ಕರ್ನಾಟಕ

karnataka

ಸಿದ್ದರಾಮಯ್ಯ ಅಮೃತ ಮಹೋತ್ಸವ, ಚಂದ್ರು ಸಾವು.. 2022ರಲ್ಲಿ ದಾವಣಗೆರೆಯಲ್ಲಿ ನಡೆದ ಘಟನಾವಳಿಗಳ ಸುತ್ತ..

By

Published : Dec 24, 2022, 6:40 PM IST

ದಾವಣಗೆರೆ ಜಿಲ್ಲೆಯಲ್ಲಿ 2022ರಲ್ಲಿ ನಡೆದ ಹಲವು ಘಟನೆಗಳ ಕುರಿತ ಕಿರುನೋಟ ಇಲ್ಲಿದೆ..

various-incidents-happened-in-davanagere-districts-in-the-year-of-2022
2022ರ ದಾವಣಗೆರೆಯ ಚಿತ್ರಣ ಹೇಗಿತ್ತು, ಇಡೀ ಒಂದು ವರ್ಷದ ಘಟನಾವಳಿಗಳ ಚಿತ್ರಣ ಇಲ್ಲಿದೆ..

2022ರ ದಾವಣಗೆರೆಯ ಚಿತ್ರಣ ಹೇಗಿತ್ತು, ಇಡೀ ಒಂದು ವರ್ಷದ ಘಟನಾವಳಿಗಳ ಚಿತ್ರಣ ಇಲ್ಲಿದೆ

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ 2022ರಲ್ಲಿ ಹಲವು ಮಹತ್ವದ ಘಟನಾವಳಿಗಳು ನಡೆದಿದೆ. ಅವುಗಳಲ್ಲಿ ಹಲವು ಪ್ರಮುಖ ಘಟನೆಗಳ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಜಿಲ್ಲೆಯಲ್ಲಿ ಕೆಲವು ಸಿಹಿ ಕೆಲವು ಕಹಿ ಘಟನೆಗಳು ನಡೆದಿದ್ದು, ಇವುಗಳ ಕುರಿತಾದ ಚಿತ್ರಣ ಇಲ್ಲಿದೆ.

ನುಡಿದಂತೆ ನೇಣಿಗೆ ಕೊರಳೊಡ್ಡಿದ ಪರಿಸರ ಪ್ರೇಮಿ: ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಪರಿಸರ ಸ್ನೇಹಿ, ಸಾಲುಮರದ ವೀರಾಚಾರಿ ನೇಣಿಗೆ ಶರಣಾಗಿದ್ದರು. ತಾವು ಮಾಡಿದ ಹೋರಾಟಕ್ಕೆ ಯಾವುದೇ ನ್ಯಾಯ ಸಿಗದ ಹಿನ್ನೆಲೆ ನುಡಿದಂತೆ ನೇಣಿಗೆ ಕೊರಳೊಡ್ಡಿದ್ದರು. ರಾಜ್ಯ ಪ್ರಶಸ್ತಿ ವಿಜೇತರಾಗಿದ್ದ ಅವರು ಸಾಲುಮರಗಳನ್ನು ಬೆಳೆಸಿದ್ದರು. ಅಲ್ಲದೆ ಇವರ ಸಾಧನೆಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇವರು ಮಿಟ್ಲಕಟ್ಟೆ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ವರ್ಷಕ್ಕೆ 700 ಕ್ವಿಂಟಲ್ ಅಕ್ಕಿಯಷ್ಟು ಅಕ್ರಮ ಎಸಗಿದ್ದರ ಬಗ್ಗೆ ವೀರಾಚಾರಿಯವರು ಧ್ವನಿ ಎತ್ತಿದ್ದರು. ಸತತ ಇಪ್ಪತ್ತು ವರ್ಷಗಳಿಂದ ಸಿದ್ದರಾಮಪ್ಪನವರ ವಿರುದ್ಧ ಹೋರಾಟ ಮಾಡುತ್ತಿದ್ದ ವೀರಾಚಾರಿಯವರಿಗೆ ಜಿಲ್ಲಾಡಳಿತದಿಂದ ನ್ಯಾಯ ಸಿಗದ ಬೆನ್ನಲ್ಲೇ ಹೇಳಿದಂತೆ ನೇಣಿಗೆ ಶರಣಾಗಿದ್ದರು.

