ಕರ್ನಾಟಕ

karnataka

Ration rice: ಬಂಟ್ವಾಳ: ಕೋಟ್ಯಂತರ ರೂಪಾಯಿ ಮೌಲ್ಯದ ಪಡಿತರ ನಾಪತ್ತೆ; ಕ್ರಮಕ್ಕೆ ಶಾಸಕರಿಂದ ಸೂಚನೆ

By

Published : Aug 18, 2023, 5:27 PM IST

Ration rice missing in Bantwal: ಬಂಟ್ವಾಳದ ದಾಸ್ತಾನು ಮಳಿಗೆಯಿಂದ 3,892 ಕ್ವಿಂಟಲ್ ಪಡಿತರ ಅಕ್ಕಿ ಕಾಣೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

crime-crores-of-rupees-value-ration-rice-missing-in-bantwal
missing of ration rice: ಬಂಟ್ವಾಳದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಪಡಿತರ ನಾಪತ್ತೆ - ಕ್ರಮಕ್ಕೆ ಶಾಸಕರ ಸೂಚನೆ

ಬಂಟ್ವಾಳ (ಮಂಗಳೂರು): ನ್ಯಾಯಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಸೇರಬೇಕಾಗಿದ್ದ 1.32 ಕೋಟಿ ರೂ ಮೌಲ್ಯದ ಪಡಿತರ ಅಕ್ಕಿ ದಾಸ್ತಾನು ಮಳಿಗೆಯಿಂದ ನಾಪತ್ತೆಯಾಗಿದೆ. ಈ ಕುರಿತು ಪೊಲೀಸರಿಂದ ತನಿಖೆ ನಡೆಯುತ್ತಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೋಂಡಾ ದೂರು ನೀಡಿದ್ದರು.

ದಾಸ್ತಾನು ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ:ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕೆಎಸ್​ಆರ್​ಟಿಸಿ ಡಿಪೋ ಎದುರಿರುವ ಸಗಟು ಗೋದಾಮಿನಿಂದ ಬಂಟ್ವಾಳ ನಗರಕ್ಕೆ ಪಡಿತರ ಅಕ್ಕಿ ಸರಬರಾಜು ಆಗುತ್ತಿರುತ್ತದೆ. ಪಡಿತರ ವಿತರಣೆ ವಿಳಂಬವಾಗುತ್ತಿರುವ ಬಗ್ಗೆ ಅನುಮಾನ ಮೂಡಿದ್ದು, ಜಿಲ್ಲಾ ವ್ಯವಸ್ಥಾಪಕರ ಮೌಖಿಕ ಆದೇಶದ ಮೇಲೆ ಆಗಸ್ಟ್ 17ರಂದು ಬಂಟ್ವಾಳದ ಸಗಟು ಮಳಿಗೆಗೆ ಬಂದು ದಾಸ್ತಾನು ಪರಿಶೀಲಿಸಿದಾಗ, ಫಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ ಇರಬೇಕಾಗಿದ್ದ ಭೌತಿಕ ದಾಸ್ತಾನಿಗಿಂತ ಅಂದಾಜು 1,32,36,030 ರೂ ಮೌಲ್ಯದ 3892 ಕ್ವಿಂಟಲ್ ಅಕ್ಕಿ ಕೊರತೆ ಇರುವುದು ಕಂಡುಬಂದಿದೆ. ಈ ಕುರಿತು ಬಂಟ್ವಾಳ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ನಿ) ಗೋದಾಮಿನ ನಿರ್ವಾಹಕರಾಗಿದ್ದ ಕಿರಿಯ ಸಹಾಯಕನ ವಿರುದ್ಧ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಮಕ್ಕೆ ಶಾಸಕರ ಆಗ್ರಹ: ಪಡಿತರ ಅಕ್ಕಿಯ ಗೋದಾಮಿನಲ್ಲಿ ಅವ್ಯವಹಾರ ಆಗುತ್ತಿರುವ ಕುರಿತು ದೂರುಗಳು ಬಂದಿದ್ದು, ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಪತ್ರ ಬರೆದಿದ್ದಾರೆ. ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ವಿತರಣೆ ಆಗುವ ಅಕ್ಕಿ ಅವ್ಯವಹಾರ ಆಗಿರುವ ಕುರಿತು ಪತ್ರ ಬರೆದಿರುವ ಅವರು, ಈ ಕುರಿತು ಸಾರ್ವಜನಿಕ ವಲಯದಲ್ಲಿ ಗುಮಾನಿ ಇದ್ದು, ನನಗೆ ದೂರುಗಳು ಬಂದಿವೆ. ವೈಯಕ್ತಿಕವಾಗಿ ಗಮನಹರಿಸಿ, ಅಕ್ಕಿ ದಾಸ್ತಾನು ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:K.H.Muniyappa: ಸದ್ಯಕ್ಕೆ ಎಪಿಎಲ್, ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ- ಸಚಿವ ಕೆ.ಹೆಚ್.ಮುನಿಯಪ್ಪ

ABOUT THE AUTHOR

...view details