ಕರ್ನಾಟಕ

karnataka

ಚಂದ್ರಕಾಂತ ಬೆಲ್ಲದ್ ಬಗ್ಗೆ ಅಪಾರ ಪ್ರೀತಿ, ಸಂಬಂಧ ಇದೆ: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Dec 16, 2023, 8:56 PM IST

Updated : Dec 16, 2023, 10:13 PM IST

ಧಾರವಾಡದಲ್ಲಿ ನಡೆದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಮಾತನಾಡಿದರು.

Former MLA Chandrakanta Bellad congratulatory ceremony was held at Dharwad
ಧಾರವಾಡದಲ್ಲಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಅಭಿನಂದನಾ ಸಮಾರಂಭ ನಡೆಯಿತು.

ಚಂದ್ರಕಾಂತ ಬೆಲ್ಲದ್ ಅಭಿನಂದನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಧಾರವಾಡ:ನನಗೆ ಚಂದ್ರಕಾಂತ ಬೆಲ್ಲದ್ ಅಭಿನಂದನಾ ಗ್ರಂಥದ ಕಾಪಿ ಕೊಟ್ಟಿಲ್ಲ. ಅಭಿನಂದನಾ ಸಮಾರಂಭವಿದೆ ಬಂದು ಶುಭಕೋರಿ ಅಂತಾ ಅರವಿಂದ ಬೆಲ್ಲದ್ ಆಹ್ವಾನ ಮಾಡಿದ್ದರು. ನಾನು ಬೇರೆ ಪಕ್ಷದಲ್ಲಿದ್ದರೂ ಚಂದ್ರಕಾಂತ ಬೆಲ್ಲದ್ ಬಗ್ಗೆ ಅಪಾರ ಪ್ರೀತಿ, ಸಂಬಂಧ ಇದೆ ಎಂದು ಮುಖ್ಯಮಂತ್ರಿ ‌ಸಿದ್ದರಾಮಯ್ಯ ಹೇಳಿದರು.

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆ‌ ಕಾರಣದಿಂದ ನಾನು ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದೇನು. ನಿನ್ನೆ ಸಹ ಅರವಿಂದ ಬೆಲ್ಲದ್​ ಕರೆದಿದ್ದರು. ಚಂದ್ರಕಾಂತ ಬೆಲ್ಲದ್ ಸಭೆ ಇದೆ ಬಂದೇ ಬರ್ತೆನಿ. ನಿನ್ನ ಸಭೆಗಾದರೆ ನಾನೂ ಬರೋದಿಲ್ಲ‌ ಅಂತಾ ಅರವಿಂದಗೆ ಹೇಳಿದ್ದೇನು ಎಂದು ತಿಳಿಸಿದರು.

ಗೋಕಾಕ ಚಳವಳಿ ಕಾಲದಿಂದ ಬೆಲ್ಲದ್ ಪರಿಚಯ:ನಾನು ಚಂದ್ರಕಾಂತ ಬೆಲ್ಲದ್ ಗೋಕಾಕ ಚಳವಳಿ ಕಾಲದಿಂದಲೂ ಪರಿಚಯ, ಅವತ್ತಿನಿಂದ ನಮ್ಮಿಬ್ಬರ ಮಧ್ಯೆ ಮನುಷ್ಯ ಸಂಬಂಧ ಬೆಳೆಯಿತು. ಅವರು ಬಸವಣ್ಣನವರ ತತ್ವ, ಆದರ್ಶಗಳಲ್ಲಿ ನಂಬಿಕೆ ಇಟ್ಟವರು ಅವುಗಳನ್ನು ತತ್ವ ಜೀವನದಲ್ಲಿ ಅಳವಡಿಸಿಕೊಂಡವರು.

