ಕರ್ನಾಟಕ

karnataka

ಡಬಲ್​ ಇಂಜಿನ್​ ಸರ್ಕಾರ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ: ಮಂಗಳೂರಿನಲ್ಲಿ ಪ್ರಧಾನಿ ಮೋದಿ ಹೇಳಿಕೆ

By

Published : Sep 2, 2022, 3:10 PM IST

Updated : Sep 2, 2022, 8:06 PM IST

ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಲು ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸಿದ್ದರು.

pm-narendra-modi-speech-in-mangaluru
ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭಾಷಣ

ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಎನ್​ಎಂಪಿಎ ಮತ್ತು ಎಮ್​ಆರ್​ಪಿಎಲ್​ಗೆ ಸೇರಿದ 3,800 ಕೋಟಿ ರೂ. ಮೊತ್ತದ ಎಂಟು ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ ನೆರವೇರಿಸಿ ಪ್ರಧಾನಿ ಮೋದಿ ಮಾತನಾಡಿದರು. ಇದಕ್ಕೂ ಮುನ್ನ ಮಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು.

ನಂತರ ಗೋಲ್ಡ್ ​ಫಿಂಚ್​​ ಸಿಟಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಹಡಗು, ಜಲಸಾರಿಗೆ ಸಚಿವ ಸರ್ಬಾನಂದ್​ ಸೋನೊವಾಲ್​ ಗೌರವಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕರು ಉಡುಪಿ ಶ್ರೀಕೃಷ್ಣನ ವಿಗ್ರಹ, ಪರಶುರಾಮ ಪುತ್ಥಳಿ ಸಮರ್ಪಣೆ ಮಾಡಿ ಉಡುಪಿ ಮಲ್ಲಿಗೆ ಹಾರವನ್ನು ಹಾಕಿದರು.

ಸಿಎಂ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ದಕ್ಷಿಣ ಕನ್ನಡ ಸಂಸದ ಕಟೀಲು, ಶಾಸಕ ಭರತ್​ ಶೆಟ್ಟಿ ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಶ್ರೀಪಾದ್ ನಾಯಕ್, ಶಾಂತನು ಠಾಕೂರ್, ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಸುನೀಲ್ ಕುಮಾರ್ ಹಾಗೂ ಜಿಲ್ಲೆಯ ಶಾಸಕರು ಉಪಸ್ಥಿತರಿದ್ದರು.

ಅಭಿವೃದ್ಧಿಯ ಹೊಸ ಶಕೆಯು ಆರಂಭ:ಕಾರ್ಯಕ್ರಮದಲ್ಲಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಡಬಲ್ ಇಂಜಿನ್ ಸರ್ಕಾರದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆಯು ಆರಂಭವಾಗಿದೆ. 3,800 ಕೋಟಿ ರೂ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಚಾಲನೆ ನೀಡಿದ್ದು, ಈ ಮೂಲಕ ಕರಾವಳಿಯ ಅಭಿವೃದ್ಧಿಗೆ ವೇಗ ದೊರಕಲಿದೆ. ಬಂದರಿನ ವಹಿವಾಟು ಸಾಮರ್ಥ್ಯ ನಾಲ್ಕು ಪಟ್ಟು ಹೆಚ್ಚಾಗಲಿದ್ದು, ದೇಶದ ಆರ್ಥಿಕತೆಗೆ ಬಲ ತುಂಬಲಿದೆ ಎಂದರು.

ಇದನ್ನೂ ಓದಿ:ಮಂಗಳೂರು: ಪ್ರಧಾನಿ ಮೋದಿ ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ರಾಜ್ಯದ ಸಿಆರ್​ಝೆಡ್​ ಮಾಸ್ಟರ್ ಪ್ಲಾನ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಕಳೆದ 30 ವರ್ಷಗಳ ಹೋರಾಟಕ್ಕೆ ಇದೀಗ ಫಲ ದೊರಕಿದೆ. ಇದರಿಂದ ಕರಾವಳಿಯ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಸಾಗರ ಮಾಲಾ ಯೋಜನೆಯಡಿ ಕಾರವಾರ ಬಂದರಿನಲ್ಲಿ 276 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳು ಅನುಷ್ಟಾನಗೊಳ್ಳುತ್ತಿವೆ. ಇದೇ ರೀತಿ ಹೊನ್ನಾವರ ಮತ್ತು ಕುಮಟಾ ಬಂದರುಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಭಾಷಣ ಮಾಡಿದ ಮೋದಿ ಪ್ರಧಾನಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಅಬ್ಬಕ್ಕ ಮತ್ತು ರಾಣಿ ಚೆನ್ನಭೈರಾದೇವಿ ಅವರು ನಮಗೆ ಸ್ಪೂರ್ತಿಯಾಗಿದ್ದಾರೆ ಎಂದು ಸ್ಮರಿಸಿದರು. ಒಟ್ಟು 27 ನಿಮಿಷದ ಭಾಷಣ ಮಾಡಿದರು.

