ಕರ್ನಾಟಕ

karnataka

ಗೋವಾದಲ್ಲಿ ಪ್ರಾಚೀನ ಕನ್ನಡ ಶಾಸನ ಪತ್ತೆ

By ETV Bharat Karnataka Team

Published : Jan 5, 2024, 10:39 AM IST

ಗೋವಾದ ಕಾಕೋಡದಲ್ಲಿರುವ ಮಹಾದೇವ ದೇವಾಲಯದ ಆವರಣದಲ್ಲಿ ಪ್ರಾಚೀನ ಕನ್ನಡ ಶಾಸನ ಪತ್ತೆಯಾಗಿದೆ.

Ancient Kannada Inscription
ಪ್ರಾಚೀನ ಕನ್ನಡ ಶಾಸನ

ಮಂಗಳೂರು/ಗೋವಾ:ಗೋವಾದ ಕಾಕೋಡದಲ್ಲಿರುವ ಮಹಾದೇವ ದೇವಾಲಯದ ಆವರಣದಲ್ಲಿ ಒಂದು ಪ್ರಾಚೀನ ಅಪ್ರಕಟಿತ ಕನ್ನಡ ಶಾಸನ ಪತ್ತೆ ಹಚ್ಚಲಾಗಿದೆ. ಆಯತಕಾರದ ಶಿಲೆಯ ಮೇಲೆ ಕನ್ನಡ ಭಾಷೆ, ಲಿಪಿ ಹಾಗೂ ಸಂಸ್ಕೃತ ಭಾಷೆ ಮತ್ತು ನಾಗರ ಲಿಪಿಯಲ್ಲಿ ಬರೆಯಲಾದ ದ್ವಿಭಾಷಾ ಶಾಸನ ಇದಾಗಿದೆ.

ಗೋವಾದ ಪರಿಸರ ಆಂದೋಲನದ ಹೋರಾಟಗಾರ ಡಾ.ರಾಜೇಂದ್ರ ಕೇರ್ಕರ್​​ ಅವರು ಈ ಬಗ್ಗೆ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ಅವರ ಗಮನಕ್ಕೆ ತಂದಿದ್ದು, ಈ ಅಪರೂಪದ ಶಾಸನದ ಸಂಶೋಧನೆಗೆ ಸಹಕರಿಸಿದ್ದಾರೆ.

ಶಾಸನವು ಸ್ವಸ್ತಿಶ್ರೀ ಎಂಬ ಮಂಗಲವಾಚಕ ಪದದೊಂದಿಗೆ ಆರಂಭವಾಗಿದೆ. ಗೋವಾದಲ್ಲಿನ ಒಂದು ಮಂಡಲದ ಆಳ್ವಿಕೆಯನ್ನು ನಡೆಸುತ್ತಿದ್ದ, ತಳಾರ ನೇವಯ್ಯ ಎಂಬ ಅರಸ ತನ್ನ ಮಗ ಗುಂಡಯ್ಯನ ಸಾಹಸದ ಬಗ್ಗೆ ಶಾಸನದಲ್ಲಿ ಕೊಂಡಾಡಿದ್ದಾನೆ. ತನ್ನ ಆಸೆ ಈಡೇರಿಸುವ ಪ್ರತಿಜ್ಞೆ ಮಾಡಿದ್ದ ಮಗ ಗುಂಡಯ್ಯ, ಬಂದರು ನಗರದ ಗೋಪುರವನ್ನು (ಈಗಿನ ಗೋವಾ) ಗೆದ್ದು ವೀರಮರಣ ಹೊಂದಿದ್ದ. ಮೃತ ಗುಂಡಯ್ಯನ ಶೌರ್ಯದ ಸ್ಮಾರಕವಾಗಿ ತಂದೆ ನೇವಯ್ಯ ಈ ವೀರ ಶಾಸನವನ್ನು ಕಾಕೋಡದ ಮಹಾದೇವಾಲಯದ ಆವರಣದಲ್ಲಿ ನಿಲ್ಲಿಸಿದ್ದಾನೆ ಎಂಬ ಬಗ್ಗೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಶಾಸನದ ಮಹತ್ವ : ಶಾಸನವನ್ನು 10 ನೇ ಶತಮಾನದ ಲಿಪಿಯಲ್ಲಿ ಬರೆಯಲಾಗಿದೆ. ಯಾವುದೇ ರಾಜಮನೆತನ ಹಾಗೂ ಕಾಲದ ಬಗ್ಗೆ ಉಲ್ಲೇಖ ಇಲ್ಲ. ಕರ್ನಾಟಕದ ಕದಂಬರು, ಕಲ್ಯಾಣ ಚಾಲುಕ್ಯರ ಚಕ್ರವರ್ತಿ ಎರಡನೇ ತೈಲಪನಿಗೆ ರಾಷ್ಟ್ರಕೂಟರನ್ನು ಪದಚ್ಯುತಗೊಳಿಸುವಲ್ಲಿ ನೆರವಾಗಿದ್ದರು. ಆದ್ದರಿಂದ ಎರಡನೇ ತೈಲಪನು ಕದಂಬ ಮನೆತನದ ಶಾಸ್ತದೇವನನ್ನು ಗೋವಾದ ಮಹಾಮಂಡಲೇಶ್ವರನೆಂದು ನೇಮಿಸಿದ್ದ. ಗೋವಾದ ಶಿಲಾಹಾರರಿಂದ ಚಂದಾವರವನ್ನು ವಶಪಡಿಸಿಕೊಂಡ ಶಾಸ್ತದೇವ ಕ್ರಿ.ಶ. 960ರಲ್ಲಿ ಗೋವಾದ ಚಂದಾವರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ಗೋವಾದಲ್ಲಿ ಸ್ವತಂತ್ರ ಕದಂಬ ರಾಜಮನೆತನದ ಆಳ್ವಿಕೆ ಆರಂಭಿಸಿದ್ದ.

