿಸದೆ ಸುಮ್ಮನಾಗಿದ್ದಾರೆ.

ಆರೋಪಿ ಹೆಸರು ಷಣ್ಮುಖಪ್ಪ ಕಾರಭಾರಿ. ಇವರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಕಳೆದ 10 ವರ್ಷಗಳ ಹಿಂದೆ ತಾಲೂಕಿನ ಅಡವಿ ಸೋಮಾಪುರ ತಾಂಡಾದ ಸರೋಜಾ ಎನ್ನುವ ಮಹಿಳೆಯನ್ನ ಪ್ರೀತಿಸುವಂತೆ ದುಂಬಾಲು ಬಿದ್ದು ಮದುವೆಯಾಗಿದ್ದಾರೆ. ತಂದೆ-ತಾಯಿಗೆ ಸರೋಜಾ ಒಬ್ಬಳೇ ಹೆಣ್ಣು ಮಗಳು ಆಗಿದ್ದರಿಂದ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ.

ಪ್ರೀತಿಸಿದವಳಿಗೆ ಕೈಕೊಟ್ಟ ಪ್ರೊಫೆಸರ್ ಕುರಿತು ಮಹಿಳೆ ತಂದೆ ಮಾತನಾಡಿದ್ದಾರೆ..

ಮದುವೆ ಸಮಯದಲ್ಲಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದಾರೆ. ನಂತರ ಆರೇಳು ವರ್ಷ ಸುಂದರ ಸಂಸಾರ ಮಾಡಿದ್ದಾರೆ. ಈ ವೇಳೆ ದಂಪತಿಗೆ ಮೂವರು ಮುದ್ದಾದ ಹೆಣ್ಣು ಮಕ್ಕಳು ಜನಿಸಿವೆ. ಆದರೆ, ಷಣ್ಮುಖಪ್ಪ ಕಾರಭಾರಿ ಮಾತ್ರ ತನಗೆ ಗಂಡು ಮಕ್ಕಳು ಬೇಕು ಎಂದು ನಿತ್ಯ ಕುಡಿದು ಬಂದು ಪತ್ನಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಹೀಗಿದ್ದರೂ ಪತ್ನಿ ಕಿರುಕುಳ ಸಹಿಸಿಕೊಂಡು ಜೀವನ ನಡೆಸಿದ್ದಾರೆ. ಆದರೆ, ಈಗ ಗಂಡು ಮಗುವಿಗಾಗಿ ಇನ್ನೊಂದು ಮದುವೆ ಮಾಡಿಕೊಂಡಿದ್ದಾನೆ ಎನ್ನುವ ಸತ್ಯ ಸರೋಜಾ ಅವರಿಗೆ ಗೊತ್ತಾಗಿದೆ. ಇದರಿಂದಾಗಿ ಗಂಡನ ವಿರುದ್ಧ ಸಿಡಿದು ಬಿದ್ದ ಪತ್ನಿ, ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. 10 ವರ್ಷ ಸಂಸಾರ ಮಾಡಿದ ಗಂಡನ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಮಹಿಳೆಗೆ ಅನ್ಯಾಯ ಮಾಡಿದ ಕಿರಾತಕ ಗಂಡನನ್ನು ಅರೆಸ್ಟ್ ಮಾಡುತ್ತಿಲ್ಲ. ಬದಲಾಗಿ ಆತನಿಗೆ ಸಾಥ್ ನೀಡುತ್ತಿದ್ದಾರೆ ಅಂತಾ ಮಹಿಳೆ ಆರೋಪಿಸಿದ್ದಾರೆ. ನಮಗೆ ನ್ಯಾಯ ಕೊಡಿ ಎಂದು ಪೊಲೀಸರಿಗೆ ಅಂಗಲಾಚುತ್ತಿದ್ದಾರೆ.

ಈ ಪ್ರೊಫೆಸರ್ ಅಡವಿ ಸೋಮಾಪುರ ತಾಂಡಾದ ನಾಯಕ. ಇಡೀ ಗ್ರಾಮದಲ್ಲಿ ಏನಾದ್ರು ಆದರೆ ಇದೇ ಷಣ್ಮುಖಪ್ಪ ನ್ಯಾಯ ಪಂಚಾಯ್ತಿ ಮಾಡುತ್ತಾನೆ. ಆದರೆ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡುವ ಪ್ರೊಫೆಸರ್ ಗಂಡು ಮಕ್ಕಳು ಹುಟ್ಟಿಲ್ಲ ಎಂದು 2ನೇ ಮದುವೆಯಾಗಿರುವುದು ಯಾವ ನ್ಯಾಯ? ಎಂದು ಜನ ಪ್ರಶ್ನಿಸಿದ್ದಾರೆ.

ಷಣ್ಮುಖಪ್ಪ ಪ್ರೊಫೆಸರ್ ಹುದ್ದೆಗೆ ನೇಮಕ ಆಗುವಾಗ, ಮಾವ ಲಕ್ಷಾಂತರ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ಅಳಿಯನಿಗೆ ನೀಡಿದ್ದಾರೆ. ಮದುವೆ ಸಮಯದಲ್ಲಿ ಚಿನ್ನ, ಹಣ ಹಾಗೂ ಒಂದು ಸೈಟ್ ಕೂಡ ನೀಡಿದ್ದಾರೆ. ಒಬ್ಬಳೇ ಮಗಳು ಎಂದು ಸರೋಜಾ ಪೋಷಕರು ಎಲ್ಲವನ್ನು ಮಗಳ ಗಂಡನಿಗೆ ತ್ಯಾಗ ಮಾಡಿದ್ದಾರೆ.

ಆದರೆ, ಮುದ್ದಾದ ಮೂರು ಮಕ್ಕಳು ಹಾಗೂ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಬಿಟ್ಟು ಗಂಡು ಮಗು ಬೇಕು ಅಂತಾ ಈಗ ಇನ್ನೊಬ್ಬಳ ಜೊತೆ ಮದುವೆಯಾಗಿದ್ದಾನೆ. ಇಂತಹ ನೀಚನಿಂದ ನನ್ನ ಮಗಳಿಗೆ ಅನ್ಯಾಯವಾಗಿದೆ. ನನ್ನ ಮಗಳಿಗೆ ಬಂದ ಸ್ಥಿತಿ ಬೇರೆ ಯಾವ ಹೆಣ್ಣು ಮಗಳಿಗೂ ಬಾರದಿರಲಿ. ಹಾಗಾಗಿ, ನಮಗೆ ನ್ಯಾಯ ಕೊಡಿಸಿ ಎಂದು ಸರೋಜಾ ತಂದೆ ಒತ್ತಾಯ ಮಾಡಿದ್ದಾರೆ.

ಓದಿ:ಮೂರು ಮಹಾನಗರ ಪಾಲಿಕೆ ಫಲಿತಾಂಶ ತೃಪ್ತಿದಾಯಕವಾಗಿದೆ: ಮಾಜಿ ಸಿಎಂ ಬಿಎಸ್​ವೈ

ABOUT THE AUTHOR

...view details