ಕರ್ನಾಟಕ

karnataka

ಜೂಜಾಟದ ವೇಳೆ ದಾಳಿ: ಪೊಲೀಸರ ಮೇಲೆ ಹಲ್ಲೆ ನಡೆಸಿದ ಗುಂಪು

By ETV Bharat Karnataka Team

Published : Nov 14, 2023, 4:14 PM IST

ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ದೀಪಾವಳಿ ನಿಮಿತ್ತ ಜೂಜಾಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ.

ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ
ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ

ಎಸ್​ಪಿ ಗೋಪಾಲ ಬ್ಯಾಕೋಡ್​

ಧಾರವಾಡ : ದೀಪಾವಳಿ ನಿಮಿತ್ತ ಜೂಜಾಡುತ್ತಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ. ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು‌ ಮಾಡಲಾಗಿದೆ‌.

ನರೇಂದ್ರ ಗ್ರಾಮದಲ್ಲಿ ಜೂಜಾಟ ನಡೆಯುವ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ನಾಗರಾಜ್ ಪಾಟೀಲ ನೇತೃತ್ವದಲ್ಲಿ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ, ಜೂಜುಕೋರರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ 10ಕ್ಕೂ ಹೆಚ್ಚು ಜೂಜುಕೋರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಈ ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಪ್ರತಿಕ್ರಿಯಿಸಿದ್ದು, ನಿನ್ನೆ ತಡರಾತ್ರಿ 1 ಗಂಟೆಗೆ ಅಧಿಕಾರಿಗಳು ಗಸ್ತಿನಲ್ಲಿದ್ದರು. ನರೇಂದ್ರ ಶಾಲೆ ಬಳಿಯಲ್ಲಿ ಜೂಜಾಟ ನಡೆದ ಮಾಹಿತಿ ಬಂದಿತ್ತು. ಆಗ ನಮ್ಮ ಸಿಬ್ಬಂದಿ ದಾಳಿ ಮಾಡಿದ್ದರು. ಆಗ ಪಿಎಸ್‌ಐ ಮತ್ತು ಸಿಬ್ಬಂದಿ ಮೇಲೆ ಕೆಲವರು ದಾಳಿ ಮಾಡಿದ್ದಾರೆ. ಸದ್ಯ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣದಲ್ಲಿ 8 ಜನರ ಬಂಧನ ಆಗಿದೆ. ಉಳಿದವರ ಪತ್ತೆ ಕಾರ್ಯ ನಡೆದಿದೆ. ಹತ್ತು ಜನ ಶಂಕಿತರಿದ್ದಾರೆ. ಕಾನ್ಸ್​​ಟೇಬಲ್​​​ ನಾಗರಾಜ್ ಎಂಬುವವರ ತಲೆಗೆ ಪೆಟ್ಟಾಗಿದೆ. ಪಿಎಸ್‌ಐ ಬಸನಗೌಡರಿಗೆ ಕೈ ಮತ್ತು ಕುತ್ತಿಗೆಗೆ ಗಾಯವಾಗಿದೆ. ಇಬ್ಬರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ 3-4 ದಿನದಲ್ಲಿ 27 ಜೂಜಾಟದ ಪ್ರಕರಣ ದಾಖಲಾಗಿವೆ‌. 236 ಜನರನ್ನು ಬಂಧಿಸಲಾಗಿದೆ. 3.38 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.

ಜೂಜಾಟ ನಡೆಯುತ್ತಿದ್ದ ಸ್ಪೋರ್ಟ್ ಕ್ಲಬ್ ಮೇಲೆ ದಾಳಿ (ಪ್ರತ್ಯೇಕ ಪ್ರಕರಣ) : ಕೆಲವು ತಿಂಗಳ ಹಿಂದೆ ಕಿರಗಂದೂರು ಗೇಟ್ ಬಳಿಯ ಸ್ಪೋರ್ಟ್ಸ್ ಕ್ಲಬ್​ವೊಂದರಲ್ಲಿ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಸುಮಾರು 18 ಲಕ್ಷ ರೂ. ವಶಪಡಿಸಿಕೊಂಡಿದ್ದರು. ಡಿವೈಎಸ್ಪಿ ಓಂ ಪ್ರಕಾಶ್ ನೇತೃತ್ವದಲ್ಲಿ ಸಿಪಿಐ ಎಲ್. ಅರುಣ್, ಎಸ್‌ಐಗಳಾದ ದೀಕ್ಷಿತ್ ಹಾಗೂ ವರ್ಷಾ ಅವರ ತಂಡ ಕಾರ್ಯಾಚರಣೆ ನಡೆಸಿತ್ತು. 55 ಮಂದಿ ವಿರುದ್ಧ ಕೇಸು ದಾಖಲಿಸಲಾಗಿತ್ತು. ಎಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಯುಗಾದಿ ಹಬ್ಬದ ಸಂದರ್ಭದಲ್ಲಿ ಮಂಡ್ಯದಲ್ಲಿ ಜೂಜಾಟ ಎಗ್ಗಿಲ್ಲದೇ ನಡೆಯುತ್ತದೆ. ಜೂಜಾಡುವುದು ಕಾನೂನು ಬಾಹಿರ. ಇಂಥ ಕೃತ್ಯದಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಈ ಹಿಂದೆ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ:ಮಂಡ್ಯ: ಜೂಜಾಟ ನಡೆಯುತ್ತಿದ್ದ ಸ್ಪೋರ್ಟ್ ಕ್ಲಬ್ ಮೇಲೆ ದಾಳಿ; ₹18 ಲಕ್ಷ ವಶ

ABOUT THE AUTHOR

...view details