ಕರ್ನಾಟಕ

karnataka

ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಬಂದ್

By

Published : Feb 6, 2021, 2:00 PM IST

ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದಾವಣಗೆರೆಯಲ್ಲಿ ಹೆದ್ದಾರಿ ಬಂದ್​ ಮಾಡಿ ಪ್ರತಿಭಟನೆ ನಡೆಸಲಾಯ್ತು. 10 ಕ್ಕೂ ಹೆಚ್ಚು ರೈತರು ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ಮೋದಿಗೆ ರವಾನಿಸಿದ್ರು.

highway band during farmers protest in davangere
ದಾವಣಗೆರೆ

ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಮೂರು ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತರು ಹೆದ್ದಾರಿ ತಡೆ ನಡೆಸಿದ್ರು.

ದಾವಣಗೆರೆಯಲ್ಲಿ ರೈತರಿಂದ ಹೆದ್ದಾರಿ ತಡೆದು ಪ್ರತಿಭಟನೆ

ದಾವಣಗೆರೆ ತಾಲೂಕಿನ ಹೆಚ್ ಕಲಪನಹಳ್ಳಿಯ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ - 4 ಅನ್ನು ಬಂದ್ ಮಾಡಿದರು. ರಾಜ್ಯ ರೈತ ಸಂಘ, ಸಿಪಿಐ, ಎಡಪಂಥೀಯ ಸಂಘಟನೆಗಳು ಸೇರಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇನ್ನು ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಯಿತು.

ಗಂಟೆಗಳ ಕಾಲ ನಡೆದ ರಸ್ತೆ ತಡೆಗೆ ದೂರದ ಊರುಗಳಿಗೆ ತೆರಳಬೇಕಾದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಪ್ರತಿಭಟನೆಯನ್ನು ಬೆಂಬಲಿಸಿ ನಡೆಯುತ್ತಿರುವ ಹೆದ್ದಾರಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಪ್ರತಿಭಟನೆ ಕೈ ಬಿಡಿ ಎಂದು ಪೊಲೀಸರು ಹೇಳಿದ ವೇಳೆ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.

ಕಿಸಾನ್ ಕಾಂಗ್ರೆಸ್ ಸಂಘಟನೆಯಿಂದ ರಕ್ತ ಚಳವಳಿ:

ಕೇಂದ್ರ ಸರ್ಕಾರ ಜಾರಿಗೆ ತಂದಿರು ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕಿಸಾನ್ ಕಾಂಗ್ರೆಸ್ ಸಂಘಟನೆಯಿಂದ ರಕ್ತಪತ್ರ ಚಳುವಳಿ ನಡೆಸಲಾಯಿತು. ದಾವಣಗೆರೆ ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿ ಮುಂಭಾಗ ಚಳವಳಿ ನಡೆಸಲಾಯಿತು. ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ್ ರವರ ನೇತೃತ್ವದಲ್ಲಿ ನಡೆದ ರಕ್ತ ಪತ್ರ ಚಳವಳಿಯಲ್ಲಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ಅಂಚೆ ಮೂಲಕ ರಕ್ತದಲ್ಲಿ ಬರೆದ ಪತ್ರವನ್ನು ಕಳುಹಿಸಿದ್ರು. ಬಳಿಕ ಬಿಜೆಪಿ ಹಾಗೂ ಪಿಎಂ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details