ಕರ್ನಾಟಕ

karnataka

ಕುತ್ತಾರು, ಬೈಕ್ ಅಪಘಾತದ ಗಾಯಾಳುವಿನ ಮೆದುಳು ನಿಷ್ಕ್ರಿಯ.. ಕುಟುಂಬಸ್ಥರಿಂದ ಮಗನ ಅಂಗಾಂಗ ದಾನ

By

Published : Jan 8, 2023, 6:12 PM IST

ಬೈಕ್​ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯ- ಕುಟುಂಬದಿಂದ ಅಂಗಾಂಗ ದಾನ- ಮತ್ತೊಂದೆಡೆ ವಿದ್ಯಾರ್ಥಿ ಆತ್ಮಹತ್ಯೆ -ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕರಣ

ಭೂಷಣ್ ರೈ
ಭೂಷಣ್ ರೈ

ಉಳ್ಳಾಲ (ಮಂಗಳೂರು) : ನಿನ್ನೆ ತಡರಾತ್ರಿ ಕುತ್ತಾರು ದೇವಸ್ಥಾನ ಬಳಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತೊಕ್ಕೊಟ್ಟು ಸೇವಂತಿಗುತ್ತು ನಿವಾಸಿ ಭೂಷಣ್ ರೈ ಮೆದುಳು ನಿಷ್ಕ್ರಿಯಗೊಂಡಿದ್ದು, ಮನೆಮಂದಿ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ.

ಅಪಘಾತ ನಂತರ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಗಾಯಾಳು ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ತಿಳಿಸಿದ್ದಾರೆ. ಸಂಜೆ 4 ಗಂಟೆ ನಂತರ ನಡೆದ ವೈದ್ಯಕೀಯ ಪರೀಕ್ಷೆ ಬಳಿಕ ಅಂಗಾಂಗ ದಾನ ಮಾಡುವ ಕುರಿತು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು. ಮೃತ ಭೂಷಣ್ ಅವರ ಸಹೋದರಿಯ ವಿವಾಹ ಎರಡು ವಾರಗಳ ಹಿಂದೆಯಷ್ಟೇ ನೆರವೇರಿತ್ತು. ತಂದೆ ಮಾರಪ್ಪ ರೈ ವರ್ಷದ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಭೂಷಣ್ ತಾಯಿ ಜತೆಗೆ ನೆಲೆಸಿದ್ದರು. ಇದೀಗ ಭೂಷಣ್​ ಅಗಲಿಕೆಯಿಂದ ಕುಟುಂಬಕ್ಕೆ ಮತ್ತಷ್ಟು ನೋವಾಗಿದೆ.

ಡಿವೈಡರ್ ಗುದ್ದಿದ ಬೈಕ್​.. ಸವಾರ ಗಂಭೀರ ಗಾಯ..ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಗೆ ಬರುತ್ತಿದ್ದ ಬೈಕ್ ಚಾಲಕ ನಿಯಂತ್ರಣ ತಪ್ಪಿ ಡಿವೈಡರ್​ಗೆ ಗುದ್ದಿದ ಘಟನೆ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ ಸಮೀಪ ಶನಿವಾರ ತಡರಾತ್ರಿ ವೇಳೆ ಸಂಭವಿಸಿತ್ತು. ಭೂಷಣ್ ರೈ (20) ಗಂಭೀರವಾಗಿ ಗಾಯಗೊಂಡಿದ್ದರು. ಕಲ್ಲಾಪು ಬುರ್ದುಗೋಳಿ ಕೋಲದಲ್ಲಿ ಭಾಗವಹಿಸಿದ್ದ ಇವರು ಬೈಕಿನಲ್ಲಿ ಕುತ್ತಾರಿನತ್ತ ಬರುವ ಸಂದರ್ಭ ಬೈಕ್ ಡಿವೈಡರಿಗೆ ಬಡಿದಿದ್ದು, ಪರಿಣಾಮ ಭೂಷಣ್ ಇನ್ನೊಂದು ರಸ್ತೆಗೆ ಎಸೆಯಲ್ಪಟ್ಟಿದ್ದರು. ತಲೆಗೆ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಕೆಲಕಾಲ ಬಿದ್ದಿದ್ದ ಅವರನ್ನು ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಕೇರಳದ ಆಲ್ಟೋ ಕಾರಿನಲ್ಲಿದ್ದ ಐವರ ತಂಡ ತಕ್ಷಣ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದರು.

