ಕರ್ನಾಟಕ

karnataka

ಅಸಲಿಯೆಂದು ನಕಲಿ ಚಿನ್ನದ ನಾಣ್ಯ ನೀಡಿ ₹ 45 ಲಕ್ಷ ವಂಚನೆ ಕೇಸ್​.. ದಾವಣಗೆರೆಯಲ್ಲಿ ಇಬ್ಬರು ಖದೀಮರ ಬಂಧನ

By ETV Bharat Karnataka Team

Published : Oct 7, 2023, 9:19 PM IST

ಗುತ್ತಿಗೆದಾರನಿಗೆ ನಕಲಿ ಚಿನ್ನ ನೀಡಿ 45 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ವಂಚಕರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

45 lakh cash fraud
ಅಸಲಿಯೆಂದು ನಕಲಿ ಚಿನ್ನದ ನಾಣ್ಯ ನೀಡಿ 45 ಲಕ್ಷ ನಗದು ವಂಚನೆ

ಮಾಧ್ಯಮಗೋಷ್ಟಿಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಮಾತನಾಡಿದರು..

ದಾವಣಗೆರೆ: ಅಸಲಿಯೆಂದು ನಕಲಿ ಚಿನ್ನದ ಬಿಲ್ಲೆ(ನಾಣ್ಯ)ಗಳನ್ನು ನೀಡಿ ಮೋಸ ಮಾಡುತ್ತಿದ್ದ ಅಂತರ್ ಜಿಲ್ಲಾ ಇಬ್ಬರು ವಂಚಕರನ್ನು ದಾವಣಗೆರೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ವಿಜಯನಗರ ಜಿಲ್ಲೆಯ ಸಂದೀಪ್ ಹಾಗೂ ಈಶ್ವರಪ್ಪ ಇಬ್ಬರು ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 40 ಲಕ್ಷ ನಗದು ವಶಕ್ಕೆ ಪಡೆದು ಪೊಲೀಸ​ರು ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಿಕ್ಕ ಚೀಮನಹಳ್ಳಿ ಗ್ರಾಮದ ನಿವಾಸಿ ಗೋವರ್ಧನ್ ಎಂಬುವರಿಗೆ ಅಸಲಿ ಬಂಗಾರದ ನಾಣ್ಯ ಕೊಡುವುದಾಗಿ ನಂಬಿಸಿ ನಕಲಿ ಬಂಗಾರದ ನಾಣ್ಯ ಕೊಟ್ಟು ಆರೋಪಿಗಳು ವಂಚಿಸಿ ಪರಾರಿಯಾಗಿದ್ದರು.

ಸೆ 29 ರಂದು ಗೋವರ್ಧನ್ ಅವರಿಗೆ ಕರೆ ಮಾಡಿ ಪರಿಚಯ ಮಾಡಿಕೊಂಡಿದ್ದ ಆರೋಪಿಗಳು, ನಮ್ಮ ಮನೆಯ ಪಕ್ಕದಲ್ಲಿ ಪಾಯ ತೆಗೆಯುವಾಗ ಹಳೆ ಕಾಲದ ಬಂಗಾರದ ಬಿಲ್ಲೆ(ನಾಣ್ಯ)ಗಳು ಸಿಕ್ಕಿವೆ. ಬೇಕಾದರೆ ನಿಮಗೆ ಕೊಡಿಸುತ್ತೇನೆ. ನಿಮಗೆ ಬೇಕಾದರೆ ಸ್ಯಾಂಪಲ್ ಕೊಡಿಸುತ್ತೇನೆ. ಬಂದು ನೋಡಿಕೊಂಡು ಹೋಗಿ ಎಂದು ಹೇಳಿದ್ದರು.

ಗೋರ್ವಧನ್ ಅವರು ಇಬ್ಬರು ಆರೋಪಿಗಳಿರುವ ಚನ್ನಗಿರಿಗೆ ತೆರಳಿ ವಂಚಕರು ನೀಡಿದ ಅಸಲಿ ಬಂಗಾರ ಬಿಲ್ಲೆಗಳನ್ನು ಪಡೆದು ಪರಿಶೀಲಿಸಿದ್ದರು. ಬಳಿಕ ಅಸಲಿ ಬಂಗಾರ ಖಚಿತ ಪಡಿಸಿಕೊಂಡು ವ್ಯವಹಾರ ಕುದುರಿಸಿದರು. 60 ಲಕ್ಷ ನೀಡಿದರೆ 2.5 ಕೆ ಜಿ ಅಸಲಿ ಬಂಗಾರ ಕೊಡುವದಾಗಿ ನಂಬಿಸಿದ ಆರೋಪಿಗಳು 45 ಲಕ್ಷ ನಗದು ಪಡೆದು ನಕಲಿ ಬಂಗಾರ ನೀಡಿದ್ದರು.

