ಬಂಟ್ವಾಳ(ದಕ್ಷಿಣ ಕನ್ನಡ):ದ್ವಿತೀಯ ಪಿಯುಸಿಯಲ್ಲಿ 467 ಅಂಕ ಪಡೆದು ಸಾಧನೆಗೈದ ಬಂಟ್ವಾಳ ತಾಲೂಕು ಕೂರಿಯಾಳ ಗ್ರಾಮದ ದಿವ್ಯಾಂಗ ಬಾಲಕಿ ಭಾಗ್ಯಶ್ರೀಗೆ ಮುಂದಿನ ಪದವಿ ಶಿಕ್ಷಣ ಮುಂದುವರಿಸಲು ನೆರವಿನ ಭರವಸೆ ದೊರೆತಿದೆ. ತಾಲೂಕಿನ ಫರಂಗೀಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಅವರು ಭಾಗ್ಯಶ್ರೀಯನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪದವಿ ಶಿಕ್ಷಣ ಪೂರೈಸುವಂತೆ ಮನವೊಲಿಸಿದ್ದಾರೆ.
ಮೂರು ವರ್ಷ ಪದವಿ ಶಿಕ್ಷಣಕ್ಕೆ ಬೇಕಾಗುವ ವ್ಯವಸ್ಥೆಯನ್ನು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಕಲ್ಪಿಸುವ ಭರವಸೆ ನೀಡಿದ್ದಲ್ಲದೆ ಈ ಸಂಬಂಧ ಬಂಟ್ವಾಳ ಎಸ್ವಿಎಸ್ ಕಾಲೇಜಿನ ಪ್ರಾಂಶುಪಾಲರೊಂದಿಗೂ ಕೃಷ್ಣಕುಮಾರ್ ಪೂಂಜಾ ಅವರು ಮಾತುಕತೆ ನಡೆಸಿದ್ದಾರೆ. ಈ ನಡುವೆ ಮುಂಬೈ ಕುಲಾಲ ಸಂಘದ ಅಧ್ಯಕ್ಷ ದೇವದಾಸ ಕುಲಾಲ್ ಸೇರಿ ಇನ್ನೂ ಕೆಲ ದಾನಿಗಳು ನೆರವಾಗುವಂತೆ ಭರವಸೆಯಿತ್ತಿದ್ದಾರೆ ಎಂದು ಭಾಗ್ಯಶ್ರೀಯ ತಂದೆ ಕೇಶವ ಕುಲಾಲ್ ತಿಳಿಸಿದ್ದಾರೆ.