ಅಪಘಾತಕ್ಕೊಳಗಾದ ಬೈಕ್

ವಿಧಿಯಾಟವೇ ಬೇರೆಯಾಗಿತ್ತು.. ತಲೆಗೆ ಗಾಯವಾದ ಹಿನ್ನೆಲೆ ಭೂಷಣ್​ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ವೈದ್ಯರು ಎಲ್ಲಾ ರೀತಿಯಲ್ಲಿ ಪರಿಶೀಲಿಸಿದ ನಂತರ ಭೂಷಣ್ ಅವರ ಮೆದುಳು ನಿಷ್ಕ್ರಿಯ ಆಗಿದೆ ಎಂದು ತಿಳಿಸಿದರು. ಈ ಸುದ್ದಿ ಕೇಳಿದ ಕುಟುಂಬಕ್ಕೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಯಿತು. ಅಪಘಾತದಲ್ಲಿ ಬೈಕ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿ ಆತ್ಮಹತ್ಯೆ: ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಎಂಬಲ್ಲಿ ಭಾನುವಾರ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಹೇಮಂತ್ ಎಂದು ಗುರುತಿಸಲಾಗಿದೆ. ಈತ ಪುಣಚದ ಮಣಿಲ ನಿವಾಸಿಯಾಗಿದ್ದು, ದೇವಿನಗರ ಶಾಲೆಯ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದ ಎಂದು ತಿಳಿದುಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೇಮಂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಚಿತ್ರದುರ್ಗ/ರಾಯಚೂರು/ವಿಜಯಪುರ:ಚಿತ್ರದುರ್ಗದ ಚಳ್ಳಕೆರೆಯಲ್ಲಿ ಬಸ್​ನಿಂದ ಕೆಳಗೆ ಬಿದ್ದು, ಯುವಕ ಮೃತಪಟ್ಟರೆ, ರಾಯಚೂರಿನಲ್ಲಿ ಬಸ್​ ಡಿಕ್ಕಿಯಾಗಿ ವಿದ್ಯಾರ್ಥಿ ಅಸುನೀಗಿದ್ದಾನೆ. ಇನ್ನೊಂದೆಡೆ ವಿಜಯಪುರದಲ್ಲಿ ಈಜಾಡಲು ಹೋಗಿ ಯುವಕ ನೀರುಪಾಲಾದ ಘಟನೆ ನಡೆದಿದೆ.

ಬಸ್ ಬಾಗಿಲಲ್ಲಿ ಕಾದಿತ್ತು ಸಾವು: ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದಾಗಿ ಬಸ್ಸಿನ ಮುಂಬಾಗಿಲಿನಲ್ಲಿ ನಿಂತಿದ್ದ ಯುವಕ ಆಯತಪ್ಪಿ ಕೆಳಗೆ ಬಿದ್ದಿದ್ದು, ಆತನ ಮೇಲೆ ಬಸ್​ ಹರಿದಿದೆ. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿಗೆ ಚಳ್ಳಕೆರೆ ಟೌನ್ ಕಡೆಯಿಂದ ರೆಡ್ಡಿಹಳ್ಳಿ ಕಡೆಗೆ ಬಸ್‌ ಬರುತ್ತಿತ್ತು. ಈ ಬಸ್ಸಿನ ಮುಂಬಾಗಿಲಿನಲ್ಲಿ ನಿಂತಿದ್ದ ಚೇತನ್​ ಎಂಬ ಯುವಕ ಆಯತಪ್ಪಿ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಸ್ ಚಕ್ರ ಆತನ ಸೊಂಟ ಮತ್ತು ಕಾಲಿನ ಮೇಲೆ ಹರಿದಿದೆ. ತಕ್ಷಣ ಚೇತನ್​ ಅವರನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸ್ಥಳಕ್ಕೆ ಚಳ್ಳಕೆರೆ ಪಿಎಸ್ಐ ಡಿ.ತಿಮ್ಮಣ್ಣ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಓದಿ:ರಾಜ್ಯದ ವಿವಿಧೆಡೆ 3 ಪ್ರತ್ಯೇಕ ಘಟನೆ: ವಿದ್ಯಾರ್ಥಿ ಸೇರಿ ಮೂವರು ಸಾವು

ABOUT THE AUTHOR

...view details