ಕರ್ನಾಟಕ

karnataka

ಸುರತ್ಕಲ್ ಹತ್ಯೆ ಪ್ರಕರಣ: ನಾಲ್ಕು‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

By

Published : Dec 25, 2022, 9:33 AM IST

Updated : Dec 25, 2022, 12:00 PM IST

ಶನಿವಾರ ರಾತ್ರಿ ಸುರತ್ಕಲ್‌ನಲ್ಲಿ ಅಂಗಡಿ ಮಾಲೀಕ ಜಲೀಲ್ ಹತ್ಯೆ ನಡೆದಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಇದೀಗ ಅಲ್ಲಿನ ನಾಲ್ಕು‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

suratkal murder case
ನಾಲ್ಕು‌ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಮಂಗಳೂರು (ದಕ್ಷಿಣ ಕನ್ನಡ):ಕಳೆದ ರಾತ್ರಿ ಅಂಗಡಿ ಮಾಲೀಕ ಜಲೀಲ್ ಎಂಬವರ ಹತ್ಯೆ ನಡೆದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸುರತ್ಕಲ್ ಸುತ್ತಮುತ್ತಲಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಮಂಗಳೂರು ನಗರ ಪೊಲೀಸ್ ‌ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಮಂಗಳೂರು ‌ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಆದೇಶಿಸಿದ್ದಾರೆ.

27ರ ವರೆಗೆ ನಿಷೇಧಾಜ್ಞೆ: ಇಂದು ಬೆಳಿಗ್ಗೆ 6 ಗಂಟೆಯಿಂದ ಡಿಸೆಂಬರ್ 27 ಮುಂಜಾನೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಸರ್ಕಾರದಿಂದ ಮತ್ತು ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗಿದು ಅನ್ವಯಿಸುವುದಿಲ್ಲ. ಕ್ರಿಸ್ಮಸ್ ಆಚರಣೆ, ಧಾರ್ಮಿಕ ಕಾರ್ಯಕ್ರಮ ಮತ್ತು ಅಗತ್ಯ ತುರ್ತು ಸೇವೆಗಳಿಗೂ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.

ಮದ್ಯದಂಗಡಿಗಳು ಬಂದ್:ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ‌ ಮಾರಾಟಕ್ಕೆ ನಿಷೇಧವಿದೆ.

ಕೈಗಾರಿಕೆಗಳಲ್ಲಿ ಪಾಳಿ ಬದಲಾವಣೆಗೆ ಸೂಚನೆ:ಸುರತ್ಕಲ್, ಬಜಪೆ, ಕಾವೂರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ಸಂಸ್ಥೆಗಳು ಕೆಲಸದ ಪಾಳಿಯನ್ನು ಇಂದು ಮತ್ತು ನಾಳೆ ಸಂಜೆ 6 ಗಂಟೆವರೆಗೆ ಬದಲಿಸುವಂತೆ ಸೂಚಿಸಲಾಗಿದೆ. ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಸಿಬ್ಬಂದಿ ಹೊರಗಡೆ ಓಡಾಡುವಂತಿಲ್ಲ.

ನಿನ್ನೆ ರಾತ್ರಿ ನಡೆದಿದ್ದೇನು?:ಶನಿವಾರ ರಾತ್ರಿ ಸುರತ್ಕಲ್​ನಲ್ಲಿ ದುಷ್ಕರ್ಮಿಗಳಿಬ್ಬರು ಕೃಷ್ಣಾಪುರ ನಿವಾಸಿ ಜಲೀಲ್ ಎಂಬುವವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ನೈತಂಗಡಿಯಲ್ಲಿ ಜಲೀಲ್ ದಿನಸಿ ಅಂಗಡಿ ಹೊಂದಿದ್ದಾರೆ. ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಆರೋಪಿಗಳು ಎದೆಯ ಭಾಗಕ್ಕೆ ಚೂರಿಯಿಂದ ಬಲವಾಗಿ ಇರಿದು ಪರಾರಿಯಾಗಿದ್ದರು.

ಚಾಕು ಇರಿತಕ್ಕೊಳಗಾದ ಜಲೀಲ್ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪೋಸ್ಟ್ ಮಾರ್ಟಂ ವ್ಯವಸ್ಥೆಗಾಗಿ ಅವರ ಮೃತದೇಹವನ್ನು ಎ.ಜೆ.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಹತ್ಯೆ ಪ್ರಕರಣದಿಂದಾಗಿ ಸುರತ್ಕಲ್​ನ ಸುತ್ತಮುತ್ತ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.