ಪ್ರಧಾನಿ ಭಾಷಣದ ಮುಖ್ಯಾಂಶಗಳು...

  • ಮೇಕ್​ ಇನ್​ ಇಂಡಿಯಾ ವಿಸ್ತರಣೆ ಅಗತ್ಯವಾಗಿದೆ. ದೇಶದಲ್ಲಿ ಮೂಲಭೂತ ಸೌಲಭ್ಯಗಳಲ್ಲಿ ಅಭೂತಪೂರ್ವ ಕಾರ್ಯವಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಬಂದರುಗಳ ಸಾಮರ್ಥ್ಯ ದುಪ್ಪಟ್ಟಾಗಿದೆ.
  • ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ನಾವು ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಬಹುದು.
  • ಕರ್ನಾಟಕದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸಾಗರ್​ ಮಾಲಾ ಯೋಜನೆಯ ಲಾಭವು ಕರ್ನಾಟಕಕ್ಕೆ ಸಿಕ್ಕಿದೆ. ಡಬಲ್​ ಇಂಜಿನ್​ ಸರ್ಕಾರ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ.
  • ದೇಶದಲ್ಲಿ ಕ್ಲೀನ್​ ಎಕನಾಮಿ ಎನ್ನುವುದು ಜನರ ಆಶಯವಾಗಿದೆ. ಕರ್ನಾಟಕದಲ್ಲೂ ಡಬಲ್​ ಇಂಜಿನ್ ಸರ್ಕಾರ ಜನರ ಆಕಾಂಕ್ಷೆಗಳನ್ನು ಪೂರೈಸಲು ಕೆಲಸ ಮಾಡುತ್ತಿದೆ. ಪಶ್ಚಿಮ ಘಟ್ಟಗಳು ಹಾಗೂ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರವಾಸೋದ್ಯಮದಿಂದ ಸಾಕಷ್ಟು ಲಾಭಗಳಿವೆ.
  • ವಿಶ್ವದ ಅತಿ ದೊಡ್ಡ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ ಮೂಲಕ ಆರೋಗ್ಯ ಸೇವೆಯನ್ನು ತಳಮಟ್ಟದವರೆಗೂ ಕೊಂಡೊಯ್ದಿದ್ದೇವೆ. ಇದರ ಮೂಲಕ ಬಡವರು ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಸಮರ್ಥರಾಗಿದ್ದಾರೆ. ವೈದ್ಯಕೀಯ ವೆಚ್ಚಗಳಿಂದಾಗಿ ಅವರ ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕದಂತೆ ಆಯುಷ್ಮಾನ್ ಭಾರತ್ ಪ್ರಮುಖ ಪಾತ್ರ ವಹಿಸಿದೆ.
  • ಸಾಗರ ಮಾಲಾ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲ್ವೇ ಹಳಿಗಳ ವಿದ್ಯುದ್ದೀಕರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾಲ್ಕು ಪಟ್ಟು ಹೆಚ್ಚಿನ ಸಾಧನೆ ಮಾಡಲಾಗಿದೆ.
  • ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದಲ್ಲಿ 30 ಲಕ್ಷ ಮನೆಗಳಿಗೆ ನೇರವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 30 ಲಕ್ಷ ಫಲಾನುಭವಿಗಳಿಗೆ ನಾಲ್ಕು ಸಾವಿರ ಕೋಟಿ ರೂ.ಮೊತ್ತದ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡವಾಗಿದೆ.
  • ಇಂದು ಕೊಚ್ಚಿಯಲ್ಲಿ ರಾಷ್ಟ್ರದ ಪ್ರಥಮ ಸ್ವದೇಶಿ ಏರ್‌ಕ್ರಾಫ್ಟ್ ವಾಹಕ ನೌಕೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ದೇಶದ ಸೇನಾ ಸುರಕ್ಷತೆಗೆ ಹಾಗೂ ಆರ್ಥಿಕ ಸುರಕ್ಷತೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ.
  • ನವ ಮಂಗಳೂರು ಬಂದರಿನಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ 3800 ಕೋಟಿ ರೂ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಇದರಿಂದ ದೇಶದ ಆರ್ಥಿಕತೆಗೆ ಮಾತ್ರವಲ್ಲದೆ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಸಲು ಸಾಧ್ಯವಾಗಲಿದೆ.
  • ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಸ್ಥಳೀಯ ಕೃಷಿಕರಿಗೆ ಹಾಗೂ ಮೀನುಗಾರರಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಸುಲಭವಾಗಲಿದೆ. ಕಡಿಮೆ ವೆಚ್ಚದಲ್ಲಿ ಉತ್ಪನ್ನಗಳ ರಫ್ತು ಸಾಧ್ಯವಾಗಲಿದ್ದು, ನವ ಮಂಗಳೂರು ಬಂದರಿನ ಸಾಮರ್ಥ್ಯ ದ್ವಿಗುಣಳ್ಳಲಿದೆ.

