ಕರ್ನಾಟಕ

karnataka

ಚಿನ್ನಾಭರಣಗಳಿಂದ ಶೃಂಗಾರಗೊಂಡ 'ಸರ್ಕಾರಿ ರತಿ-ಕಾಮಣ್ಣ'.. ಇದರ ವೈಶಿಷ್ಟ್ಯ ಹಿಂಗಿದೆ..

By

Published : Mar 22, 2022, 6:08 PM IST

ಚಿನ್ನಾಭರಣಗಳಿಂದ ಶೃಂಗಾರಗೊಂಡ ರತಿ- ಕಾಮಣ್ಣ. ಇಷ್ಟಾರ್ಥ ಸಿದ್ಧಿಗಾಗಿ ಸಾಲು ಸಾಲಾಗಿ ನಿಂತ ದಂಪತಿ. ಕೆ.ಜಿಗಟ್ಟಲೇ ಚಿನ್ನಾಭರಣ ಹಾಕಿ ಹರಕೆ ತೀರಿಸುತ್ತಿರುವ ಭಕ್ತರು. ಈ ದೃಶ್ಯ ಕಂಡು ಬಂದದ್ದು, ಗದಗದ ಕಿಲ್ಲಾ ಕಾಮಣ್ಣನ ಉತ್ಸವದಲ್ಲಿ..

Holi festival celebrate in  gadag
ಚಿನ್ನಾಭರಣಗಳಿಂದ ಶೃಂಗಾರಗೊಂಡ ಸರ್ಕಾರಿ ರತಿ-ಕಾಮಣ್ಣ

ಗದಗ :ಯುವತಿಯರಿಗೆ ಕಂಕಣ ಭಾಗ್ಯ, ಮಹಿಳೆಯರಿಗೆ ಸಂತಾನ ಭಾಗ್ಯ, ಬೇಡಿದವರಿಗೆ ಬಯಸಿದ ಭಾಗ್ಯ. ಅರೇ ಇದೇನಪ್ಪ ಸರ್ಕಾರ ಹೊಸ ಭಾಗ್ಯಗಳೇನಾದ್ರೂ ಘೋಷಣೆ ಮಾಡಿದ್ಯಾ ಅಂತಾ ಯೋಚಿಸಬೇಡಿ. ಇದು ಸರ್ಕಾರದ ಭಾಗ್ಯವಲ್ಲ.‌‌‌ ನಂಬಿದ ಭಕ್ತರಿಗೆ ಬಂಗಾರದ ರತಿ, ಕಾಮಣ್ಣ ನೀಡುವ ಭಾಗ್ಯಗಳಂತೆ.

ಗದಗದಲ್ಲಿ ಕಿಲ್ಲಾ ಕಾಮಣ್ಣ ಉತ್ಸವ..

ಈ ಬಂಗಾರದ, ಸರ್ಕಾರಿ ರತಿ ಕಾಮಣ್ಣ ಇರುವುದು ಗದಗದಲ್ಲಿ. ಸಾಮಾನ್ಯವಾಗಿ ಹೋಳಿ ಹಬ್ಬ ಅಂದ್ರೆ ರತಿ-ಕಾಮಣ್ಣರನ್ನು ನೋಡಿರ್ತೀವಿ. ಆದ್ರೆ, ಇದು ಬ್ರಿಟಿಷ್ ಕಾಮಣ್ಣ, ಸರ್ಕಾರಿ ಕಾಮಣ್ಣ ಎಂದೇ ಖ್ಯಾತಿ. ಇವರು ಅಂತಿಂಥವರಲ್ಲ.

ಭಕ್ತರ ಬೇಡಿಕೆ ಈಡೇರಿಸುವವರಂತೆ. ಇಲ್ಲಿಯ ಮನೆಯಲ್ಲಿ ಚಿನ್ನಾಭರಣ ಹಾಕಿ ಹರಕೆ ಹೊತ್ತು ಹೋದರೆ ಸಾಕು ವರ್ಷದೊಳಗೆ ಇಷ್ಟಾರ್ಥ ಸಿದ್ಧಿಯಾಗುವುದು ಗ್ಯಾರಂಟಿಯಂತೆ. ಇದು ಗದಗ ನಗರದ ಕಿಲ್ಲಾ ಓಣಿಯ ರತಿ-ಕಾಮಣ್ಣರ ವಿಶೇಷವಂತೆ.

ನಗರದ ಐತಿಹಾಸಿಕ ತ್ರಿಕೂಟೇಶ್ವರ ದೇವಾಲಯದ ಉತ್ತರ ಮಹಾದ್ವಾರದಲ್ಲಿ ರತಿ-ಕಾಮಣ್ಣರ ಹಬ್ಬವನ್ನು ಸಂಭ್ರಮದಿಂದ ಆಚರಿಸ್ತಾರೆ. ಹೋಳಿ ಹುಣ್ಣಿಮೆ ಸಮಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ರತಿ-ಕಾಮಣ್ಣರ ಶೃಂಗಾರ ನೋಡುವುದೇ ಕಣ್ಣಿಗೆ ಹಬ್ಬ.

ಇದು ರಾಜ್ಯದಲ್ಲೇ ಪ್ರಸಿದ್ದಿ ಹೊಂದಿದೆ. ಸುಮಾರು 157 ವರ್ಷಗಳಿಂದ ಇಲ್ಲಿ ರತಿ-ಕಾಮಣ್ಣರ ಉತ್ಸವ ಮೂರ್ತಿಗಳನ್ನು ಹೋಳಿ ಹುಣ್ಣಿಮೆಯ ದಿನ ಪ್ರತಿಷ್ಠಾಪಿಸಲಾಗುತ್ತದೆ.

