ಕರ್ನಾಟಕ

karnataka

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕಾಮಣ್ಣ ಪ್ರತಿಷ್ಠಾಪನೆಗೆ ಅವಕಾಶ ನಿರಾಕರಣೆ

By

Published : Mar 9, 2023, 8:32 AM IST

Updated : Mar 10, 2023, 7:41 AM IST

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.

ಹುಬ್ಬಳ್ಳಿ ಈದ್ಗಾ ಮೈದಾನ
ಹುಬ್ಬಳ್ಳಿ ಈದ್ಗಾ ಮೈದಾನ

ಹುಬ್ಬಳ್ಳಿ:ಇಲ್ಲಿನಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿ, ದಹನ ಮಾಡಲು ಅವಕಾಶ ನೀಡಬೇಕೆಂದು ಮಹಾನಗರ ಪಾಲಿಕೆಗೆ ಹಿಂದೂಪರ ಸಂಘಟನೆಗಳು ಮನವಿ ಮಾಡಿಕೊಂಡಿದ್ದವು. ಈ ಮನವಿಗೆ ಸ್ಪಂದಿಸಿದ್ದ ಮೇಯರ್ ಈರೇಶ ಅಂಚಟಗೇರಿ ಇಂದಿನಿಂದ ಮಾರ್ಚ್ 11ರ ವರೆಗೆ ಮೂರ್ತಿ ಪ್ರತಿಷ್ಠಾಪನೆಗೆ ಷರತ್ತುಬದ್ದ ಅನುಮತಿ ನೀಡಿದ್ದರು. ಆದರೆ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.

ಇದರಿಂದ ಆಕ್ರೋಶಗೊಂಡಿರುವ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿ‌ ಪಾಲಿಕೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈದ್ಗಾ ಮೈದಾನದಲ್ಲಿ ಇಬ್ಬರು ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

ಈ ಬಗ್ಗೆ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಮಾತನಾಡಿ, "ಹೋಳಿ ಹುಣ್ಣಿಮೆ ಪ್ರಯುಕ್ತ ಕಾಮಣ್ಣನ ಪ್ರತಿಷ್ಠಾಪನೆ ಮಾಡಲು ಗಜಾನನ ಉತ್ಸವ ಮಹಾಮಂಡಳಿಯಿಂದ ಮನವಿ ಕೊಡಲಾಗಿತ್ತು. ಆದರೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಇಲ್ಲದ ಕಾರಣ ಅನುಮತಿ ಕೊಟ್ಟಿಲ್ಲ. ಅಲ್ಲದೇ ಪ್ರಧಾನಿಯವರ ಆಗಮನದ ಕಾರಣಕ್ಕೆ ಭದ್ರತಾ ದೃಷ್ಟಿಯಿಂದ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಅರ್ಜಿಯನ್ನು ಪರಿಗಣಿಸಿಲ್ಲ. ನಾವು ಈಗಾಗಲೇ ಆಯೋಜಕರನ್ನು ಕರೆದು ಹೇಳಿದ್ದೇವೆ ಎಂದ ಆಯುಕ್ತರು, ಮೇಯರ್ ಅವರು ಸದಸ್ಯರೊಂದಿಗೆ ಚರ್ಚೆ ಮಾಡಿ ಅವರ ನಿಲುವು ಹೇಳಿದ್ದಾರೆ. ಆದರೆ ಅಂತಿಮವಾಗಿ ಆಯುಕ್ತರೇ ಅನುಮತಿ ಕೊಡಬೇಕಾಗುತ್ತದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೂ ಚರ್ಚೆ ಮಾಡಿದ್ದೇವೆ. ಇನ್ನು IIT ಉದ್ಘಾಟನೆಗಾಗಿ ಮೋದಿಯವರು ಧಾರವಾಡಕ್ಕೆ ಆಗಮಿಸಲಿರುವ ಕಾರಣ ಪೊಲೀಸ್ ಸಿಬ್ಬಂದಿ ಧಾರವಾಡಕ್ಕೆ ತೆರಳಲಿದ್ದಾರೆ. ಭದ್ರತಾ ವ್ಯವಸ್ಥೆ ಕಾರಣ ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡಲಿಲ್ಲ. ಅಲ್ಲದೇ ನನಗೆ ಯಾವುದೇ ರಾಜಕೀಯ ನಾಯಕರು ಒತ್ತಡ ಹಾಕಿಲ್ಲ" ಎಂದು ಆಯುಕ್ತರು ತಿಳಿಸಿದರು.