ಲೋಕಾರ್ಪಣೆಗೊಂಡ ಯೋಜನೆಗಳು

  • ಕಂಟೈನರ್ ಗಳು ಹಾಗೂ ಇತರ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ (281 ಕೋಟಿ ರೂ.)
  • ಬಿಎಸ್ VI ಉನ್ನತೀಕರಣ ಯೋಜನೆ (1829 ಕೋಟಿ ರೂ.)
  • ಸಮುದ್ರ ನೀರಿನ ಸಂಸ್ಕರ ಣಾ ಘಟಕ (677 ಕೋಟಿ ರೂ.)

ಶಂಕುಸ್ಥಾಪನೆ ಮಾಡಿದ ಯೋಜನೆ

  • ಎನ್ಎಂಪಿಟಿಯಲ್ಲಿ ಸಮಗ್ರ ಎಲ್ ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ (ಅಂದಾಜು ವೆಚ್ಚ 500 ಕೋಟಿ ರೂ.)
  • ಶೇಖರಣಾಗಾರ ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ (100 ಕೋಟಿ ರೂ.)
  • ಬಿಟುಮಿನ್ ಶೇಖರಣಾ ಘಟಕಗಳ ನಿರ್ಮಾಣ (100 ಕೋಟಿ ರೂ.)
  • ಬಿಟುಮಿನ್ ಮತ್ತು ಖಾದ್ಯ ತೈಲ ಶೇಖರಣಾ ಘಟಕ ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ (100 ಕೋಟಿ ರೂ.)
  • ಕುಳಾಯಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿ

ಅಹಿತಕರ ಘಟನೆಗಳು

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ವರದಿಯಾಗಿದೆ.

  • ಕಾರ್ಯಕ್ರಮಕ್ಕೆ ಭಾಗವಹಿಸಲು ಕರಿಬಣ್ಣದ ಬಟ್ಟೆ ತೊಟ್ಟು ಬಂದವರನ್ನು ತೆಗೆಸಲಾಯಿತು.
  • ಭದ್ರತೆ ನೋಡಿಕೊಳ್ಳುತ್ತಿದ್ದ ವಾಹನವೊಂದು ಜನಸಾಗಾರದ ನಡುವೆ ತೆರಳಲು ಸಾಧ್ಯವಾಗದೇ ಡಿವೈಡರ್ ಮೇಲೆ ಹೋಗಿ ಮತ್ತೊಂದು ಬದಿಯ ರಸ್ತೆಗೆ ತೆರಳಬೇಕಾಯಿತು.
  • ಪ್ರಧಾನಮಂತ್ರಿ ಗಳು ಮೈದಾನದಿಂದ ತೆರಳುವ ಸಂದರ್ಭದಲ್ಲಿ ಅವರ ಕಾರಿನ ಬಳಿಗೆ ಮಾತನಾಡಲು ವ್ಯಕ್ತಿಯೊಬ್ಬ ತೆರಳಿದ ವೇಳೆ ಪೊಲೀಸರು ಆತನನ್ನು ತಡೆಹಿಡಿದರು.
  • ಪ್ರಧಾನಮಂತ್ರಿಗಳು ಮೈದಾನದಿಂದ ವಾಪಾಸು ತೆರಳುವ 15 ನಿಮಿಷ ಮೊದಲು ರಸ್ತೆಗೆ ಬಂದಿದ್ದ ಜನರನ್ನು ಲಾಠಿ ಬೀಸಿ ಚದುರಿಸಲಾಯಿತು.

ಇದನ್ನೂ ಓದಿ:ಹವಾಮಾನ ವೈಪರೀತ್ಯ: ಕೊನೆ ಕ್ಷಣದಲ್ಲಿ ರಸ್ತೆ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಿದ ಪ್ರಧಾನಿ ಮೋದಿ

Last Updated :Sep 2, 2022, 8:06 PM IST

ABOUT THE AUTHOR

...view details