ಕರ್ನಾಟಕ

karnataka

ಮಳೆಗಾಲದಲ್ಲಿ ರೈತರ ನಿದ್ದೆ ಕದ್ದ ಬೆಣ್ಣೆಹಳ್ಳ: ಶಾಶ್ವತ ಪರಿಹಾರಕ್ಕೆ ಮತ್ತೊಂದು ಹೋರಾಟಕ್ಕೆ ಸಿದ್ಧವಾದ ರೈತ ಸಮುದಾಯ

By

Published : Aug 19, 2023, 6:43 PM IST

Updated : Aug 19, 2023, 7:36 PM IST

ಹುಬ್ಬಳ್ಳಿಯಲ್ಲಿನ ಬೆಣ್ಣೆಹಳ್ಳದ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ರೈತರು ಮತ್ತೇ ಹೋರಾಟಕ್ಕೆ ಮುಂದಾಗಿದ್ದಾರೆ.

ಬೆಣ್ಣೆಹಳ್ಳ
ಬೆಣ್ಣೆಹಳ್ಳ

ಬೆಣ್ಣೆಹಳ್ಳದ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಹೋರಾಟ

ಹುಬ್ಬಳ್ಳಿ:ಮಳೆಗಾಲ ಬಂದ್ರೆ ರೈತರ ಮುಖದಲ್ಲಿ ‌ಮಂದಹಾಸ ಮೂಡುತ್ತದೆ. ಆದ್ರೆ ನವಲಗುಂದ, ಕುಂದಗೋಳ ಸೇರಿದಂತೆ ಬೆಣ್ಣೆಹಳ್ಳ ಭಾಗದ ಸುತ್ತಮುತ್ತಲಿರುವ ರೈತರು ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುತ್ತಾರೆ. ಇಲ್ಲಿ‌ನ ರೈತರಿಗೆ ಮಳೆ ಬಂದು ಹಳ್ಳ ತುಂಬಿದರೇ ಕಣ್ಣೀರು ಬರುತ್ತಿದೆ. ಆ ಹಳ್ಳಗಳು ರೈತ ಸಮುದಾಯಕ್ಕೆ ಎಷ್ಟು ಅನುಕೂಲವಾಗಿದೆಯೋ ಗೊತ್ತಿಲ್ಲ. ಆದರೆ ಮಳೆಗಾಲದಲ್ಲಿ ದೊಡ್ಡ ಅನಾನುಕೂಲವಂತೂ ಮಾಡಿಯೇ ಹೋಗುತ್ತಿವೆ.

ಬೆಣ್ಣೆ ಹಳ್ಳದ ವ್ಯಾಪ್ತಿಯ ರೈತರು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಹಲವು ವರ್ಷದಿಂದ ಜನಪ್ರತಿನಿಗಳಿಗೆ ಹಾಗೂ ಸರ್ಕಾರಕ್ಕೆ ಜನರು ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದ್ರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಅನೇಕ ಗ್ರಾಮಗಳು ಮುಳುಗಡೆಯಾಗಿದ್ದವು. ಸಾಕಷ್ಟು ಪ್ರಮಾಣ ಬೆಳೆಗಳಿಗೆ ಹಾನಿಯಾಗಿ ರೈತರು ಕಣ್ಣಿರಲ್ಲಿ ಕೈತೊಳೆಯುವಂತಾಗಿತ್ತು. ಪ್ರವಾಹದಲ್ಲಿ ಸಿಲುಕಿ ಅನೇಕರು ಪ್ರಾಣ ಬಿಟ್ಟಿದ್ದರು. ಪ್ರತಿವರ್ಷವೂ ಭರವಸೆಯ ಬಣ್ಣದ ಮಾತುಗಳನ್ನು ನಂಬುವ ರೈತ ಸಮುದಾಯ ಪ್ರತಿ ವರ್ಷ ಅಕ್ಷರಶಃ ಕಣ್ಣೀರಿನಲ್ಲಿ ಕೈ ತೊಳೆಯುತ್ತವೆ. ಈ‌ ಹಳ್ಳಗಳ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಯಾರಿಗೂ ಆಸಕ್ತಿ ಇಲ್ಲ ಎಂದು ರೈತರು ದೂರಿದರು.