ಮನೆಗೆ ಮೃತದೇಹ ರವಾನೆ:ಜಲೀಲ್ ಮೃತದೇಹವನ್ನು ಎ.ಜೆ.ಆಸ್ಪತ್ರೆಯ ಶವಾಗಾರದಿಂದ ಇಂದು ಕೃಷ್ಣಾಪುರದ ಅವರ ಮನೆಗೆ ರವಾನಿಸಲಾಗಿದೆ. ಕಾಟಿಪಳ್ಳ 9ನೇ ಬ್ಲಾಕ್​ನಲ್ಲಿರುವ ನಿವಾಸದಲ್ಲಿ ಕುಟುಂಬ ಸದಸ್ಯರಿಗೆ, ಸಾರ್ವಜನಿಕರಿಗೆ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಂಜಿಮೊಗರಿನ ಮಸೀದಿ ಆವರಣದಲ್ಲಿ ದಫನ್​ ಕಾರ್ಯ ನಡೆಯಲಿದೆ.

ಇದನ್ನೂ ಓದಿ:ಸುರತ್ಕಲ್​ನಲ್ಲಿ ಚೂರಿ ಇರಿತಕ್ಕೊಳಗಾದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಮಂಗಳೂರಿನಲ್ಲಿ 4ನೇ ಹತ್ಯೆ ಪ್ರಕರಣ:ನಿನ್ನೆ ರಾತ್ರಿ ನಡೆದ ಪ್ರಕರಣವೂ ಸೇರಿದಂತೆ ಈ ವರ್ಷದಲ್ಲಿ ಮಂಗಳೂರಿನಲ್ಲಿ ನಾಲ್ಕು ಹತ್ಯೆ ಪ್ರಕರಣಗಳು ನಡೆದಿವೆ. ಜುಲೈ 26 ರಂದು ರಾತ್ರಿ ಸುಳ್ಯದ ಬೆಳ್ಳಾರೆ ಎಂಬಲ್ಲಿ ಕೋಳಿ ಮಾಂಸದ ಅಂಗಡಿ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರ್ ಹತ್ಯೆ ಮಾಡಲಾಗಿತ್ತು. ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ಪ್ರವೀಣ್ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರದ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳ ವಹಿಸಿಕೊಳ್ಳುವಂತೆ ಆದೇಶಿಸಿತ್ತು. ಈ ಸಂಬಂಧ ಎನ್​ಐಎ ತನಿಖೆ ಮಾಡುತ್ತಿದೆ.

ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಹತ್ಯೆ ತನಿಖೆ ಎನ್‌ಐಎಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ

ಹಿಂದೆ ನಡೆದ ಪ್ರಕರಣಗಳು- ಫಾಜಿಲ್ ಹತ್ಯೆ:ಪ್ರವೀಣ್ ನೆಟ್ಟಾರ್ ಹತ್ಯೆ ನಡೆದ ಮೂರು ದಿನದಲ್ಲಿ ಅಂದರೆ ಜುಲೈ 26ರಂದು ಸುರತ್ಕಲ್​ನ ಅಂಗಡಿಯೊಂದರ ಮುಂದೆ ನಿಂತಿದ್ದ ಕಾಟಿಪಳ್ಳ ಮಂಗಳಪೇಟೆ ನಿವಾಸಿ ಫಾಜಿಲ್​ ಎಂಬಾತನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಕುಕ್ಕರ್ ಬಾಂಬ್ ಸ್ಫೋಟ: ನವೆಂಬರ್ 19 ರಂದು ಮಂಗಳೂರಿನ ಗರೋಡಿಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಉಗ್ರ ಶಾರಿಕ್ ಕೈಯಲ್ಲಿದ್ದ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ಇದರಿಂದ ಗಾಯಗೊಂಡಿದ್ದ ಆರೋಪಿ ಶಾರಿಕ್ ಮತ್ತು ರಿಕ್ಷಾ ಚಾಲಕ ಪುರುಷೋತ್ತಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣವನ್ನು ಕೇಂದ್ರ ಸರ್ಕಾರ ಎನ್​ಐಎಗೆ ಹಸ್ತಾಂತರಿಸಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:

ಸುರತ್ಕಲ್​ ಯುವಕ ಫಾಜಿಲ್​ ಹತ್ಯೆ ಪ್ರಕರಣ: 21 ಮಂದಿ ಪೊಲೀಸರ​ ವಶಕ್ಕೆ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರಿಕ್ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್​

Last Updated :Dec 25, 2022, 12:00 PM IST

ABOUT THE AUTHOR

...view details