ಕರ್ನಾಟಕ

karnataka

ಮಹಾತ್ಮ ಗಾಂಧೀಜಿಯವರನ್ನೇ ಕೊಂದವರಿವರು, ಆರ್​ಎಸ್​ಎಸ್​ನವರು ಈ ರೀತಿ ಹೇಳಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

By

Published : Feb 16, 2023, 1:36 PM IST

Updated : Feb 16, 2023, 4:08 PM IST

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಅಶ್ವತ್ಥನಾರಾಯಣ್​ ಅವರು ನೀಡಿರುವ ಹೇಳಿಕೆಗೆ ಕಾಂಗ್ರೆಸ್​ ನಾಯಕರು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Siddaramayya and Saleem Ahmad
ಸಿದ್ದರಾಮಯ್ಯ ಹಾಗೂ ಸಲೀಂ ಅಹ್ಮದ್​

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಹುಬ್ಬಳ್ಳಿ:ಹೊಡಿ, ಬಡಿ, ಕಡಿ ಅನ್ನೋದು ಬಿಜೆಪಿ ಸಂಸ್ಕೃತಿ. ಮಹಾತ್ಮ ಗಾಂಧೀಜಿಯವರನ್ನೇ ಕೊಂದವರು ಇವರು. ಆರ್​ಎಸ್​ಎಸ್​ನವರು ಸಚಿವ ಅಶ್ವತ್ಥನಾರಾಯಣ್​ ಬಾಯಿಯಿಂದ ಹೀಗೆ ಹೇಳಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಡಾ ಅಶ್ವತ್ಥನಾರಾಯಣ್​ ಅವರ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಅಶ್ವತ್ಥನಾರಾಯಣ್​ ಅವರು ಸಿದ್ದರಾಮಯ್ಯ ಅವರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿದ ವಿಚಾರಕ್ಕೆ ಮಾತನಾಡಿದ ಅವರು, ರಾಜ್ಯದಲ್ಲಿ ಚರ್ಚೆಯಾಗಬೇಕಿರುವುದು ಅಭಿವೃದ್ಧಿ ವಿಚಾರ. ರೈತರ, ಬಡವರ ದಲಿತರು ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು. ಅದನ್ನು ಬಿಟ್ಟು ಇಂತಹ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಹುಟ್ಟಿಸುತ್ತಿದ್ದಾರೆ. ಇವರು ಚುನಾವಣಾ ಪ್ರಣಾಳಿಕೆಯಲ್ಲಿ ಬೇಕಿದ್ದರೆ, ಈ ಚುನಾವಣೆ ಟಿಪ್ಪು ವರ್ಸಸ್ ಸಾವರ್ಕರ್ ನಡುವೆ ಎಂದು ಬರೆದುಕೊಳ್ಳಲಿ. ಈ ಬಗ್ಗೆ ಜನ ತೀರ್ಮಾನ ಮಾಡಲಿ. ಜನ ಇಂತಹದಕ್ಕೆಲ್ಲ ಪ್ರೋತ್ಸಾಹ ಕೊಡೋಕೆ ಆಗುತ್ತಾ..? ಎಂದು ಪ್ರಶ್ನಿಸಿದ್ದಾರೆ.

ಸಿದ್ಧರಾಮಯ್ಯನನ್ನು ಮುಗಿಸಲಿ ಎಂದರೆ ಏನರ್ಥ, ಎಲ್ಲರೂ ಇದನ್ನು ಖಂಡಿಸಬೇಕು. ಒಬ್ಬ ಸಚಿವನಾಗಿ ಈ ರೀತಿ ಹೇಳಿಕೆ ಕೊಡೋದು ಎಷ್ಟರ ಮಟ್ಟಿಗೆ ಸರಿ. ಪ್ರಜೆಗಳಿಗೆ ರಕ್ಷಣೆ ಕೊಡೋದು ಸಚಿವರು ಹಾಗೂ ಸರ್ಕಾರದ ಜವಾಬ್ದಾರಿ. ಟಿಪ್ಪುವನ್ನು ಮುಗಿಸಿದ ಹಾಗೆ ಸಿದ್ಧರಾಮಯ್ಯನನ್ನು ಮುಗಿಸಿ ಎಂದರೆ ಏನರ್ಥ. ಪೊಲೀಸರು ಇದನ್ನು ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು. ಪ್ರಧಾನಿ, ಅಮಿತ್ ಶಾ ಹೇಳಲಿ ಇದು ಸರೀನಾ ಅಂತಾ. ಸಿದ್ಧರಾಮಯ್ಯನನ್ನು ರಕ್ಷಿಸಬೇಕಾದವರೇ ಮುಗಿಸಿ ಅಂತಾ ಕರೆ ಕೊಟ್ಟರೆ ಏನರ್ಥ? ನಾನು ದೂರು ಕೊಡೋಕೆ ಹೋಗಲ್ಲ ಎಲ್ಲ ಸರ್ಕಾರಕ್ಕೆ ಬಿಟ್ಟಿದ್ದೇನೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮ್ಮದ್​