ಪೊಲೀಸ್ ಕಮೀಷನರ್ ರಮಣ್ ಗುಪ್ತಾ ಮಾತನಾಡಿ, "ಆಯೋಜಕರು 10 ದಿನ ಮೊದಲೇ ಮನವಿ ಕೊಟ್ಟಿದ್ದಿದ್ದರೆ ನಮಗೆ ಬಂದೋಬಸ್ತ್‌ಗೆ ಸಮಸ್ಯೆ ಆಗುತ್ತಿರಲಿಲ್ಲ. ದೊಡ್ಡ ನಗರವಾದ ಕಾರಣ ಪೊಲೀಸ್​ ಬಂದೋಬಸ್ತ್ ಅನಿವಾರ್ಯವಾಗಿರುತ್ತೆ. ಮೊದಲೇ ಈ ಬಗ್ಗೆ ಮನವಿ ಕೊಟ್ಟಿದ್ದರೆ ಎಲ್ಲೆಲ್ಲಿ ಪೊಲೀಸರನ್ನು ನಿಯೋಜನೆ ಮಾಡಬೇಕು ಎಂದು ತೀರ್ಮಾನಿಸಿ, ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗುತ್ತಿತ್ತು. ಈಗಾಗಲೇ ನಗರದಲ್ಲಿ 472 ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ನಮ್ಮ ಸಿಬ್ಬಂದಿ ಡಿವೈಡ್ ಆದ ಕಾರಣ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ" ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ್ ಬಡಾಸ್ಕರ್, 'ನಮಗೆ ಒಂದು ದಿನದ ಮಟ್ಟಿಗಾದರೂ ಕಾಮಣ್ಣನ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಮಹಾಮಂಡಳದವರು ಸೇರಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಅಧಿಕಾರಿಗಳು ಈಗಾಗಲೇ ಚರ್ಚಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನ ಕಾರಣ ಅವಕಾಶ ನೀಡುತ್ತಿಲ್ಲ. ಅವರು ಕೊಡುವ ಹಿಂಬರಹವನ್ನು ಆಧರಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು' ಎಂದಿದ್ದಾರೆ.

ಮರುನಾಮಕರಣಕ್ಕೆ ವಿರೋಧ:ಮತ್ತೊಂದೆಡೆ, ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಮರುನಾಮಕರಣ ಮಾಡಲು ಒತ್ತಾಯ ಕೇಳಿಬಂದಿದ್ದು, ಎಐಎಂಐಎಂ ಪಕ್ಷ ವಿರೋಧ ವ್ಯಕ್ತಪಡಿಸಿದೆ. ಎಂಐಎಂ ಜಿಲ್ಲಾಧ್ಯಕ್ಷ ನಜೀರ್ ಅಹಮದ್ ಹೊನ್ಯಾಳ್ ನೇತೃತ್ವದಲ್ಲಿ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಎದುರು ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. "ಈದ್ಗಾ ಮೈದಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹೀಗಿರುವಾಗ ಮೈದಾನದ ಹೆಸರು ಬದಲಾಯಿಸುವುದು ಸರಿಯಲ್ಲ. ರಾಜಕೀಯ ದುರುದ್ದೇಶದಿಂದ ಮೈದಾನದ ಹೆಸರು ಬದಲಾವಣೆಗೆ ಯತ್ನ ಮಾಡಲಾಗುತ್ತಿದೆ. ಕೂಡಲೇ ಮರುನಾಮಕರಣ ಪ್ರಕ್ರಿಯೆ ಕೈಬಿಡಬೇಕು" ಎಂದು ಆಗ್ರಹಿಸಿ ಮೇಯರ್ ಈರೇಶ ಅಂಚಟಗೇರಿಗೆ ಅವರು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ: ಈಟಿವಿ‌ ಭಾರತ ವರದಿ ಫಲಶೃತಿ

Last Updated : Mar 10, 2023, 7:41 AM IST

ABOUT THE AUTHOR

...view details