ರೀಲ್ಸ್ ಮಾಡಲು ಹೋಗಿ ದುರಂತ ಅಂತ್ಯ ಕಂಡ ಯುವಕರು : ಜಿಲ್ಲೆಯ ಹರಿಹರ ತಾಲೂಕಿನ ಹರಗನಹಳ್ಳಿ ಬಳಿಯ ಚೆಕ್ ಡ್ಯಾಂ ಬಳಿ ರೀಲ್ಸ್ ಮಾಡಲು ಹೋದ ಇಬ್ಬರು ಯುವಕರು ನೀರು ಪಾಲಾಗಿ ದುರಂತ ಅಂತ್ಯ ಕಂಡಿದ್ದರು. ಜಿಲ್ಲೆಯ ಹರಿಹರದ ಆಶ್ರಯ ಬಡಾವಣೆ ಪವನ್ (25), ಪ್ರಕಾಶ್ (24) ಇಬ್ಬರು ನೀರು ಪಾಲಾದ ಯುವಕರು. ಮೃತ ಪವನ್ ಹಾಗೂ ಪ್ರಕಾಶ್ ಸ್ನೇಹಿತರಾಗಿದ್ದು, ರೀಲ್ಸ್ ಮಾಡುವ ವೇಳೆ ಅಚಾನಕ್ ಆಗಿ ನೀರಿಗೆ ಬಿದ್ದ ಪ್ರಕಾಶ್ ನನ್ನು ರಕ್ಷಿಸಲು ಸ್ನೇಹಿತ ಪವನ್ ಕೂಡ ನೀರಿನಲ್ಲಿ ಕೊಚ್ಚಿಹೋಗಿದ್ದನು. ಬಳಿಕ ಇಬ್ಬರ ಶವವನ್ನು ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದಿಂದ ಹೊರತೆಗೆಯಲಾಗಿತ್ತು.

ಮಾಜಿ ಶಾಸಕರ ಸಮಾಧಿ ಧ್ವಂಸ..ಉಗ್ರ ಹೋರಾಟ : ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಕ್ಷೇತ್ರದ ಮಾಜಿ ಶಾಸಕ,ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಹಾಗೂ ಆದಿ‌ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ.ಬಿ.ಎಂ ತಿಪ್ಪೇಸ್ವಾಮಿ 1990ರಲ್ಲಿ ಸಾವನ್ನಪ್ಪಿದ್ದರು. ಅಂದಿನ ಜಮೀನಾಗಿದ್ದ ಇಂದಿನ ದಾವಣಗೆರೆ ಶಿವಕುಮಾರ ಸ್ವಾಮಿ ಬಡಾವಣೆಯ ಕೋಟಿ ಬೆಲೆ ಬಾಳುವ ಇಪ್ಪತ್ತು ಗುಂಟೆ ಜಮೀನಿನಲ್ಲಿ ಅವರ ಸಮಾಧಿ ಮಾಡಲಾಗಿತ್ತು.ಆದರೆ ಕಾಂಗ್ರೆಸ್ ಮುಖಂಡ ಗಣೇಶ್ ಹುಲ್ಲಮನೆ ಎಂಬುವರು ಸಮಾಧಿ ಇರುವ ಜಮೀನು‌ ನಾವು ಖರೀದಿಸಿದ್ದೇವೆ ಎಂದು ಹೇಳಿ ಜೆಸಿಬಿಯಿಂದ ಸಮಾಧಿಯನ್ನು ದ್ವಂಸಗೊಳಿಸಿದ್ದಾರೆ ಎಂದು ಡಾ.ಬಿ.ಎಂ. ತಿಪ್ಪೇಸ್ವಾಮಿಯವರ ಪುತ್ರಿ ಬಿ.ಟಿ.ಜಾಹ್ನವಿಯವರು ಆರೋಪ ಮಾಡಿದ್ದರು. ಇದಲ್ಲದೆ ಇದಕ್ಕೆ ಡಾ. ತಿಪ್ಪೇರುದ್ರಸ್ವಾಮಿಯವರ ಸೊಸೆ ಪುಷ್ಪಲತಾ ಕೂಡ ಧ್ವನಿ ಗೂಡಿಸಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದರು. ಇದಲ್ಲದೆ ಅವರ ಪುತ್ರಿ ಲೇಖಕಿ ಬಿಟಿ ಜಾಹ್ನವಿ ತನ್ನ ತಂದೆ ಸಮಾಧಿ ಉಳಿಸಲು ಉಗ್ರ ಹೋರಾಟ ಆರಂಭಿಸಿದ್ದರು.