ಹೊಡಿ, ಬಡಿ ಎಂದು ಪ್ರಚೋದಿಸುವ ಅಶ್ವತ್ಥನಾರಾಯಣರನ್ನು ಕೂಡಲೇ ಬಂಧಿಸಬೇಕು- ಸಲೀಂ ಅಹಮ್ಮದ್:ಅಶ್ವತ್ಥನಾರಾಯಣರನ್ನು ಕೂಡಲೇ ಬಂಧಿಸಬೇಕು. ಅವರಿಗೆ ನಾಚಿಕೆಯಾಗಬೇಕು. ಸಂವಿಧಾನದ ಮೇಲೆ ವೋಟ್ ತೆಗೆದುಕೊಳ್ಳುತ್ತಾರೆ. ಒಬ್ಬ ಮಂತ್ರಿಯಾಗಿ ಈ ರೀತಿ ಮಾತನಾಡುವುದು ಅವರ ಬದ್ಧತೆಯನ್ನು ತೋರಿಸುತ್ತದೆ. ಹೊಡಿ, ಬಡಿ ಸರ್ಕಾರ ಬಿಜೆಪಿಯದ್ದು ಎಂದು ಸಿದ್ದರಾಮಯ್ಯ ವಿರುದ್ಧ ಅಶ್ವತ್ಥನಾರಾಯಣ ಅವರ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಈ ಸರ್ಕಾರದ ಆಯಸ್ಸು ಕೇವಲ 60 ದಿನ. 60 ದಿನ ಆದ ಮೇಲೆ ಸರ್ಕಾರ ಹೋಗುತ್ತೆ. ಹೀಗಾಗಿ ಅವರು ಹುಚ್ಚುಚ್ಚಾಗಿ ಮಾತಾಡುತ್ತಿದ್ದಾರೆ. ಅಶ್ವತ್ಥನಾರಾಯಣ್​ ಅವರದ್ದು ಎಲುಬಿಲ್ಲದ ನಾಲಿಗೆ. ಬಾಯಿಗೆ ಬಂದಂತೆ ಮಾತಾಡ್ತಾರೆ. ಮೋದಿ ನೂರು ಸಲ ರಾಜ್ಯಕ್ಕೆ ಬಂದು ಹೋದರೂ, ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಇದು ಬಿಜೆಪಿ ಪಕ್ಷ ಅಲ್ಲ, ಭ್ರಷ್ಟಾಚಾರ ಜನತಾ ಪಾರ್ಟಿ, ಬ್ರೋಕರ್ ಜನತಾ ಪಾರ್ಟಿ ಎಂದು ಸಲೀಂ ಅಹ್ಮದ್​ ಕಿಡಿಕಾರಿದರು.

