ಕರ್ನಾಟಕ

karnataka

ಮುಸ್ಲಿಂ ಕುಟುಂಬದ ಮನೆಯಂಗಳದಲ್ಲಿ ಯಕ್ಷಗಾನ: ಕೋಮು ಸಾಮರಸ್ಯಕ್ಕೆ ಹೊಸ ಸೇತು...

By

Published : Nov 25, 2020, 7:49 PM IST

ಹಿಂದೂ ಕುಟುಂಬವೊಂದರ ಗೃಹ ಪ್ರವೇಶದಂದು ಆಯೋಜಿಸಿದ್ದ ಯಕ್ಷಗಾನ ಕಾರ್ಯಕ್ರಮವನ್ನು ಮುಸ್ಲಿಂ ಕುಟುಂಬವೊಂದು ತಮ್ಮ ಅಂಗಳದಲ್ಲಿಯೇ ಆಯೋಜಿಸಲು ಅವಕಾಶ ನೀಡಿದೆ. ಈ ಮೂಲಕ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಈ ಎರಡೂ ಮನೆಯವರು ಪ್ರೇರಣೆಯಾಗಿದ್ದಾರೆ..

Yakshagana
ಯಕ್ಷಗಾನ

ಮಂಗಳೂರು:ಹಿಂದೂ ಕುಟುಂಬವೊಂದರ ಗೃಹ ಪ್ರವೇಶದಂದು ಆಯೋಜಿಸಿದ್ದ ಯಕ್ಷಗಾನ ಕಾರ್ಯಕ್ರಮವನ್ನು ಮುಸ್ಲಿಂ ಕುಟುಂಬವೊಂದು ತಮ್ಮ ಅಂಗಳದಲ್ಲಿಯೇ ಆಯೋಜಿಸಲು ಅವಕಾಶ ನೀಡಿ ಕೋಮು ಸಾಮರಸ್ಯ ಮೆರೆದ ಘಟನೆ ಮಂಗಳೂರಿನ ಕಿನ್ನಿಗೋಳಿಯಲ್ಲಿ ನಡೆದಿದೆ.

ನಾಗೇಶ್ ಎಂಬುವರು ಕಿನ್ನಿಗೋಳಿಯಲ್ಲಿ ನೂತನವಾಗಿ ಮನೆಯೊಂದನ್ನು ಕಟ್ಟಿಸಿದ್ದು, ನ.20ರಂದು ಗೃಹ ಪ್ರವೇಶ ಕಾರ್ಯಕ್ರಮವಿತ್ತು. ಯಕ್ಷಗಾನ ಹವ್ಯಾಸಿ ಕಲಾವಿದರಾಗಿರುವ ನಾಗೇಶ್ ಅವರು ಅಂದು ಸಂಜೆ ಗೃಹ ಪ್ರವೇಶದ ನಿಮಿತ್ತ ಯಕ್ಷಗಾನವನ್ನು ಆಯೋಜಿಸಿದ್ದರು. ಆದರೆ, ಯಕ್ಷಗಾನ ನಡೆಸಲು ಸ್ಥಳದ ಕೊರತೆಯಿದ್ದ ಕಾರಣ ನೆರೆಯ ಅಬ್ದುಲ್ ರಜಾಕ್ ಎಂಬುವರು ತಮ್ಮ ಮನೆಯ ಅಂಗಳದಲ್ಲಿಯೇ ಯಕ್ಷಗಾನ ಪ್ರದರ್ಶಿಸಲು ಅವಕಾಶ ನೀಡಿದ್ದಾರೆ.

ನಾಗೇಶ್ ಅವರು ತಮ್ಮ ಮನೆಗೆ ಇಟ್ಟ ಹೆಸರು 'ಶಮಂತಕ ರತ್ನ'. ಅದೇ ಹೆಸರಿನ ಪ್ರಸಂಗವನ್ನೇ ಯಕ್ಷಗಾನ ಪ್ರದರ್ಶನಕ್ಕೆ ಆಯೋಜಿಸಿದ್ದು, ಸಂಜೆ 6.30 ರಿಂದ ರಾತ್ರಿ 9ರವರೆಗೆ ಯಕ್ಷಗಾನ ಸಾಂಗವಾಗಿ ಆಯೋಜನೆಗೊಂಡಿದೆ. ಅಬ್ದುಲ್ ರಜಾಕ್ ಅವರ ಮನೆಯವರೂ, ನಾಗೇಶ್ ಅವರ ಮನೆಯವರೂ, ಸ್ಥಳೀಯರು ಬಹಳ ಸಂತೋಷದಿಂದ ಯಕ್ಷಗಾನವನ್ನು ಆಸ್ವಾದಿಸಿದ್ದಾರೆ.

ಮನೆಯನ್ನು ಕಟ್ಟುವಾಗಲೂ ಈ ಮುಸ್ಲಿಂ ಕುಟುಂಬ ನೀರು ಪೂರೈಸಿ ನಾಗೇಶ್ ಕುಟುಂಬಕ್ಕೆ ನೆರವಾಗಿದೆ. ನಾಲ್ಕು ವರ್ಷಗಳ ಹಿಂದೆ ರಜಾಕ್ ಅವರ ಮನೆಯ ಗೃಹ ಪ್ರವೇಶದ ದಿನವೇ ನಾಗೇಶ್ ಅವರ ಮನೆಯ ಗೃಹಪ್ರವೇಶವೂ ನಡೆದಿರುವುದು ಕಾಕತಾಳೀಯ. ಈ ಮೂಲಕ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಈ ಎರಡೂ ಮನೆಯವರು ಹೊಸ ಸೇತು ನಿರ್ಮಿಸಿದ್ದಾರೆ.

ABOUT THE AUTHOR

...view details