ಗದಗ:ನಗರದ ಆಟೋ ಚಾಲಕರೊಬ್ಬರು ತಮ್ಮ ವಾಹನದಲ್ಲಿ ಮರೆತು ಬಿಟ್ಟು ಹೋಗಿದ್ದ ಸುಮಾರು 80 ಗ್ರಾಂ ಚಿನ್ನ ಒಳಗೊಂಡ ಬ್ಯಾಗ್ ಅನ್ನು ಮರಳಿ ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಘಟನೆಯ ವಿವರ:
ಗದಗ:ನಗರದ ಆಟೋ ಚಾಲಕರೊಬ್ಬರು ತಮ್ಮ ವಾಹನದಲ್ಲಿ ಮರೆತು ಬಿಟ್ಟು ಹೋಗಿದ್ದ ಸುಮಾರು 80 ಗ್ರಾಂ ಚಿನ್ನ ಒಳಗೊಂಡ ಬ್ಯಾಗ್ ಅನ್ನು ಮರಳಿ ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಘಟನೆಯ ವಿವರ:
ದಾವಣಗೆರೆ ಮೂಲದ ವೀಣಾ ಕೊಣ್ಣೂರ ಎಂಬವರು ನಿನ್ನೆ ಮಧ್ಯಾಹ್ನದ ವೇಳೆಗೆ ಗದಗ್ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಗರದ ಹಳೆ ಬಸ್ ನಿಲ್ದಾಣದಿಂದ ಬೆಟಗೇರಿಗೆ ವೀರಣ್ಣ ಯಾವಗಲ್ ಎಂಬವರ ಆಟೋ ಹತ್ತಿ ಹೊರಟಿದ್ದಾರೆ. ಬೆಟಗೇರಿಗೆ ಬಂದ ನಂತರ ತಾವು ತಂದಿದ್ದ ಬ್ಯಾಗ್ ಮರೆತು ಹಾಗೇ ಇಳಿದು ಹೋಗಿದ್ದರು. ಇನ್ನೊಂದೆಡೆ, ಆಟೋ ಚಾಲಕನೂ ಗಮನಿಸದೇ ಬೇರೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಸಾಗಿದ್ದಾನೆ.
ಇದಾದ ಕೆಲವು ಹೊತ್ತಿಗೆ ಮಹಿಳೆಗೆ ತನ್ನ ಬ್ಯಾಗ್ ಆಟೋದಲ್ಲಿ ಉಳಿದಿರುವುದು ನೆನಪಾಗಿದೆ. ಆ ಆಟೋಗಾಗಿ ಅನೇಕ ಕಡೆ ಹುಡುಕಾಡಿದರೂ ಸಿಗಲಿಲ್ಲ. ಇದೇ ಹೊತ್ತಿಗೆ ಶಹರಾ ಪೊಲೀಸ್ ಠಾಣೆಯಿಂದ ಕರೆ ಬಂದಿದ್ದು, ನಿಮ್ಮ ಬ್ಯಾಗ್ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಟೋ ಚಾಲಕ ವೀರಣ್ಣ ಬ್ಯಾಗನ್ನು ನೇರವಾಗಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಮಾಲೀಕರಿಗೆ ಒಪ್ಪಿಸುವ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವೀರಣ್ಣ, "ಇದು ನಾನು ನನ್ನ ತಂಗಿಗೆ ಕೊಟ್ಟ ರಕ್ಷಾಬಂಧನದ ಉಡುಗೊರೆ" ಎಂದು ಸಂತಸ ವ್ಯಕ್ತಪಡಿಸಿದರು.
ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಪೊಲೀಸರು, ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಈ ಹಿಂದೆಯೂ ವೀರಣ್ಣ ಇಂತಹ ಪ್ರಾಮಾಣಿಕ ಕೆಲಸ ಮಾಡಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.