ಚಂದ್ರು ಸಾವು ಪ್ರಕರಣ.ಐದು ದಿನಗಳ ಬಳಿಕ ಕಾರು ಮೃತದೇಹ ಪತ್ತೆ : ಮೂರ್ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಸಹೋದರ ಎಂಪಿ ರಮೇಶ್ ರವರ ಪುತ್ರ ಚಂದ್ರಶೇಖರ್ ಅವರ ಕಾರು ಜಿಲ್ಲೆಯ ಹೊನ್ನಾಳಿಯ ಹೆಚ್ ಕಡದಕಟ್ಟೆ ಗ್ರಾಮದ ಕೂಗಳೆಯಲ್ಲಿರುವ ತುಂಗಾ ಮೇಲ್ದಂಡೆ ಕಾಲುವೆ ಬಳಿ ಪತ್ತೆಯಾಗಿತ್ತು. ಇದು ಅಪಘಾತ ಅಲ್ಲ ಕೊಲೆ ಎಂದು ಇಡೀ ಕುಟುಂಬ ಆರೋಪಿಸಿತ್ತು. ಆದರೆ ಇದು ಮೇಲ್ನೋಟಕ್ಕೆ ಅಪಘಾತ ಎಂದು ತಿಳಿದುಬಂದಿತ್ತು.ಬಳಿಕ ಈ ಪ್ರಕರಣವನ್ನು ಸಿಎಂ ಬಸವರಾಜ್ ಬೊಮ್ಮಾಯಿಯವರು ಸಿಬಿಐಗೆ ಹಸ್ತಾಂತರ ಮಾಡಿದ್ದು, ತನಿಖೆ ನಡೆಸಲಾಗುತ್ತಿದೆ.

ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ : ಮಾಜಿ‌ ಸಿಎಂ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗಿತ್ತು.‌ ಆಗಸ್ಟ್ 3 ರಂದು ದಾವಣಗೆರೆ ನಗರದ ಕುಂದುವಾಡ ಬಳಿಯ ಶಾಮನೂರು ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ‌ ಮಾಡಲಾಗಿತ್ತು.
ಸುಮಾರು ಹದಿನೈದು ಲಕ್ಷ ಜನರನ್ನು ಸೇರಿಸಿ ರಾಜ್ಯದ ಜನ ನಮ್ಮೊಂದಿಗಿದ್ದಾರೆಂದು ಬಿಜೆಪಿಗೆ ಸಂದೇಶ ರವಾನಿಸಿದ್ದರು.‌ ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದರು.

ಮುರುಘಾ ಮಠಕ್ಕೆ ಪ್ರಭಾರ ಪೀಠಾಧಿಪತಿಯಾಗಿ ಬಸವಪ್ರಭು ಶ್ರೀ ನೇಮಕ : ಚಿತ್ರದುರ್ಗ ಮುರುಘಾ ಶ್ರೀಗಳ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿ ಜೈಲುವಾಸ ಅನುಭವಿಸುತ್ತಿದ್ದರಿಂದ ಮುರುಘಾ ಮಠಕ್ಕೆ ಪ್ರಭಾರ ಪೀಠಾಧಿಪತಿಯಾಗಿ ಬಸವಪ್ರಭು ಶ್ರೀಗಳ ಹೆಸರು ಅಂತಿಮಗೊಳಿಸಲಾಯಿತು. ದಾವಣಗೆರೆಯ ವಿರಕ್ತ ಪೀಠದ ಶ್ರೀ ಬಸವಪ್ರಭು ಸ್ವಾಮೀಜಿ ಬಹುವರ್ಷಗಳಿಂದ ವಿರಕ್ತ ಮಠದ ಪೀಠಾಧಿಪತಿಯಾಗಿದ್ದರಿಂದ ಮುರುಘಾ ಮಠಕ್ಕೆ ಪ್ರಭಾರ ಪೀಠಾಧಿಪತಿಯಾಗಿ ಮುರುಘಾ ಶರಣರು ನೇಮಕ ಮಾಡಿದ್ದರು. ಇನ್ನು ಈ ಹಿಂದೆ ವಿರಕ್ತ ಮಠದಲ್ಲಿ ಶ್ರೀಗಳಿಗೆ ಮುರುಘಾ ಮಠದ ಪ್ರಭಾರ ಪೀಠಾಧಿಪತಿಯಾಗಿ ನೇಮಕ‌ ಮಾಡುವಂತೆ ಭಕ್ತರು ಒತ್ತಾಯಿಸಿದ್ದರು.

ಇದನ್ನೂ ಓದಿ :ಕತ್ತಲಾಗುತ್ತಿದ್ದಂತೆ ಮನೆ ಮುಂದೆ ಸುತ್ತಾಡುತ್ತಿರುವ ಚಿರತೆ.. ಸಿಸಿಟಿವಿಯಲ್ಲಿ ಚಲನವಲನ ಸೆರೆ

ABOUT THE AUTHOR

...view details