ನಂತರ ಬಂದರು ನಗರ ಗೋಪುರ ಪಟ್ಟಣವನ್ನು ಗೆದ್ದು ಸಂಪೂರ್ಣ ದಕ್ಷಿಣ ಗೋವಾದ ಮೇಲೆ ಅಧಿಪತ್ಯ ಸ್ಥಾಪಿಸಿದ್ದ. ಶಾಸನದಲ್ಲಿ ಗೋಪುರ ಪಟ್ಟಣವನ್ನು ಗೆದ್ದ ಗುಂಡಯ್ಯನ ಸಾಹಸವನ್ನು ನೆನೆಯಲಾಗಿದೆ. ಮೃತ ಗುಂಡಯ್ಯನ ತಂದೆಯನ್ನು ತಳಾರ ನೇವಯ್ಯನೆಂದು ವರ್ಣಿಸಲಾಗಿದೆ. ತಳಾರ ಎಂದರೆ ಸೇವಕ ಎಂಬ ಅರ್ಥವಿದೆ.

ಆದ್ದರಿಂದ ಶಾಸನೋಕ್ತ ತಳಾರ ನೇವಯ್ಯನು ಗೋವಾ ಕದಂಬರ ಸಾಮಂತ ಹಾಗೂ ಒಂದು ಮಂಡಲದ ಅಧಿಪತಿಯಾಗಿ ಆಳ್ವಿಕೆ ನಡೆಸುತ್ತಿದ್ದ ಎಂದೂ, ಕದಂಬ ಶಾಸ್ತದೇವನ ಗೋಪುರಪಟ್ಟಣದ ಮೇಲಿನ ದಾಳಿಯಲ್ಲಿ ನೇವಯ್ಯನ ಆಸೆಯಂತೆ ಆತನ ಮಗ ಗುಂಡಯ್ಯ ಭಾಗವಹಿಸಿ ಗೋಪುರ ಪಟ್ಟಣವನ್ನು ಗೆದ್ದು, ವೀರಮರಣ ಹೊಂದಿದ ಎಂದು ಭಾವಿಸಬಹುದಾಗಿದೆ. ಗೋವಾ ಕದಂಬರ ಆಳ್ವಿಕೆಯ ಆರಂಭಿಕ ಕಾಲದ ಲಿಪಿ ಲಕ್ಷಣವನ್ನು ಶಾಸನದ ಲಿಪಿಗಳು ಸಂಪೂರ್ಣವಾಗಿ ಹೋಲುವುದರಿಂದ ಶಾಸನದ ಕಾಲವನ್ನು ಕ್ರಿ.ಶ. 10ನೇ ಶತಮಾನದ ಶಾಸನವೆಂದು ಪರಿಗಣಿಸಲಾಗಿದೆ.

ಶಾಸನದ ಪಠ್ಯ :ಈ ಶಾಸನದ ಪಠ್ಯವನ್ನು ಸಿದ್ಧಪಡಿಸುವುದು, ಸಂಶೋಧನೆ ಹಾಗೂ ಅರ್ಥೈಸುವಲ್ಲಿ ಮೈಸೂರಿನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಶಾಸನಶಾಸ್ತ್ರ ವಿಭಾಗದ ನಿರ್ದೇಶಕರಾದ ಡಾ. ಮುನಿರತ್ನ ರೆಡ್ಡಿ, ಡಾ. ನಾಗರಾಜಪ್ಪ ಮತ್ತು ಆರ್​ಕೆ ಮಣಿಪಾಲ್ ಅವರ ಸಹಕಾರ ಪಡೆಯಲಾಗಿದೆ ಎಂದು ಪ್ರೊ. ಟಿ.ಮುರುಗೇಶಿ ತಿಳಿಸಿದ್ದಾರೆ.

ಇದನ್ನೂ ಓದಿ:ಕೊಪ್ಪಳ ಜಿಲ್ಲೆಯ ಕಲಿಕೇರಿಯಲ್ಲಿ 12ನೇ ಶತಮಾನದ ಎರಡು ಶಿಲಾ ಶಾಸನ ಪತ್ತೆ

ABOUT THE AUTHOR

...view details