ಕರ್ನಾಟಕ

karnataka

ಹೆಬ್ಬುಲಿಯ​ ಅಬ್ಬರದ ಪ್ರಚಾರ: ಅಭಿಮಾನಿಗಳ ಘೋಷಣೆಗಳ ನಡುವೆ ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಮನವಿ

By

Published : Apr 26, 2023, 12:48 PM IST

Updated : Apr 26, 2023, 7:33 PM IST

ಸ್ಯಾಂಡಲ್​ವುಡ್​ ನಟ ಸುದೀಪ್​ ಇಂದು ಬಿಜೆಪಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ನಡೆಸಿದ್ದಾರೆ. ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ರಸ್ತೆ ಉದ್ದಕ್ಕೂ ನಿಂತಿದ್ದರು. ಅಭಿಮಾನಿಗಳ ಘೋಷಣೆಗಳ ನಡುವೆ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಸುದೀಪ್​ ಮನವಿ ಮಾಡಿಕೊಂಡರು.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಕಿಚ್ಚ ಸುದೀಪ್ ಪ್ರಚಾರ
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಕಿಚ್ಚ ಸುದೀಪ್ ಪ್ರಚಾರ

ಬಿಜೆಪಿ ಅಭ್ಯರ್ಥಿ ಪರ ಕಿಚ್ಚ ಸುದೀಪ್ ಪ್ರಚಾರ

ಚಿತ್ರದುರ್ಗ:ನಿರೀಕ್ಷೆಯಂತೆಕನ್ನಡ ಖ್ಯಾತ ನಟ ಕಿಚ್ಚ ಸುದೀಪ್ ಅವರು ಇಂದು ಬಿಜೆಪಿ ಅಭ್ಯರ್ಥಿಯ ಪರ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಸಾವಿರಾರು ಕಾರ್ಯುಕರ್ತರು ಹಾಗೂ ಬಿಜೆಪಿ ನಾಯಕರ ಸಮ್ಮುಖದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಪರ ಚಿತ್ರದುರ್ಗದಲ್ಲಿ ಇಂದು ಪ್ರಚಾರ ನಡೆಸಿದರು.

ಹೆಬ್ಬುಲಿಯ​ ಅಬ್ಬರದ ಪ್ರಚಾರ

ಮೊಳಕಾಲ್ಮೂರು ಪಟ್ಟಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸುದೀಪ್, ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದರು. ಮತಪ್ರಚಾರದಲ್ಲಿ ಪಾಲ್ಗೊಂಡಿದ್ದ ಸುದೀಪ್ ಅವರನ್ನು ನೋಡಲು ಸಾವಿರಾರು ಮಂದಿ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ರಸ್ತೆ ಉದ್ದಕ್ಕೂ ನಿಂತಿದ್ದ ಅಭಿಮಾನಿಗಳ ಕೇಕೆ ಹಾಗೂ ಜೈಕಾರದ ಪ್ರತಿಯಾಗಿ ಅವರತ್ತ ಕೈಬೀಸುತ್ತಾ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಅವರನ್ನು ಬೆಂಬಲಿಸಿ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ನಟ ಸುದೀಪ್​ ಮನವಿ ಮಾಡಿಕೊಂಡರು.

ಮೊಳಕಾಲ್ಮೂರು ಬಳಿಕ ಜಗಳೂರಿನಲ್ಲಿಯೂ ನಟ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ ಹಾಗೂ ಬಿಜೆಪಿ ಅಭ್ಯರ್ಥಿ ಎಸ್ ವಿ ರಾಮಚಂದ್ರ ಪರ ಮತಯಾಚನೆ ಮಾಡಿದರು. ಪಟ್ಟಣದ ಹೃದಯ ಭಾಗವಾದ ಮಹಾತ್ಮಾ ಗಾಂಧಿ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು. ಮೆರವಣಿಗೆ ಉದ್ದಕ್ಕೂ ಕೇಕೆ ಜೈಕಾರ ಜೋರಾಗಿದ್ದವು. ಅಭಿಮಾನಿಗಳ ಘೋಷಣೆಗಳ ನಡುವೆ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಸುದೀಪ್​ ಮನವಿ ಮಾಡಿಕೊಂಡರು.

ಹೆಬ್ಬುಲಿಯ​ ಅಬ್ಬರದ ಪ್ರಚಾರ

ಪಟ್ಟಣದ ಎಂಜಿ ವೃತ್ತದಿಂದ ಆರಂಭವಾದ ಈ ಮೆರವಣಿಯು ಭುವನೇಶ್ವರಿ ವೃತ್ತ, ಖಾಸಗಿ ಬಸ್ ನಿಲ್ದಾಣ, ಪೊಲೀಸ್​ ಠಾಣೆಯಿಂದ ಹಾದು ಅಂಬೇಡ್ಕರ್ ಸರ್ಕಲ್​ಗೆ ಕೊನೆಗೊಂಡಿತು. ಸುದೀಪ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಸಾಗರವೇ ಆಗಮಿಸಿತ್ತು. ಕೆಲವರು ಕಟ್ಟಡ, ವಾಹನ, ಟವರ್​ ಮೇಲೆ ನಿಂತು ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು. ಅಭಿಮಾನಿಗಳ ಜೈಕಾರಕ್ಕೆ ಮನಸೋತ ಸುದೀಪ್, ಹಾರ್ಟ್ ