ಕರ್ನಾಟಕ

karnataka

ಮನೆಗೆ ನುಗ್ಗಿ ಕುಟುಂಬಸ್ಥರನ್ನು ಕಟ್ಟಿ ಹಾಕಿ ನಗದು ಚಿನ್ನಾಭರಣ ದೋಚಿದ ದರೋಡೆಕೋರರು

By ETV Bharat Karnataka Team

Published : Sep 7, 2023, 4:33 PM IST

Updated : Sep 7, 2023, 4:44 PM IST

ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯವರನ್ನು ಕಟ್ಟಿ ಹಾಕಿ ನಗದು ಮತ್ತು ಚಿನ್ನಾಭರಣ ದೋಚಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

Etv Bharatcrime-home-robbered-in-putturu
ಮನೆಗೆ ನುಗ್ಗಿ ಕುಟುಂಬಸ್ಥರನ್ನು ಕಟ್ಟಿ ಹಾಕಿ ನಗದು ಚಿನ್ನಾಭರಣ ದೋಚಿದ ದರೋಡೆಕೋರರು

ಮನೆಗೆ ನುಗ್ಗಿ ಕುಟುಂಬಸ್ಥರನ್ನು ಕಟ್ಟಿ ಹಾಕಿ ನಗದು ಚಿನ್ನಾಭರಣ ದೋಚಿದ ದರೋಡೆಕೋರರು

ಪುತ್ತೂರು (ದಕ್ಷಿಣ ಕನ್ನಡ): ಮನೆ ಬಾಗಿಲು ಮುರಿದು ಮನೆಗೆ ನುಗ್ಗಿದ ದರೋಡೆಕೋರರ ತಂಡ ಮನೆ ಮಂದಿಯನ್ನು ಕಟ್ಟಿ ಹಾಕಿ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ನಡೆದಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮತ್ತು ಬಡಗನ್ನೂರು ಗ್ರಾಮಪಂಚಾಯತ್ ನ ಮಾಜಿ ಸದಸ್ಯ ಗುರುಪ್ರಸಾದ್ ರೈ ಎಂಬವರ ಮನೆಯಲ್ಲಿ ದರೋಡೆ ನಡೆದಿದೆ.

ಸೆಪ್ಟೆಂಬರ್ 7ರ ಬೆಳಗ್ಗೆ 2 ಗಂಟೆ ಸುಮಾರಿಗೆ ಮನೆಯ ಮುಂದಿನ ಬಾಗಿಲ ಮೂಲಕ ಮನೆಯೊಳಗೆ ನುಗ್ಗಿದ ಸುಮಾರು 8 ಜನ ದುಷ್ಕರ್ಮಿಗಳ ತಂಡ ಗುರುಪ್ರಸಾದ್ ಅವರನ್ನು ಕಟ್ಟಿ‌ ಹಾಕಿ, ಕುತ್ತಿಗೆಗೆ ಚಾಕು ಹಿಡಿದು ಕಪಾಟಿನಲ್ಲಿದ್ದ ಸುಮಾರು 40 ಸಾವಿರ ರೂಪಾಯಿ ಮತ್ತು ಸುಮಾರು 15 ಪವನ್ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.

ದರೋಡೆಕೋರರು ಸುಮಾರು ಒಂದೂವರೆ ಗಂಟೆಗಳವರೆಗೆ ಮನೆಯೊಳಗೇ ಇದ್ದು, ಮನೆಯ ಎಲ್ಲ ಕಡೆ ತಡಕಾಡಿದೆ. ಈ ದರೋಡೆಕೋರರು ತುಳು ಮತ್ತು ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದರು. ಮನೆಯನ್ನು ದೋಚಿದ ಬಳಿಕ ದರೋಡೆಕೋರರ ತಂಡ ಹಿಂಬಾಗಿಲಿನಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಈ ಸಂದರ್ಭ ಮನೆ ಮಾಲೀಕ ಗುರುಪ್ರಸಾದ್ ಅವರ ಕಟ್ಟಿದ‌ ಕೈಗಳನ್ನು ಬಿಚ್ಚಿದ ದರೋಡೆಕೋರರು, ಅವರ ಮೊಬೈಲ್ ಅನ್ನು ನೀರಿಗೆ ಹಾಕಿ ಹಾನಿ ಮಾಡಿದ್ದಾರೆ. ಬಳಿಕ ಗುರುಪ್ರಸಾದ್ ಅವರು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ, ದಕ್ಷಿಣಕನ್ನಡ ಪೊಲೀಸ್​ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್,