ಚಿನ್ನಾಭರಣಗಳಿಂದ ಶೃಂಗಾರ :ರಂಗ ಪಂಚಮಿ ದಿನದವರೆಗೆ ಪ್ರತಿಷ್ಠಾಪನೆಗೊಳ್ಳಲಿರುವ ಕಾಮಣ್ಣ-ರತಿಯರಲ್ಲಿ ಭಕ್ತಿಯಿಂದ ನಡೆದುಕೊಳ್ಳುವ ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರಾರ್ಥಿಸುತ್ತಾರೆ. ಮದುವೆ ವಿಳಂಬವಾದ ಯುವತಿಯರು ಕಾಮಣ್ಣನ ಕೈಗೆ ಅರಿಶಿಣದ ಕಂಕಣ ಕಟ್ಟಿ ಕಂಕಣ ಭಾಗ್ಯ ಕರುಣಿಸೆಂದು ಬೇಡಿಕೊಳ್ಳುತ್ತಾರೆ. ಅಲ್ಲದೇ ಸಂತಾನ ಭಾಗ್ಯಕ್ಕಾಗಿ ಮಹಿಳೆಯರು ರತಿಗೆ ಉಡಿ ತುಂಬಿ ಚಿನ್ನಾಭರಣಗಳಿಂದ ಶೃಂಗರಿಸಿ ಪ್ರಾರ್ಥಿಸುತ್ತಾರೆ.

ರಂಗ ಪಂಚಮಿಯ ಹಿಂದಿನ ದಿನ ಮನೆಯಲ್ಲಿದ್ದ ಚಿನ್ನಾಭರಣವನ್ನು ರತಿ ಕಾಮಣ್ಣನ ಮೈಮೇಲೆ ಅಂದಾಜು 25 ಕೆಜಿಯಷ್ಟು ಆಭರಣಗಳನ್ನು ಹಾಕಿ ಶೃಂಗರಿಸಲಾಗುತ್ತದೆ. ಕಾಮನ ಮೈಮೇಲೆಯೂ ಪುರುಷರು ಧರಿಸುವ ಕೆಲವು ಆಭರಣಗಳನ್ನು ಹಾಕಿ ಶೃಂಗಾರ ಮಾಡಲಾಗುತ್ತದೆ.

ಈ ಬಂಗಾರದ ಆಭರಣಗಳನ್ನು ಭಕ್ತರು ಸ್ವಯಂ ಪ್ರೇರಣೆಯಿಂದಲೇ ತಂದು ಕೊಡುತ್ತಾರೆ. ಆಭರಣಗಳ ಮೇಲೆ ಅವರ ಹೆಸರಿನ ಚೀಟಿ ಬರೆದು ರತಿಯ ಮೈಮೇಲೆ ಹಾಕಲಾಗುತ್ತದೆ.

'ಸರ್ಕಾರಿ ರತಿ-ಕಾಮಣ್ಣ':ರಂಗ ಪಂಚಮಿಯ ದಿನ ರಾತ್ರಿ ಉತ್ಸವ ಮೂರ್ತಿಗಳ ಮೆರವಣಿಗೆ ಮುಗಿದ ಮೇಲೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ. ಈ ಪ್ರದೇಶದಲ್ಲಿ ಈ ಹಿಂದೆ ಸರ್ಕಾರಿ ಕಚೇರಿಗಳು ಇದ್ದುದರಿಂದ ಪೊಲೀಸ್ ಹಾಗೂ ಕಂದಾಯ ಇಲಾಖೆ ನೌಕರರು ಕೂಡ ಈ ಉತ್ಸವದಲ್ಲಿ ಭಾಗವಹಿಸುತ್ತಿದ್ದ ಕಾರಣದಿಂದ ಇದು ಸರ್ಕಾರಿ ಕಾಮಣ್ಣ ಎಂದೇ ಪ್ರಸಿದ್ಧಿಯಾಗಿದೆಯಂತೆ.

ಕಾಮಣ್ಣ-ರತಿಯರ ಸಂಭ್ರಮ ನೋಡಲು ಗದಗ ನಗರ ಮಾತ್ರವಲ್ಲ ಧಾರವಾಡ, ಹಾವೇರಿ, ಬಾಗಲಕೋಟೆ ಸೇರಿ ವಿವಿಧ ಜಿಲ್ಲೆಯಿಂದ ಭಕ್ತರು ಆಗಮಿಸುತ್ತಾರೆ. ಗದಗ ನಗರಕ್ಕೆ ಇನ್ನೂ ರೈಲ್ವೆ ಮಾರ್ಗ ನಿರ್ಮಾಣವಾಗದಿದ್ದ ಕಾಲದಲ್ಲೇ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲಾವಿದರಿಂದ ಈ ಉತ್ಸವ ಮೂರ್ತಿಗಳನ್ನು ಮಾಡಿಸಿಕೊಂಡು ತರಲಾಗಿದೆ. ಅಂದಿನಿಂದ ಇಂದಿನವರೆಗೂ ಈ ಮೂರ್ತಿಗಳನ್ನು ಬದಲಾವಣೆ ಮಾಡಿಲ್ಲ. ಶತಮಾನ ಇತಿಹಾಸ ಹೊಂದಿರುವ ಮೂರ್ತಿಗಳು ಇಂದಿಗೂ ನಳನಳಿಸುತ್ತಿರುವುದು ವಿಶೇಷ.

ಇದನ್ನೂ ಓದಿ:ಶೌಚಾಲಯ ನಿರ್ಮಾಣದಲ್ಲಿ ಗೋಲ್​ಮಾಲ್ : ಹೆಸರಿಗೆ ಮಾತ್ರ ಬಯಲು ಶೌಚ ಮುಕ್ತ ಗ್ರಾಮ!

ABOUT THE AUTHOR

...view details