ಕರ್ನಾಟಕ

karnataka

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

By

Published : Jun 5, 2023, 3:28 PM IST

Updated : Jun 5, 2023, 3:57 PM IST

ಗೋಹತ್ಯೆ ನಿಷೇಧದ ಬಗ್ಗೆ ಕ್ಯಾಬಿನೆಟ್​​ನಲ್ಲಿ ಚರ್ಚಿಸಲು ತೀರ್ಮಾನಿಸಿದ್ದೇವೆ. 1964ರ ಕಾಯಿದೆಯಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

cabinet-will-discuss-about-cow-slaughter-ban-act-says-cm-siddaramaiah
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡ್ತೀವಿ: ಸಿಎಂ ಸಿದ್ದರಾಮಯ್ಯ

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

ದಾವಣಗೆರೆ :ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. 1964 ರ ಕಾಯ್ದೆಯಲ್ಲಿ 12 ವರ್ಷ ತುಂಬಿದ ಹಸುಗಳು, ಬರಡು ಹಸುಗಳು, ವ್ಯವಸಾಯಕ್ಕೆ ಬಾರದ ಹಸುಗಳ ವಧೆಗೆ ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ತೀರ್ಮಾನಿಸಿದ್ದೇವೆ. ಸಚಿವ ವೆಂಕಟೇಶ್ ಅವರು ಹೇಳುವಾಗ ಸ್ಪಷ್ಟವಾಗಿ ಹೇಳಿಲ್ಲ ಅಷ್ಟೇ. ಇದರಿಂದ ಗೊಂದಲವಾಗಿದೆ ಎಂದು ಹೇಳಿದರು.

ಜುಲೈ 7 ರಿಂದ ಬಜೆಟ್ ಅಧಿವೇಶನ: ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳನ್ನು ಉಚಿತವಾಗಿ ನೀಡಿ ವಿದ್ಯುತ್ ದರ ಏರಿಕೆ ಮಾಡಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ವಿದ್ಯುತ್ ದರ ಏರಿಕೆ ಬಗ್ಗೆ ನಾವು ತೀರ್ಮಾನ ಮಾಡಲ್ಲ. ಆರ್.ಇ.ಸಿ ತೀರ್ಮಾನ ಮಾಡಿದೆ ಎಂದರು. ಜುಲೈ 7 ರಿಂದ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಹೊಸ ಬಜೆಟ್​ ಘೋಷಣೆ ಮಾಡುತ್ತೇವೆ. ನಾವು ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಈ ವಿಚಾರವಾಗಿಯೇ ಅಧಿವೇಶನ ನಡೆಯಲಿದೆ ಎಂದು ಸಿಎಂ ಮಾಹಿತಿ ನೀಡಿದರು.

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತ್ತು. ಕಾಕತಾಳೀಯ ಎಂಬಂತೆ ಮುಖ್ಯಮಂತ್ರಿಯಾದ ಬಳಿಕ ಮೊದಲು ದಾವಣಗೆರೆಗೆ ಆಗಮಿಸಿದ್ದೇನೆ. ಜಿಲ್ಲಾ ಪಂಚಾಯತ್ ಸಭೆಯನ್ನು ನಡೆಸುವುದಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರೈತರಿಗೆ ಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳ ಕೊರತೆಯಾಗದಂತೆ ನೋಡಿಕೊಳ್ಳಲು ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ, ಸಿಇಒಗಳಿಗೆ ಸೂಚನೆ ನೀಡಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ತಿಳಿಸಲಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಹ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದರು.

ಹೆಚ್ಚುವರಿ ಇಂದಿರಾ ಕ್ಯಾಂಟಿನ್ ವಿಚಾರ..: ಬೆಂಗಳೂರಿನಲ್ಲಿ ಹೆಚ್ಚುವರಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮತ್ತೆ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಲಿವೆ ಎಂದು ಸಿಎಂ ತಿಳಿಸಿದರು.

ಹೊಸದಾಗಿ ಸುಮಾರು 50 ಇಂದಿರಾ ಕ್ಯಾಂಟೀನ್​ಗಳನ್ನು ಪ್ರಾರಂಭಿಸಲು ಬಿಬಿಎಂಪಿ ಮುಂದಾಗಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಇಂದಿರಾ ಕ್ಯಾಂಟೀನ್​ನ ಪುನಶ್ಚೇತನಕ್ಕೆ ಪಾಲಿಕೆ ಮುಂದಾಗಿದೆ. ಕೆಲವು ದಿನಗಳ ಹಿಂದೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೊಸದಾಗಿ ಆಹಾರದ ಮೆನು ಸಿದ್ಧಪಡಿಸಿ, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಿ ಎಂದು ಅಧಿಕಾರಿಗಳಿಗೆ ಪಾಲಿಕೆ ಮುಖ್ಯ ಆಯುಕ್ತರು ತಿಳಿಸಿದ್ದರು. ಈ ಸಂಬಂಧ ನಗರದ ಇಂದಿರಾ ಕ್ಯಾಂಟೀನ್‌​ ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಲು ನಿರ್ಧರಿಸಲಾಗಿತ್ತು. ಇದೀಗ ಬೆಂಗಳೂರಿನಲ್ಲಿ ಮತ್ತೆ ಹೊಸದಾಗಿ ಸುಮಾರು ಐವತ್ತು ಕ್ಯಾಂಟೀನ್​ಗಳನ್ನು ತೆರೆಯಲು ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ :ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ದಾವಣಗೆರೆ ಇಂದಿರಾ ಕ್ಯಾಂಟೀನ್​​ಗಳಿಗೆ ಜೀವಕಳೆ.. ಬೆಣ್ಣೆ ನಗರಿ ಜನ ಖುಷ್​ !

Last Updated :Jun 5, 2023, 3:57 PM IST

ABOUT THE AUTHOR

...view details