ಇನ್ನು, ರೈತರಿಗೆ ಪರಿಹಾರ ಕೊಡುವ ಯೋಗ್ಯತೆ ಇವರಿಗಿಲ್ಲ. ಅದನ್ನು ಬಿಟ್ಟು ಟಿಪ್ಪು, ಸಾವರ್ಕರ್ ಬೇಕಾ ಎಂದು ಮಾತಾಡ್ತೀದ್ದಾರೆ. ಇದು ಭ್ರಷ್ಟಾಚಾರದಲ್ಲಿ ಉದಯವಾದ ಪಾರ್ಟಿ, ಭ್ರಷ್ಟಾಚಾರದಲ್ಲಿ ಮುಳುಗಿದೆ. ಭಾವನಗೆಳಿಂದ ಸಮಾಜ ಒಡೆಯೋ ಕೆಲಸ‌ ಮಾಡುತ್ತಿದ್ದಾರೆ. ಇವರು ಏನೇ ಮಾಡಲಿ‌ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು, ಅಧಿಕಾರಕ್ಕೆ ಬರುತ್ತೆ. ರಾಜ್ಯದಲ್ಲಿ ನಾವು 150 ಸೀಟ್ ಗೆಲ್ತೀವಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮೀರ್ ಸಾದಿಕ್ ವಂಶಸ್ಥರು:ಅಶ್ವತ್ಥ ನಾರಾಯಣ ಹಾಗೂ ಬಿಜೆಪಿಯವರು ಮೀರ್ ಸಾದಿಕ್ ವಂಶಸ್ಥರು ಎಂದು ಯು.ಟಿ.ಖಾದರ್ ವಾಗ್ದಾಳಿ ನಡೆಸಿದರು. ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನೇರಾನೇರವಾಗಿ ಹೋರಾಟ ಮಾಡುವ ಕುರಿತು ಚರ್ಚಿಸಲು ಇವರಿಗೆ ಧೈರ್ಯ ಇಲ್ಲ. ಗಾಂಧೀಜಿಯ ಕೊಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಗೋಡ್ಸೆ ವಂಶಸ್ಥರು ಅಶ್ವತ್ಥ ನಾರಾಯಣ. ಇವರು ಹೊಡೆದು ಹಾಕಲು ನೋಡಿದರೆ, ಕಾಂಗ್ರೆಸ್ ನಾಯಕರನ್ನು ಜನರೇ ಮೂರನೇ ಮಹಡಿಗೆ ತಂದು ಕೂರಿಸ್ತಾರೆ. ರಾಜ್ಯದ ಜನರೇ ಇವರಿಗೆ ಉತ್ತರವನ್ನೂ ಕೊಡ್ತಾರೆ ಎಂದರು.

ಈ ರೀತಿ ಹೇಳಿಕೆ ಕೊಡಬಾರದು:ಟಿಪ್ಪು ಸುಲ್ತಾನ್‌ನನ್ನು ಯಾವ ರೀತಿ ಕಡೆಗಣಿಸಿದ್ದರೋ, ಇವರನ್ನೂ ಅದೇ ರೀತಿ ಕಡೆಗಣಿಸ್ತಾರೆ. ಸಿದ್ದರಾಮಯ್ಯ ಮೇಲಿಂದ ಮೇಲೆ ಟಿಪ್ಪು ಬಗ್ಗೆ ಮಾತನಾಡ್ತಾರೆ. ಟಿಪ್ಪು ಹಿಂದೂಗಳ ಕಗ್ಗೊಲೆ ಮಾಡಿದ್ದಾರೆ. ಅವನನ್ನು ಕಾಂಗ್ರೆಸ್ ಆದರ್ಶ ಮಾಡಿಕೊಂಡರೆ ಕಾಂಗ್ರೆಸ್​ನ್ನು ಸ್ಮಶಾನಕ್ಕೆ ಕೊಂಡೊಯ್ಯಬೇಕಾಗುತ್ತೆ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಇದ್ದೇ ಇರುತ್ತೆ. ಹತ್ಯೆ ಮಾಡುವ ವಿಚಾರ ಯಾರೂ ಮಾತನಾಡಬಾರದು ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದರು.

ಇಂತಹ ಶಬ್ದಗಳು ರಾಜಕಾರಣಕ್ಕೆ ಶೋಭೆ ತರುವುದಿಲ್ಲ. ಹಿಂದೆ ನನಗೂ ಒಬ್ಬ ಗೋ ಹತ್ಯೆ ಕಾಯ್ದೆ ತಂದರೆ, ಬಿಜಾಪುರ ಶಾಸಕನನ್ನು ಹತ್ಯೆ ಮಾಡ್ತೀನಿ ಅಂತ ಧಮಕಿ ಹಾಕಿದ್ದ. ಸಿದ್ಧಾಂತ ಬಗ್ಗೆ ಎಷ್ಟೇ ಮಾತನಾಡಲಿ, ಏನೇ ಮಾತನಾಡಲಿ. ವ್ಯಕ್ತಿಯನ್ನು ಹತ್ಯೆ ಮಾಡುವ ಬಗ್ಗೆ ಮಾತನಾಡೋದು ಯಾರಿಗೂ ಶೋಭೆ ತರುವುದಿಲ್ಲ ಎಂದರು.

ಇದನ್ನೂ ಓದಿ:ರಾಜಕೀಯ ನೆಲೆಯಲ್ಲಿ ಹೇಳಿದ ಮಾತುಗಳು, ಸಿದ್ದರಾಮಯ್ಯರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ಸಚಿವ ಅಶ್ವತ್ಥನಾರಾಯಣ್​

Last Updated :Feb 16, 2023, 4:08 PM IST

ABOUT THE AUTHOR

...view details