ಬೆಣ್ಣೆಹಳ್ಳ ಪ್ರವಾಹ ತಡೆಯಲು ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಸೇತುವೆಗಳ ಎತ್ತರ ಹೆಚ್ಚಳ, ಕೆಲವೊಂದು ಕಡೆ ಅಗಲೀಕರಣ, ಹೂಳು ತೆಗೆಯುವುದು ಇನ್ನಿತರ ಕಾರ್ಯ ಮಾಡಬೇಕು ಎಂಬುವುದು ಘೋಷಣೆ ಮಾತ್ರ ಸೀಮಿತವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪ್ರತಿ ವರ್ಷ ಸಂಭವಿಸುವ ಅನಾಹುತಗಳನ್ನು ತಡೆಯುವ ಕೆಲಸ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಮತ್ತೊಂದು ಹೋರಾಟಕ್ಕೆ ‌ಈ ಭಾಗದ ರೈತರು ಸಿದ್ಧತೆ ಮಾಡಿಕೊಂಡಿದ್ದು, ಜನಪ್ರತಿನಿಧಿಗಳ ಜೊತೆ ಮೊದಲ ಹಂತದಲ್ಲಿ ಮಾತುಕತೆ ನಡೆಸಿ ಬಳಿಕ ಸೆ.3 ರಂದು ಮುಂದಿನ ‌ಹೋರಾಟ ರೂಪುರೇಷ ಸಿದ್ಧಪಡಿಸುವ ಮೂಲಕ ಹೋರಾಟ ತೀವ್ರಗೊಳಿಸುವ ಸೂಚನೆ ನೀಡಿದ್ದಾರೆ.

ಬೆಣ್ಣೆ ಹಳ್ಳ ಹಿತರಕ್ಷಣಾ ಸಮಿತಿ ಮುಖ್ಯಸ್ಥ ಪ್ರದೀಪ್ ಲಂಕಿನಗೌಡರ ಪ್ರತಿಕ್ರಿಯೆ ನೀಡಿ, ಬೆಣ್ಣೆಹಳ್ಳ ಅತೀ ಹೆಚ್ಚು ರೈತರನ್ನು ಬಾಧಿತ ಮಾಡುತ್ತದೆ. ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದಾರೆ. ಹೆಚ್ಚಾಗಿ ಮಳೆಯಾದಾಗ ಈ ಹಳ್ಳ ತುಂಬಿ ರೈತರ ಜಮೀನಿಗೆ ನೀರು ನುಗ್ಗುತ್ತವೆ. ಜೊತೆಗೆ ಮಣ್ಣು ಕೂಡ ಶೇಖರಣೆಯಾಗುತ್ತಿದೆ. ಇದರಿಂದ ಬೆಳೆಹಾನಿ ಸಂಭವಿಸಿದರೆ ಸರ್ಕಾರ ಕಡಿಮೆ ಮೊತ್ತದ ಪರಿಹಾರ ನೀಡುತ್ತದೆ. ಇದಕ್ಕಾಗಿ ಈ ಹಿಂದೆ ಹಲವಾರು ಹೋರಾಟಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಬೆಣ್ಣೆ ಹಳ್ಳ ಹೋರಾಟಗಾರ ತಾಜುದ್ದೀನ್ ಪ್ರತಿಕ್ರಿಯೆ ನೀಡಿ, ಪ್ರತಿವರ್ಷವೂ ಬೆಣ್ಣೆಹಳ್ಳದ ನೀರು, ರೈತರ ಹೊಲಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಇಲ್ಲಿಯ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಬೇಕು. ಹಾನಿಗೊಳಗಾದ ಸಮಯದಲ್ಲಿ ರೈತರಿಗೆ ಸರಿಯಾದ ಪ್ರಮಾಣದ ಪರಿಹಾರವನ್ನು ನೀಡಬೇಕಾಗಿದೆ. ಶಾಶ್ವತ ಪರಿಹಾರಕ್ಕಾಗಿ ಸೆ.3ರಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧ: ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಲು ಬಿಜೆಪಿ ಕರೆ

Last Updated : Aug 19, 2023, 7:36 PM IST

ABOUT THE AUTHOR

...view details