ಕರ್ನಾಟಕ

karnataka

ಅಕ್ರಮದ ವಿರುದ್ಧ ಧ್ವನಿ ಎತ್ತಿದ ಪರಿಸರವಾದಿಗೆ ಸಿಕ್ಕಿದ್ದು ನ್ಯಾಯ ಇದೇನಾ..?

By

Published : Sep 20, 2022, 2:56 PM IST

Updated : Sep 20, 2022, 8:36 PM IST

ನೇಣಿಗೆ ಶರಣಾದ ಪರಿಸರ ಪ್ರೇಮಿ ವೀರಾಚಾರಿ

ಬೇಡಿಕೆಗಳು ಈಡೇರಿಸುವ ತನಕ ಹೆಣ ಇಳಿಸಲು ಬಿಡಲ್ಲ ಎಂದು ಪಟ್ಟು ಹಿಡಿದು, ರಸ್ತೆ ಬಂದ್ ಮಾಡಿದ್ದ ಗ್ರಾಮಸ್ಥರು. ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಮೃತ ದೇಹವನ್ನು ಸಿಜಿ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ದಾವಣಗೆರೆ:ನ್ಯಾಯಬೆಲೆ ಅಂಗಡಿಯ ಅಕ್ರಮದ ವಿರುದ್ಧ ಧ್ವನಿ ಎತ್ತಿ ನ್ಯಾಯ ಸಿಗದ ಹಿನ್ನೆಲೆ ನೇಣಿಗೆ ಶರಣಾಗಿರುವ ವೀರಾಚಾರಿ ಅವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಸಾಲುಮರದ ವೀರಾಚಾರಿ ಎಂದೇ ಖ್ಯಾತಿ ಗಳಿಸಿದ್ದರು. ಈ ಪರಿಸರ ಪ್ರೇಮಿ ಬಡ ಜನರ ಧ್ವನಿಯಾಗಿದ್ದರು.

ಮಿಟ್ಲಕಟ್ಟೆ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ಅಪಾರ ಪ್ರಮಾಣದ ಅಕ್ರಮ ಎಸಗಿದರ ಬಗ್ಗೆ ವೀರಾಚಾರಿಯವರು ಧ್ವನಿ ಎತ್ತಿದ್ದರು. ಸತತ ಇಪ್ಪತು ವರ್ಷಗಳಿಂದ ಸಿದ್ದರಾಮಪ್ಪ ವಿರುದ್ಧ ಹೋರಾಟ ಮಾಡ್ತಿದ್ದ ವೀರಾಚಾರಿ ಅವರಿಗೆ ಆಡಳಿತ ಯಂತ್ರದಿಂದ ನ್ಯಾಯ ಸಿಗದ ಬೆನ್ನಲ್ಲೇ ಹೇಳಿದಂತೆ ನೇಣಿಗೆ ಶರಣಾಗಿದ್ದಾರೆ.

ವರ್ಷಕ್ಕೆ 700 ಕ್ವಿಂಟಾಲ್ ಅಕ್ರಮ ಎಸಗುತ್ತಿದ್ದ ಸಿದ್ದರಾಮಪ್ಪ:ಸದಾ ಹೋರಾಟದಲ್ಲಿ ನಿರತರಾಗಿ ಬಡವರ ಧ್ವನಿಯಾಗಿ ಕೆಲಸ ಮಾಡ್ತಿದ್ದ ಪರಿಸರಪ್ರೇಮಿ ವೀರಾಚಾರಿ ಅವರು ಇಪ್ಪತ್ತು ವರ್ಷಗಳಿಂದ ಮಿಟ್ಲಕಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿ ಅಕ್ರಮದ ವಿರುದ್ಧ ಹೋರಾಟ ಮಾಡುತ್ತಿದ್ದರು. ಮಿಟ್ಲಗಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ಸೂಕ್ತವಾಗಿ ಅಕ್ಕಿ, ಗೋಧಿ, ರಾಗಿ ವಿತರಣೆ ಮಾಡದ ಮಾಲೀಕ ಸಿದ್ದರಾಮಪ್ಪನ ವಿರುದ್ಧ ಹೋರಾಟ ಅಸ್ತ್ರ ಝಳಪಿಸಿದ್ದರು.