ನಾನೂ ಕೂಡ ಬಸವ ಅನುಯಾಯಿ. ಬಸವಣ್ಣನವರ ವಿಚಾರಗಳ ಬಗ್ಗೆ ಅಪಾರವಾದ ನಂಬಿಕೆ, ವಿಶ್ವಾಸ ನನಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಮನುಷ್ಯತ್ವ ಇರಬೇಕು. ಯಾವುದೇ ಜಾತಿ, ಧರ್ಮ, ಭಾಷೆಯವರಾಗಲಿ ಮನುಷ್ಯ ಸಂಬಂಧ ಇರಬೇಕು. ಪರಸ್ಪರ ಪ್ರೀತಿಸುವ, ಗೌರವಿಸುವ ಮನೋಭಾವ ಇಟ್ಟುಕೊಳ್ಳಬೇಕು. ಚಂದ್ರಕಾಂತ ಬೆಲ್ಲದ್ ನನಗಿಂತ ಹಿರಿಯರು ಆದರೆ ನನಗೆ ಅಪಾರ ಗೌರವ ತೋರಿಸುತ್ತ ಬಂದಿದ್ದಾರೆ ಎಂದು ನೆನೆದರು.

ಪ್ರೀತಿಸುವುದೇ ಚಂದ್ರಕಾಂತರಲ್ಲಿ ಇರುವ ದೊಡ್ಡ ಗುಣ: ಭೇಟಿಯಾದಾಗೆಲ್ಲ ಆರೋಗ್ಯದ ಬಗ್ಗೆ ನಮ್ಮ ಕೆಲಸದ ಬಗ್ಗೆ ವಿಚಾರಿಸುತ್ತಾರೆ. ಅವರು ಯಾರನ್ನೂ ಸಹ ದ್ವೇಷಿಸಿದವರಲ್ಲ. ನಾವು ಯಾರನ್ನೂ ಸಹ ದ್ವೇಷಿಸಬಾರದು. ಯಾವುದೇ ಜಾತಿ, ಧರ್ಮದವರಿದ್ದರೂ ದ್ವೇಷಿಸಬಾರದು ಪ್ರೀತಿಸಬೇಕು. ಈ ಪ್ರೀತಿಸುವುದೇ ಚಂದ್ರಕಾಂತರಲ್ಲಿ ಇರುವ ದೊಡ್ಡ ಗುಣ. ಅವರು ಪಕ್ಷೇತರವಾಗಿ ಮೊದಲು ಗೆದ್ದು ಬಂದವರು. ನಮ್ಮ ಜೊತೆ ನಿಕಟವಾದ ಸಂಬಂಧ ಇಟ್ಟುಕೊಂಡವರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಮಕೃಷ್ಣ ಹೆಗಡೆ ನಾಯಕತ್ವ ಒಪ್ಪಿದ್ದರು: ರಾಮಕೃಷ್ಣ ಹೆಗಡೆ ನಾಯಕತ್ವವನ್ನು ಸಹ ಬೆಲ್ಲದ್ ಒಪ್ಪಿಕೊಂಡವರು. ಒಬ್ಬ ಅಪರೂಪದ ರಾಜಕಾರಣ ಚಂದ್ರಕಾಂತ ಬೆಲ್ಲದ್ ಮತ್ತೊಬ್ಬರಿಗೆ ನೋವಾಗುವಂತಹ ಮಾತುಗಳನ್ನು ಆಡದವರಲ್ಲ. ನಾವು ಯಾವುದೇ ತತ್ವ ಸಿದ್ಧಾಂತ ಹೊಂದಿರಲಿ, ಮನುಷ್ಯರಾಗಿದ್ದಾಗ ಮನುಷ್ಯತ್ವದ ಗುಣ ಇರಬೇಕು. ಮನುಷ್ಯತ್ವದ ಗುಣ ಇದ್ದಾಗ ಸಾಮಾಜಿಕ ಕಳಕಳಿ ಬರುತ್ತದೆ.

