ಕರ್ನಾಟಕ

karnataka

ಹರ್ಷ ಕೊಲೆಗಡುಕರನ್ನು ಗೂಂಡಾಗಳೆನ್ನದೆ ಒಳ್ಳೆಯವರು ಅಂತ ಕರೆಯಬೇಕೆ? : ಸಚಿವ ಈಶ್ವರಪ್ಪ

By

Published : Apr 3, 2022, 7:55 PM IST

ಹಲಾಲ್ ಮತ್ತು ಜಟ್ಕಾ ಕಟ್ ವಿಚಾರದಲ್ಲಿ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಮುಸ್ಲಿಮರು ಹಲಾಲ್ ಮಾಡುವುದನ್ನು ತಿನ್ನಲಿ. ಹಿಂದೂಗಳು ಜಟ್ಕಾ ಕಟ್ ತಿನ್ನಲಿ. ಇದರಿಂದ ಕಾಂಗ್ರೆಸ್ ಪಕ್ಷದವರಿಗೆ ಏನು ತೊಂದರೆ?. ಈ ಬಗ್ಗೆ ಇವರೇಕೆ ಚರ್ಚೆ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.

k-s-eshwarappa
ಕೆ. ಎಸ್ ಈಶ್ವರಪ್ಪ

ಮಂಗಳೂರು: ಹರ್ಷ ಕೊಲೆಗಡುಕರನ್ನು ಗೂಂಡಾಗಳೆನ್ನದೆ ಒಳ್ಳೆಯವರು ಎಂದು ಕರೆಯಬೇಕೆ?. ಇಂತಹ ಕೊಲೆಗಡುಕರನ್ನು ಸಿದ್ದರಾಮಯ್ಯ ಹಾಗೂ ಡಿ. ಕೆ ಶಿವಕುಮಾರ್ ಏನೆಂದು ಕರೆಯುತ್ತಾರೆ ಎಂದು ಮಂಗಳೂರಿನಲ್ಲಿಂದು ಸಚಿವ ಕೆ. ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ಕಾಪಾಡಬೇಕೆಂಬ ಉದ್ದೇಶ ಬಿಜೆಪಿಗಿದೆ. ಆದರೆ, ಕಾಂಗ್ರೆಸ್ ನವರು ಹಿಜಾಬ್ ಬಗ್ಗೆ ಅಥವಾ ಹರ್ಷ ಕೊಲೆ ಬಗ್ಗೆ ಮುಸಲ್ಮಾನರು ಸಂತೃಪ್ತಿ ಪಡುವ ಹಾಗೆ ಹೇಳಿಕೆ ಕೊಡುತ್ತಾರೆ ಎಂದರು.

ಸಚಿವ ಕೆ. ಎಸ್ ಈಶ್ವರಪ್ಪ ಮಾತನಾಡಿದರು

ಹಿಂದೂ-ಮುಸ್ಲಿಂ ಎರಡು ಕಣ್ಣುಗಳು ಎಂದು ನೋಡಿದ್ದರೆ ಇವತ್ತು ಇಂತಹ ಕೋಮು ಪರಿಸ್ಥಿತಿ ಬರುತ್ತಿರಲಿಲ್ಲ. ಕೋಮು ದ್ವೇಷಕ್ಕೆ ಕಾರಣ ಪಿಎಫ್ಐ ಮತ್ತು ಎಸ್ ಡಿಪಿಐ ಎಂದು ಹೇಳುತ್ತಾರೆ. ಎಲ್ಲಾ ಮುಸ್ಲಿಂ ಶಾಸಕರು ಇದನ್ನೇ ಹೇಳಿದ್ದರು. ಆದರೆ, ಅಂದೇ ಸಿದ್ದರಾಮಯ್ಯ ಈ ಕೋಮು ದ್ವೇಷಕ್ಕೆ ಆರ್​​ಎಸ್​ಎಸ್​ ಮತ್ತು ಬಿಜೆಪಿ ಕಾರಣವೆಂದು ಹೇಳುತ್ತಾರೆ. ಇದರಲ್ಲಿ ಯಾವುದನ್ನು ನಂಬಬೇಕು. ಅವರ ಪಾಪವನ್ನು ನಮ್ಮ ಮೇಲೆ ಹೊರಿಸಲು ಯತ್ನಿಸುತ್ತಿದ್ದಾರೆ‌. ಹಳ್ಳಿಯ ಜನ ಸೇರಿದಂತೆ ಎಲ್ಲರೂ ಕೂಡ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಕೋಮುವಿಚಾರವನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ ಪಕ್ಷದವರು. ಬಿಜೆಪಿ ಹಾಗೂ ಬಜರಂಗದಳ ಕೋಮು ಸಂಘರ್ಷ ಮಾಡುತ್ತಿವೆ ಎಂದು ದೊಡ್ಡ ಧ್ವನಿಯಲ್ಲಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರು ಇದನ್ನೆಲ್ಲಾ ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು, ಸೋನಿಯಾ ಗಾಂಧಿ ಅವರನ್ನು ತಲುಪಲೆಂದು ಹಾಗೆ ಮಾತನಾಡುತ್ತಿದ್ದಾರೆ. ಮುಸ್ಲಿಮರನ್ನು ಹೆಚ್ಚಿಸುವ ಕೆಲಸವನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ನವರು ಮಾಡಿಕೊಂಡು ಬಂದಿದ್ದಾರೆ ಎಂದು ಸಚಿವ ಈಶ್ವರಪ್ಪ ಆರೋಪಿಸಿದರು.