ಜನರಿಗೆ ಪಡಿತರ ಕೊಡಲು ತಾರತಮ್ಯ ಮಾಡುತ್ತಿದ್ದ ಸಿದ್ದರಾಮಪ್ಪನ ಪಡಿತರ ಅಂಗಡಿ ರದ್ದು ಮಾಡುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ದಿನ ಚರ್ಚೆ ನಡೆದಿತ್ತು. ನ್ಯಾಯಬೆಲೆ ಅಂಗಡಿ ಮುಚ್ಚಬಾರದು ಎಂದು ಕೋರ್ಟ್ ತಾತ್ಕಾಲಿಕ ಸ್ಟೇ ನೀಡಿತ್ತು. ಅದರಿಂದ ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರು ಕಳೆದ ದಿನ ಸಭೆ ಕರೆದು ಅಂಗಡಿ ರದ್ದು ಪಡಿಸದಂತೆ ಕೋರ್ಟ್ ಸ್ಟೇ ನೀಡಿದೆ ಕಾದು ನೋಡೋಣ ಎಂದು ವೀರಾಚಾರಿಯವರಿಗೆ ಮನವರಿಕೆ ಮಾಡಿ ಕಳಿಸಿದ್ದರು.

ನೇಣಿಗೆ ಶರಣಾದ ಪರಿಸರ ಪ್ರೇಮಿ ವೀರಾಚಾರಿ

ನ್ಯಾಯ ಸಿಗದ ಕಾರಣ ವಾಗ್ದಾನ ಮಾಡಿದಂತೆ ನೇಣಿಗೆ ಶರಣು:ಕಳೆದ ದಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಡಿತರ ಅಂಗಡಿ ಮುಚ್ಚಬೇಕೆ ಇಲ್ಲ ಬೇಡವೆ ಎಂದು ಜನರ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಮಿಟ್ಲಕಟ್ಟೆ ಗ್ರಾಮದ ಜನ ನ್ಯಾಯಬೆಲೆ ಅಂಗಡಿ ಅಕ್ರಮ ಹೆಚ್ಚಾಗಿದೆ ಅದ್ದರಿಂದ ಅಂಗಡಿಯನ್ನು ರದ್ದುಪಡಿಸಬೇಕು ಎಂದು ಧ್ವನಿಗೂಡಿಸಿದ್ದರು. ಇನ್ನು ಹೋರಾಟಕ್ಕೂ ಮುನ್ನ ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ ಜನರಲ್ಲಿ ನ್ಯಾಯ ಸಿಗದಿದ್ದರೆ ದೇವರಲ್ಲಿ ನ್ಯಾಯ ಸಿಗದಿದ್ದರೆ ನೇಣಿಗೆ ಶರಣು ಎಂಬ ವಾಗ್ದಾನ ಮಾಡಿದ್ದರು. ವಾಗ್ದಾನದಂತೆ ನಿನ್ನೆ ರಾತ್ರಿ 2 ಗಂಟೆಗೆ ನೇಣಿಗೆ ಶರಣಾಗಿದ್ದಾರೆ.

