ಕರ್ನಾಟಕ

karnataka

ದ್ವೇಷಕ್ಕೆ ಎರಡು ಜೀವಗಳು ಬಲಿ: ಅನಾಥವಾದ ಮುದ್ದು ಕಂದಮ್ಮಗಳು, ಶವಕ್ಕಾಗಿ ಪೈಪೋಟಿ

By

Published : Sep 29, 2022, 6:45 PM IST

Updated : Sep 29, 2022, 10:15 PM IST

ದೀಪಕ್​ ಮತ್ತು ಪುಷ್ಪಾ ಮನೆಯವರ ವಿರೋಧದ ನಡುವೆ ಮದುವೆಯಾಗಿ ಸುಂದರ ಸಂಸಾರ ಕಟ್ಟಿಕೊಂಡಿದ್ದರು. ತಮ್ಮನ್ನು ಅವಮಾನಿಸಿದವರ ಎದುರು ತೆಲೆ ಎತ್ತಿ ಬಾಳಬೇಕು ಎಂದು ಸಮಾಜದಲ್ಲಿ ಉನ್ನತ ಸ್ಥಾನಮಾನ ಸಹ ಪಡೆದುಕೊಂಡಿದ್ದರು. ಈಗ‌ ಇದೇ ಅವರ ಬದುಕನ್ನು ಕಸಿದುಕೊಂಡಿದೆ. ದ್ವೇಷ ಎಂಬ ಬೆಂಕಿಯ ಕೆನ್ನಾಲಿಗೆ ಇಬ್ಬರನ್ನು ಬಲಿ ತೆಗೆದುಕೊಂಡಿದ್ದು, ಏನು ಅರಿಯದ ಪುಟ್ಟ ಕಂದಮ್ಮಗಳು ಈಗ ತಬ್ಬಲಿಯಾಗಿವೆ.

ದ್ವೇಷಕ್ಕೆ ಎರಡು ಜೀವಗಳು ಬಲಿ
ದ್ವೇಷಕ್ಕೆ ಎರಡು ಜೀವಗಳು ಬಲಿ

ಹುಬ್ಬಳ್ಳಿ:ಕೈ ಮುಗಿದು ಬೇಡಿಕೊಳ್ಳುವೆ ಮತ್ತೆ ಎದ್ದು ಬಾ ಅಮ್ಮ ಎನ್ನುವ ಮುಗ್ಧ ಮನದ ಆಕ್ರಂದನ. ಬದುಕಿದ್ದಾಗ ಮಗಳು ಹಾಗೂ ಆಕೆಯ ಕುಟುಂಬದ ಎದುರು ಹಗೆ ತೋರಿಸಿ ಸತ್ತಾಗ ಮಗಳ ಮೃತದೇಹದ ಮುಂದೆ ಕಣ್ಣೀರು ಹಾಕುತ್ತಿರುವ ಹೆತ್ತವರು. ಒಂದು ಕಡೆ ಅಣ್ಣ ಹೋದ ಮತ್ತೊಂದು ಕಡೆ ಅತ್ತಿಗೆಯೂ ಹೋದರು ಯಾರಿಗೆ ದುಃಖ ಹೇಳಿಕೊಳ್ಳಲಿ ಎಂಬ ಅಸಹಾಯಕ ಸ್ಥಿತಿಯಲ್ಲಿ ನಿಂತಿರುವ ತಮ್ಮ. ಹೌದು, ಇಂತಹ ಮನಕಲಕುವ ದೃಶ್ಯ ಕಿಮ್ಸ್ ಶವಗಾರದ ಮುಂದೆ ನಡೆದಿದ್ದು, ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿತ್ತು.

ಜುಲೈ 4ರಂದು ದೀಪಕ್ ಪಟದಾರಿ ಹತ್ಯೆ: ಗಂಗಿವಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್​ ಪಟಾದರಿ ಪತ್ನಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕಳೆದ ಜುಲೈ 4ರಂದು ದೀಪಕ್ ಪಟದಾರಿಯನ್ನು ರಾಯನಾಳ ಗ್ರಾಮದ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೊಲೆಯ ಹಿಂದೆ ಪುಷ್ಪಾ ತವರು ಮನೆಯವರ ಕೈವಾಡ ಇದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ದ್ವೇಷಕ್ಕೆ ಎರಡು ಜೀವಗಳು ಬಲಿ

ವಿರೋಧದ ನಡುವೆಯೂ ಮದುವೆ: ಬಿಜೆಪಿ ಕಾರ್ಯಕರ್ತ ಮತ್ತು ಗಂಗಿವಾಳ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ರಾಯನಾಳ ಗ್ರಾಮದ ಪ್ರತಿಷ್ಠಿತ ಮೇಟಿ ಕುಟುಂಬದ ಮಗಳು ಪುಷ್ಪಾರನ್ನು ವಿರೋಧದ ನಡುವೆಯೂ ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದೀಪಕ್ ಮತ್ತು ಪುಷ್ಪಾಳಿಗೆ ಎರಡು ಮಕ್ಕಳು ಸಹ ಜನಿಸಿವೆ.‌ ಮತ್ತೊಂದು ಕಡೆ ರಾಜಕೀಯವಾಗಿ ಪ್ರಬಲವಾಗಿ ಬೆಳೆಯುತ್ತಿದ್ದ ದೀಪಕ್, ತನ್ನ ಮಾವನ ಕುಟುಂಬ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದ.