ನಕಲಿ ಚಿನ್ನದ ಬಿಲ್ಲೆ ಎಂದು ಗೊತ್ತಾದಾಗ ಗೋವರ್ಧನ್ ಅವರು ಚನ್ನಗಿರಿಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸ್​ರು ವಿಜಯನಗರ ಜಿಲ್ಲೆಯ ಸಂದೀಪ್ ಹಾಗೂ ಈಶ್ವರಪ್ಪ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದರು. ನಂತರ ಇಬ್ಬರನ್ನು ತನಿಖೆಗೆ ಒಳಡಿಸಿದಾಗ, ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಎಸ್ಪಿ ಉಮಾ ಪ್ರಶಾಂತ್ ಹೇಳಿದ್ದಿಷ್ಟು..ಮಾಧ್ಯಮಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಸ್ಪಿ ಉಮಾ ಪ್ರಶಾಂತ್, ಗುತ್ತಿಗೆದಾರನಿಗೆ ನಕಲಿ ಚಿನ್ನ ನೀಡಿ 45 ಲಕ್ಷ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್ ಹಾಗೂ ಈಶ್ವರಪ್ಪ ಎಂಬುವರನ್ನು ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚೀಮನಹಳ್ಳಿ ಮೂಲದ ಗುತ್ತಿಗೆದಾರ ಗೋವರ್ಧನ ಅವರು ಚನ್ನಗಿರಿಯಲ್ಲಿ ವಿವಿಧ‌ ಕಾಮಗಾರಿ ಗುತ್ತಿಗೆಯನ್ನು ಪಡೆದು ಕೆಲಸ ಮಾಡಿದ್ದರು. ಗುತ್ತಿಗೆದಾರ ಗೋವರ್ಧನ್ ಬಳಿ ಮೊದಲು ಕಾರ್ಮಿಕರಾಗಿ ಈ ಆರೋಪಿಗಳು ಕೆಲಸ ಮಾಡಿದ್ದರು ಎಂದು ತಿಳಿಸಿದರು.

ಆ ಪರಿಚಯದ ಮೇಲೆ ಗುತ್ತಿಗೆದಾರ ಗೋವರ್ಧನ್ ಅವರೊಂದಿಗೆ ಮೊಬೈಲ್ ಮೂಲಕ ಸಂಪರ್ಕಿಸಿದ ಸಂದೀಪ್ ಹಾಗೂ ಈಶ್ವರಪ್ಪ ಎಂಬ ಆರೋಪಿಗಳು, ನಮ್ಮ ಮನೆಯ ಪಾಯ ತೆಗೆಯುವಾಗಿ ಚಿನ್ನ ನಿಕ್ಷೇಪ ಪತ್ತೆಯಾಗಿದೆ ಎಂದು ಹೇಳಿದ್ದರು. ಗೋವರ್ಧನ್​ಗೆ ಕೆಲವೊಂದು ಅಸಲಿ ಚಿನ್ನದ ಬಿಲ್ಲೆಗಳನ್ನು ತೋರಿಸಿ ಆರೋಪಿಗಳು ಮೊದಲು ನಂಬಿಸಿದ್ದರು. ನಂತರ ಚನ್ನಗಿರಿಗೆ ಗೋವರ್ಧನ್ ಬಂದಿದ್ದ ವೇಳೆ ಸಂದೀಪ್ ಈಶ್ವರಪ್ಪ ಅವರಿಂದ 2.5 ಕೆಜಿ ‌ನಕಲಿ ಚಿನ್ನದ ಬಿಲ್ಲೆಗಳನ್ನು 45 ಲಕ್ಷ ರೂ. ನೀಡಿ ಪಡೆದಿದ್ದರು.

ನಂತರ ಆ ಚಿನ್ನದ ಬಿಲ್ಲೆಗಳನ್ನು ಬಂಗಾರದ ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ನಕಲಿ‌ ಚಿನ್ನ ಎಂಬ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವರ್ಧನ್ ಅವರು ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಎಸ್ಪಿ ಉಮಾ ಪ್ರಶಾಂತ್ ವಿವರಿಸಿದರು.

ಇದನ್ನೂ ಓದಿ:ಮನೆ ಅಡಿಪಾಯ ತೆಗೆಯುವಾಗ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ವಂಚನೆ: 60 ಲಕ್ಷ ರೂ.ಗೆ ಖರೀದಿಸಿ ಚಿನ್ನದ ಅಂಗಡಿಗೆ ಹೋದ ಗುತ್ತಿಗೆದಾರನಿಗೆ ಶಾಕ್!

ABOUT THE AUTHOR

...view details