ಮೂರು ಸಾವಿರಕ್ಕೂ ಹೆಚ್ಚು ಸಾಲುಮರಗಳನ್ನು ಬೆಳೆಸಿದ್ದ ವೀರಾಚಾರಿ:ಪರಸರ ಪ್ರೇಮಿಯಾಗಿದ್ದ ವೀರಾಚಾರಿ ಜಿಲ್ಲೆಯಾದಂತ್ಯ ತಮ್ಮ ಸ್ವಂತ ಹಣದಲ್ಲೇ 3000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ಇಡೀ ದಾವಣಗೆರೆ ಜಿಲ್ಲೆಯಲ್ಲಿ ಚಿರಪರಿಚಿತರಾಗಿದ್ದರು. ಇದರಿಂದ ಸರ್ಕಾರ ಅವರನ್ನು ಗುರುತಿಸಿ ರಾಜ್ಯ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಆದರೆ ನ್ಯಾಯ ಎಲ್ಲಿ ಸಿಗುವುದಿಲ್ಲವೋ ಅಲ್ಲಿಯೇ ನೇಣಿಗೆ ಕೊರಳೊಡ್ಡುವೆ ಎಂದು ವಾಗ್ದಾನ ಮಾಡಿದಂತೆ ನಡೆದುಕೊಂಡರು. ಇನ್ನು ಅವರನ್ನು ಕಳೆದುಕೊಂಡ ಬಡವರ್ಗದ ಜನ ಸಿದ್ದರಾಮಪ್ಪನವರ ಪಡಿತರ ಅಂಗಡಿ ರದ್ದು ಮಾಡಬೇಕು, ವೀರಾಚಾರಿಯವರ ಕುಟುಂಬಕ್ಕೆ ಸೌಲಭ್ಯ ನೀಡಬೇಕು ಎಂಬ ಬೇಡಿಕೆಗಳು ಈಡೇರಿಸುವ ತನಕ ಹೆಣವನ್ನು ಇಳಿಸಲು ಬಿಡಲ್ಲ ಎಂದು ಪಟ್ಟು ಹಿಡಿದು, ರಸ್ತೆ ಬಂದ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕೆಲವರು ಪಡಿತರ ಅಂಗಡಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತು. ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಮೃತ ದೇಹವನ್ನು ಸಿಜಿ ಆಸ್ಪತ್ರೆಗೆ ರವಾನೆ ಮಾಡಿದರು.

ಗ್ರಾಮಸ್ಥ ಬೇಡಿಕೆಗಳೇನು:ವೀರಾಚಾರಿಯವರು ಸಾಕಷ್ಟು ಸಾರ್ವಜನಿಕರ ಪರ ಹೋರಾಟ ಮಾಡಿದ್ದರಿಂದ ಕುಟುಂಬಸ್ಥರು ಕೆಲ ಬೇಡಿಕೆಗಳನ್ನು ಇಟ್ಟಿದ್ದರು. ಮೂರ್ತಿಯನ್ನು ನಿರ್ಮಾಣ ಮಾಡಿ ಅವರ ಸ್ಮಾರಕ ನಿರ್ಮಿಸಬೇಕು, ವೀರಾಚಾರಿಯವರ ಪುತ್ರನಿಗೆ ಸರ್ಕಾರಿ ಕೆಲಸ ನೀಡಬೇಕು, ನ್ಯಾಯಬೆಲೆ ಅಂಗಡಿಯನ್ನು ರದ್ದು ಮಾಡಬೇಕು, ಸೂಕ್ತವಾದ ಜಾಗ ಗುರುತಿಸಿ ಅವರ ಹೆಸರಿನಲ್ಲಿ ಒಂದು ಉದ್ಯಾನವನ ನಿರ್ಮಾಣ ಮಾಡಬೇಕೆಂಬ ಬೇಡಿಕೆಗಳನ್ನು ಇಟ್ಟಿದ್ದರು.

ಇದನ್ನೂ ಓದಿ:'ನ್ಯಾಯ ಸಿಗದಿದ್ದರೆ ನೇಣಿಗೆ ಶರಣಾಗುವೆ..' ಸಾಲು ಮರದ ವೀರಾಚಾರಿ ಆತ್ಮಹತ್ಯೆ

Last Updated :Sep 20, 2022, 8:36 PM IST

ABOUT THE AUTHOR

...view details