’’ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಕೃತ್ಯ ನಡೆದಿದೆ. ದೂರುದಾರರ ಪ್ರಕಾರ ಸುಮಾರು 40 ಸಾವಿರ ರೂಪಾಯಿ ಹಾಗೂ ಚಿನ್ನಾಭರಣವನ್ನು ದರೋಡೆ ಮಾಡಲಾಗಿದೆ. ಸ್ಥಳಕ್ಕೆ ಈಗಾಗಲೇ ಬೆರಳಚ್ಷು ತಜ್ಞರ ತಂಡ, ಶ್ವಾನದಳ, ವಿಧಿ - ವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದರೋಡೆಕೋರರನ್ನು ಶೀಘ್ರವೇ ಬಂಧಿಸಲಾಗುವುದು. ಪ್ರಕರಣದ ತನಿಖೆಗೆ ಒಂದು ವಿಶೇಷ ತಂಡವನ್ನೂ ರಚಿಸಲಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿದರು. ಪುತ್ತೂರು ಆಸುಪಾಸಿನಲ್ಲಿ ಹೆಚ್ಚು ಕಳ್ಳತನ ಪ್ರಕರಣಗಳು ವರದಿಯಾಗುತ್ತಿರುವ ಸಂಬಂಧವೂ ಸೂಕ್ತ ತನಿಖೆ ನಡೆಸಲಾಗುವುದು’’ ಎಂದು ತಿಳಿಸಿದರು.

ಮನೆ ಯಜಮಾನ ಗುರುಪ್ರಸಾದ್ ರೈ ಮಾತನಾಡಿ,

’’ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಏಳೆಂಟು ಜನರ ತಂಡ ಮನೆಗೆ ನುಗ್ಗಿ ನಮ್ಮನ್ನು ಕಟ್ಟಿ ಹಾಕಿ ಕಪಾಟಿನಲ್ಲಿದ್ದ ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ. ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮನೆಗೆ ನುಗ್ಗಿದವರೆಲ್ಲಾ ಮುಸುಕು ಹಾಕಿಕೊಂಡಿದ್ದು, ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದರು‌. ಘಟನೆ ಬಗ್ಗೆ ಬೆಳಿಗ್ಗೆ ಪೊಲೀಸರರಿಗೆ ಮಾಹಿತಿ ನೀಡಿದೆ. ಮನೆಯಲ್ಲಿ ನಾನೊಬ್ಬನೇ ಹೆಚ್ಚಾಗಿ ಇರುತ್ತಿದ್ದು, ನಿನ್ನೆ ನನ್ನ ತಾಯಿ ಮನೆಗೆ ಬಂದಿದ್ದರು‌‌. ನನಗೆ ವೈಯಕ್ತಿಕವಾಗಿ ಯಾರಲ್ಲಿಯೂ ಹಗೆತನವಿಲ್ಲ‘‘ ಎಂದು ತಿಳಿಸಿದರು.

ಇದನ್ನೂ ಓದಿ :ಚಿಕ್ಕಮಗಳೂರು: ಶಾಲಾ ಮಕ್ಕಳ ಮೇಲೆ ಹರಿದ ಖಾಸಗಿ ಬಸ್​.. ವಿದ್ಯಾರ್ಥಿನಿ ಸಾವು

Last Updated : Sep 7, 2023, 4:44 PM IST

ABOUT THE AUTHOR

...view details