ಉಡುಪಿಯಲ್ಲಿ 6 ಮಂದಿ ವಿದ್ಯಾರ್ಥಿನಿಯರ ಹಿಜಾಬ್ ವಿಚಾರವನ್ನು ದೇಶದ ಮಟ್ಟಕ್ಕೆ ಕೊಂಡೊಯ್ದವರು ಯಾರು?. ಆರು ಮಂದಿ ವಿದ್ಯಾರ್ಥಿನಿಯರೊಂದಿಗೆ ಕಾಂಗ್ರೆಸ್, ಎಸ್​ಡಿಪಿಐ, ಪಿಎಫ್ಐ ಕರೆದು ಮಾತನಾಡಿದ್ದರೆ, ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಬರುತ್ತಿತ್ತೇ?. ಇದನ್ನು ಹುಟ್ಟುಹಾಕಿದ್ದು ಅವರೇ. ಅವರು ವಿವಾದ ಹುಟ್ಟುಹಾಕಿ ಬಜರಂಗದಳ, ಬಿಜೆಪಿ, ಸಂಘ ಪರಿವಾರದ ಮೇಲೆ ಆರೋಪ ಮಾಡ್ತಾ ಇದ್ದಾರೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಕಿತಾಪತಿ ಮಾಡಿಕೊಂಡು ಬಂದಿದ್ದಾರೆ:ಹಲಾಲ್ ಮತ್ತು ಜಟ್ಕಾ ಕಟ್ ವಿಚಾರದಲ್ಲಿ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಮುಸ್ಲಿಮರು ಹಲಾಲ್ ಮಾಡುವುದನ್ನು ತಿನ್ನಲಿ. ಹಿಂದೂಗಳು ಜಟ್ಕಾ ಕಟ್ ತಿನ್ನಲಿ. ಇದರಿಂದ ಕಾಂಗ್ರೆಸ್ ಪಕ್ಷದವರಿಗೆ ಏನು ತೊಂದರೆ?. ಈ ಬಗ್ಗೆ ಇವರೇಕೆ ಚರ್ಚೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಆನಂದವಾಗಿ ಇರಬಾರದು ಎಂದು ಅವರು ಹೀಗೆ ಮಾಡುತ್ತಿದ್ದಾರೆ. ಹಿಂದಿನಿಂದಲೂ ಇವರು ಇದೇ ರೀತಿ ಕಿತಾಪತಿ ಮಾಡಿಕೊಂಡು ಬಂದಿದ್ದಾರೆ ಎಂದು ಹರಿಹಾಯ್ದರು.

ರಾಜಕೀಯ ಮಾಡಲು ಹೊರಟಿದ್ದಾರೆ : ಹರ್ಷ ಕೊಲೆ ಆಗಿರುವ ದಿನವೇ 10 ಮಂದಿಯನ್ನು ಬಂಧಿಸಲಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳ ಕಗ್ಗೊಲೆಯಾದಾಗ ಆರೋಪಿಗಳನ್ನು ಹಿಡಿಯಲು ಎಷ್ಟು ದಿನ ಬೇಕಾಯ್ತು. ಪರಿಹಾರದಲ್ಲಿ ತಾರತಮ್ಯ ಎಂದು ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಕೂಗಿ ಹೇಳುತ್ತಾರೆ. ಅವರು ಅಧಿಕಾರದಲ್ಲಿದ್ದ ಸಂದರ್ಭ ಕೊಲೆಯಾದ ಎಷ್ಟು ಮಂದಿಗೆ ಪರಿಹಾರ ಕೊಟ್ಟಿದ್ದಾರೆ. ಅವರು 25 ಲಕ್ಷ ರೂ. ಪರಿಹಾರ ಕೊಟ್ಟಿದ್ದಾರೆಯೇ? ಅವರಿಗೆ ಪರಿಹಾರದ ಬಗ್ಗೆ ಹೇಳುವ ಅಧಿಕಾರವೇ ಇಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಕೆ. ಎಸ್ ಈಶ್ವರಪ್ಪ ಹೇಳಿದರು.

ಓದಿ:ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌: ಬೆಂಗಳೂರಲ್ಲಿ ಇಬ್ಬರು ಆರೋಪಿಗಳು ಅರೆಸ್ಟ್​

TAGGED:

ABOUT THE AUTHOR

...view details