ಕರ್ನಾಟಕ

karnataka

ಪುತ್ತೂರಿನಲ್ಲಿ ಸಮಸ್ಯೆ ಇಲ್ಲ, ತರ್‍ಲೆ ಮಾಡುವವರ ವಿರುದ್ಧ ಕ್ರಮ: ಎಡಿಜಿಪಿ ಅಲೋಕ್ ಕುಮಾರ್

By

Published : Aug 4, 2022, 5:36 PM IST

ADGP Alok Kumar visits putturu police station
ಪುತ್ತೂರು ಪೊಲೀಸ್ ಠಾಣೆಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ()

ಪುತ್ತೂರು ಪೊಲೀಸ್ ಠಾಣೆಗೆ ಅಲೋಕ್ ಕುಮಾರ್ ಭೇಟಿ ನೀಡಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವವರ ಕುರಿತು ಮಾಹಿತಿ ಪಡೆದರು.

ಪುತ್ತೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪುತ್ತೂರಿನಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲಾ ಕಡೆಗಳಲ್ಲೂ ನಿಗಾ ವಹಿಸಿದ್ದೇವೆ. ಒಳ್ಳೆಯ ಜನರೊಂದಿಗೆ ಒಳ್ಳೆಯ ರೀತಿಯಲ್ಲಿ ಇರಬೇಕು. ಯಾರು ತರ್‍ಲೆ ಮಾಡುತ್ತಾರೋ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ತನಿಖೆ, ಬಂದೋಬಸ್ತ್ ಹಾಗೂ ಶಾಂತಿ, ಸುವ್ಯವಸ್ಥೆ ಕುರಿತಂತೆ ಮಂಗಳೂರು ಕಮಿಷನರೇಟ್, ದ.ಕ ಮತ್ತು ಉಡುಪಿ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಇಂದು ಬೆಳಗ್ಗೆ ಮಂಗಳೂರಿನಲ್ಲಿ ಮಾಹಿತಿ ಪಡೆದ ಬಳಿಕ ಅವರು ಸುಳ್ಯ, ಬೆಳ್ಳಾರೆ, ಪುತ್ತೂರು ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಪುತ್ತೂರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಠಾಣಾ ಇನ್ಸ್​ಪೆಕ್ಟರ್‌ ಅವರಿಂದ ಪುತ್ತೂರಿನಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವವರ ಮಾಹಿತಿ ಪಡೆದರು. ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಪುತ್ತೂರು ಪೊಲೀಸ್ ಠಾಣೆಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ

ಪುತ್ತೂರಿನಲ್ಲಿ ನನ್ನ ಗಮನಕ್ಕೆ ಬಂದಂತೆ ಯಾವುದೇ ಸಮಸ್ಯೆ ಇಲ್ಲ. ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕಡೆ ನಿಗಾ ವಹಿಸುತ್ತಿದ್ದೇವೆ. ಅಹಿತಕರ ಘಟನೆ ನಿಯಂತ್ರಿಸುವ ಸಲುವಾಗಿ ಸಂಜೆ 6 ರಿಂದ ಬೆಳಗ್ಗೆ 6ರ ವರೆಗೆ ಹಾಕಿರುವ ನಿರ್ಬಂಧಗಳನ್ನು ಹಂತಹಂತವಾಗಿ ತೆರವು ಮಾಡಲಾಗುವುದು ಎಂದರು.

ಅದರೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಸಹ ಸವಾರರ ಮೇಲೆ ಹೆಚ್ಚಿನ ನಿಗಾ ಇರಿಸಲಾಗುವುದು. ಅನೇಕ ಬಾರಿ ಸಹ ಸವಾರರೇ ಅಪರಾಧಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇತರೆ ರಾಜ್ಯಗಳ ಮಾದರಿಯಂತೆ ಇಲ್ಲಿಯೂ ಅವರ ಮೇಲೆ ನಿಗಾ ಇರಿಸಲಾಗುತ್ತದೆ. ದ್ವಿಚಕ್ರ ವಾಹನದಲ್ಲಿ 18 ರಿಂದ 60 ವರ್ಷದೊಳಗಿನ ಪುರುಷರು ಇಬ್ಬರು ಹೋಗುವಂತಿಲ್ಲ. ಹಿರಿಯ ನಾಗರಿಕರು ಮತ್ತು ಮಕ್ಕಳನ್ನು ಹೊರತುಪಡಿಸಿ ಉಳಿದವರು ದ್ವಿಚಕ್ರ ವಾಹನದಲ್ಲಿ ಸವಾರರೊಂದಿಗೆ ಸಂಚರಿಸುವಂತಿಲ್ಲ. ಇದನ್ನು ಒಂದು ವಾರ ಜಾರಿಯಲ್ಲಿ ತಂದು ನೋಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ:ಮಂಗಳೂರು ಕೊಲೆ ಪ್ರಕರಣ: ಇನ್ಮುಂದೆ ಬೈಕ್​ನಲ್ಲಿ ಹಿಂಬದಿ ಪುರುಷ ಸವಾರರಿಗೆ ನಿರ್ಬಂಧ!

ಅಪರಾಧ ಮತ್ತು ಕಾನೂನು ಸುವ್ಯಸ್ಥೆಯ ದೃಷ್ಟಿಯಿಂದ ಸಿ.ಸಿ ಕ್ಯಾಮರಾಗಳು ಅಗತ್ಯವಾಗಿ ಉಪಯೋಗ ಆಗುತ್ತವೆ. ಇಂತಹ ಸಂದರ್ಭದಲ್ಲಿ ಸಿಸಿ ಕ್ಯಾಮರಾಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪುತ್ತೂರಿನಲ್ಲಿ ಸಿಸಿ ಕ್ಯಾಮರಾಗಳು ಕೆಟ್ಟು ಹೋಗಿದ್ದರೆ, ಅದನ್ನು ತಕ್ಷಣ ದುರಸ್ತಿ ಮಾಡಲು ಸೂಚನೆ ನೀಡುತ್ತೇನೆ ಎಂದು ಎಡಿಜಿಪಿ ಅಲೋಕ್​ಕುಮಾರ್​ ಹೇಳಿದರು.

ABOUT THE AUTHOR

...view details