ಆಡುಮುಟ್ಟದ ಸೊಪ್ಪಿಲ್ಲ ಎಂಬುವುದಕ್ಕೆ ಚಂದ್ರಕಾಂತ ಬೆಲ್ಲದ್​ ಅವರನ್ನು ಹೋಲಿಕೆ ಮಾಡಬಹುದು. ಆಡು ಎಲ್ಲ ಸೊಪ್ಪು ತಿನ್ನುತ್ತದೆ, ಎಲ್ಲ ಸೊಪ್ಪಿನ ರುಚಿ ನೋಡುತ್ತದೆ. ಹಾಗೆ ಚಂದ್ರಕಾಂತ ಬೆಲ್ಲದ್ ಎಲ್ಲರೊಂದಿಗೂ ಇರುತ್ತಾರೆ. ವೈರಿಗಳನ್ನೂ ಪ್ರೀತಿಸುವ ಗುಣವುಳ್ಳವರು ಹುಟ್ಟುವಾಗ ಎಲ್ಲರೂ ವಿಶ್ವಮಾನವರಾಗಿ ಹುಟ್ಟುತ್ತಾರೆ. ಬೆಳೆಯುತ್ತ ಬೆಳೆಯುತ್ತ ಅಲ್ಪಮಾನವರು ಆಗುತ್ತಾರೆ ಎಂದರು.

ಬೆಲ್ಲದ್ ಬಡತನದಲ್ಲಿ ಬೆಳೆದು ಬಂದು ಉದ್ಯಮಿಯಾದರು:ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಬಡ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ ಚಂದ್ರಕಾಂತ ಬೆಲ್ಲದ್ ಉದ್ಯಮಿಯಾಗಿ, ಶಾಸಕರಾಗಿದ್ದವರು. ಬೆಲ್ಲದ್ ಎಲ್ಲರಿಗೂ ಒಂದು ಪ್ರೇರಣೆ. ಇವತ್ತು ಸಾಕಷ್ಟು ಯೋಜನೆಗಳಿವೆ. ಆದರೆ ಅಂದಿನ ದಿನಗಳಲ್ಲಿ ಸೌಲಭ್ಯ ಇರಲಿಲ್ಲ. ನಿತ್ಯದ ಜೀವನ ನಡೆಸುವುದು ಕಷ್ಟವಾಗಿತ್ತು. ಬಡತನದಿಂದಾಗಿ ಜಾತ್ರೆಯಲ್ಲಿ ಬೆಲ್ಲದ ಅವರು ಬಲೂನು ಮಾರುತ್ತಿದ್ದರು ಎಂದು ಅವರ ಜೀವನ ಸ್ಮರಿಸಿದರು. ಸಾಧನೆ ಮಾಡಬೇಕು ಅನ್ನೋ ಛಲ ಇದ್ದರೆ ಏನಾಗುತ್ತೆ ಅನ್ನೋದಕ್ಕೆ ಬೆಲ್ಲದ್ ಸಾಕ್ಷಿ. ಶೋ ರೂಮ್, ಅಟೊಮೊಬೈಲ್ ಅಂಗಡಿ ತೆಗೆದರು. ಟಿಕೆಟ್ ಸಿಗದಿದ್ದಾಗ ಪಕ್ಷೇತರರಾಗಿ ನಿಂತು ಗೆದ್ದರು. ಜನರೇ ಅವರನ್ನು ನಿಲ್ಲಿಸಿ ಗೆಲ್ಲಿಸಿದರು. ದುಡ್ಡು, ರಾಜಕೀಯ ಬೆಂಬಲವಿಲ್ಲದೇ ಗೆದ್ದರು ಅವರು ನಾಟಕದಲ್ಲಿಯೂ ಅಭಿನಯಿಸಿದ್ದಾರೆ ಎಂದರು.

ಬಿಎಸ್‌ವೈ ಗೈರು: ಸಮಾರಂಭಕ್ಕೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಯಾವುದೋ ಕಾರ್ಯಕ್ರಮ ನಿಮಿತ್ತ ಮಾಜಿ ಸಿಎಂ ಬಿಎಸ್‌ವೈ ಬಂದಿರಲಿಲ್ಲ.


ಇದನ್ನೂಓದಿ:ಗ್ರಾಮೀಣ ಜನರ ಆರೋಗ್ಯ: 'ಸಂಚಾರಿ ಸಮುದಾಯ ಆರೋಗ್ಯ ಕೇಂದ್ರದ' ಬಸ್​ಗೆ ಚಾಲನೆ ನೀಡಿದ ಗುಂಡೂರಾವ್

Last Updated : Dec 16, 2023, 10:13 PM IST

ABOUT THE AUTHOR

...view details