ದೀಪಕ್ ಮೇಲೆ ಮೊದಲೇ ಕೋಪಗೊಂಡಿದ್ದ ಪುಷ್ಪಾ ತವರು ಮನೆಯವರು, ಆತನ ಏಳಿಗೆಯನ್ನು ಸಹಿಸಲಾರದೇ ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ದೀಪಕ್ ಹತ್ಯೆಗೆ ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ, ನಾಗರಾಜ ಮಲ್ಲಪ್ಪ ಹೆಗ್ಗಣ್ಣವರ, ಪ್ರವೀಣ್ ಮುದಲಿಂಗಣ್ಣವರ, ಚಂದ್ರಶೇಖರ ಮುದಲಮಗಣ್ಣವರ, ಮಲ್ಲಿಕಾರ್ಜುನ ಶಂಕ್ರಪ್ಪ ಮೇಟಿ, ಶಿವಪ್ಪ ರೇವಣಪ್ಪ ಮೇಟಿ, ಪರಶುರಾಮ ಬಸಪ್ಪ ಮೇಟಿ, ಯಲ್ಲಪ್ಪ ಬಸಪ್ಪ ಮೇಟಿಎಂಬುವವರೇ ಕಾರಣ ಎಂದು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಸಿಐಡಿಗೆ ವಹಿಸಿದ್ದ ಸರ್ಕಾರ: ನನ್ನ ಗಂಡನ ಕೊಲೆಯಲ್ಲಿ ಪೊಲೀಸರ ಪಾತ್ರವಿದೆ. ಹೀಗಾಗಿ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು ಎಂದು ಪುಷ್ಪಾ ಮತ್ತು ದೀಪಕ್ ತಮ್ಮ ಸಂಜಯ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಈ ನಡುವೆ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಶವಸಂಸ್ಕಾರ ಮಾಡಲು ತವರು ಮನೆಯವರಿಗೆ ಅವಕಾಶ ನೀಡಲಾಗಿದೆ.‌ ಇದು ನಮಗೆ ಮತ್ತೊಂದು ಅನ್ಯಾಯ ಎಂದು ಮೃತಳ ಮೈದುನ ಸಂಜಯ್ ಕಣ್ಣೀರು ಹಾಕಿದ್ದಾರೆ.

ಐದು ತಿಂಗಳ ಗರ್ಭಿಣಿಯಾಗಿದ್ದ ಪುಷ್ಪಾ:ಏಕಾಏಕಿ ನವನಗರದ ಸಂಬಂಧಿಕರ ಮನೆಯಲ್ಲಿ ಪುಷ್ಪಾ ನೇಣಿಗೆ ಶರಣಾಗಿದ್ದಾರೆ. ವಿಪರ್ಯಾಸ ಎಂದರೆ ಪುಷ್ಪಾ ಸದ್ಯ ಐದು ತಿಂಗಳ ಗರ್ಭಿಣಿಯಾಗಿದ್ದರು. ತನ್ನ ಗಂಡನ ಸಾವಿನಿಂದ ಮಾನಸಿಕವಾಗಿ ಕುಗ್ಗಿದ್ದ ಅವರು, ಗಂಡನಿಲ್ಲದೇ ಮೂರು ಮಕ್ಕಳನ್ನು ಸಾಕುವುದು ಹೇಗೆ ಎಂದು ಬಹಳಷ್ಟು ಚಿಂತೆಗೀಡಾಗಿದ್ದರು ಎ‌ನ್ನಲಾಗ್ತಿದೆ.

ದೀಪಕ್ ಕುಟುಂಬದವರ ವಿರುದ್ಧ ದೂರು:ಈ ಬಗ್ಗೆ ತಮ್ಮ ಸ್ನೇಹಿತರ ಜೊತೆ ಚರ್ಚೆ ಸಹ ಮಾಡಿದ್ದರಂತೆ. ಇಷ್ಟು ದಿನ ತಮ್ಮ ಮಗಳು ಮತ್ತು ಗಂಡನ ಕುಟುಂಬದ ಮೇಲೆ ಹಲ್ಲು ಮಸೆಯುತ್ತಿದ್ದ ಪುಷ್ಪಾ ಕಡೆಯವರು ಈಗ ಏಕಾಏಕಿ ದೀಪಕ್ ಮನೆಯವರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎನ್ನಲಾಗ್ತಿದೆ. ಮಗಳ ಸಾವಿಗೆ ದೀಪಕ್ ತಮ್ಮ ಸಂಜಯ್ ಮತ್ತು ಅವರ ತಂದೆ- ತಾಯಿ ಕಾರಣ ಅಂತ ಆರೋಪಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪುಷ್ಪಾಳ ಮೃತದೇಹವನ್ನು ತವರು ಮನೆಯವರಿಗೆ ಪೊಲೀಸರು‌ ನೀಡಿದ್ದಾರೆ.

ಇದನ್ನು ಓದಿ:ಅಪ್ರಾಪ್ತೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ್ದ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

Last Updated :Sep 29, 2022, 10:15 PM IST

ABOUT THE AUTHOR

...view details