ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಬೆಳಗ್ಗೆ 9 ಗಂಟೆಗೆ ಸರಿಯಾಗಿ ರಾಜ್ಯಸಭಾ ಸದಸ್ಯ ಕೆ ಸಿ ರಾಮಮೂರ್ತಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಬೆಂಗಳೂರು, ಮಂಗಳೂರು, ದಾವಣಗೆರೆಯಲ್ಲಿ ಅದ್ಧೂರಿ ಗಣರಾಜ್ಯೋತ್ಸವ ಆಚರಣೆ ನಂತರ ಮಾತನಾಡಿದ ರಾಮಮೂರ್ತಿ ಸಂವಿಧಾನದ ಆಶಯಗಳನ್ನು ವಿವರಿಸಿದರು. ಅಂಬೇಡ್ಕರ್ ಕೊಡುಗೆಯನ್ನು ಸ್ಮರಿಸಿದರು. ಜಗತ್ತು ಇಂದು ಭಾರತದ ಕಡೆ ನೋಡುವಂತಾಗಿದೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಾರತ ಸಾಧನೆ ಮಾಡುತ್ತಿದೆ. ಮೋದಿ ನಾಯಕತ್ವ ದೇಶಕ್ಕೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಎಂದು ಕೇಂದ್ರ ಸರ್ಕಾರದ ಸಾಧನೆಯನ್ನು ಕೊಂಡಾಡಿದರು.
ದಕ್ಷಿಣ ಕನ್ನಡದಲ್ಲಿ ಸಚಿವ ಪೂಜಾರಿ ಅವರಿಂದ ದ್ವಜಾರೋಹಣ
ಇನ್ನೂ ದ.ಕ.ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರಿಂದ 3000 ಕೋಟಿ ರೂ. ವೆಚ್ಚದಲ್ಲಿ ಕೊಚ್ಚಿ ಮಂಗಳೂರು ನಡುವೆ 450 ಕಿ.ಮೀ. ಉದ್ದದ ನೈಸರ್ಗಿಕ ಅನಿಲ ಪೈಪ್ ಲೈನ್ ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದು, ಇದರಿಂದ ಜಿಲ್ಲೆಯ ವಾಣಿಜ್ಯ, ಕೈಗಾರಿಕಾ, ವಾಹನಗಳು ಸೇರಿದಂತೆ ಗೃಹ ಉಪಯೋಗಕ್ಕೆ ಮಾಲಿನ್ಯ ಮುಕ್ತ ಅನಿಲದ ನಿರಂತರ ಪೂರೈಕೆಯಾಗಲಿದೆ. ಕುಳಾಯಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಆರ್ಥಿಕ ನೆರವಿನಿಂದ ಮೀನುಗಾರಿಕಾ ಬಂದರು ನಿರ್ಮಾಣವೂ 195.51 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಸಾಗರ ಮಾಲಾ ಯೋಜನೆಯಡಿ ಬೆಂಗ್ರೆ ಪ್ರದೇಶದಲ್ಲಿ 65 ಕೋಟಿ ರೂ. ವೆಚ್ಚದ ಕೋಸ್ಟಲ್ ಬರ್ತ್ ನಿರ್ಮಾಣ ಹಾಗೂ 29 ಕೋಟಿ ರೂ. ವೆಚ್ಚದ ಕ್ಯಾಪಿಟಲ್ ಡ್ರೆಜ್ಜಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ. ದೇಶದಲ್ಲಿಯೇ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಕೆಂಜಾರಿನಲ್ಲಿ ಸ್ಥಾಪನೆಯಾಗಲಿದ್ದು, ಕೇಂದ್ರದಿಂದ 1000 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಓದಿ : ದೆಹಲಿಯ ರಾಜಪಥದಲ್ಲಿ ಸ್ತಬ್ಧಚಿತ್ರ ಪ್ರದರ್ಶನ, ಭಾರತದ ಸಂಸ್ಕೃತಿಯ ಅನಾವರಣ
ಇನ್ನೂ ದಾವಣಗೆರೆ ಜಿಲ್ಲಾಡಳಿತ ವತಿಯಿಂದ 72ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಧ್ವಜಾರೋಹಣ ನೆರವೇರಿಸಿದರು.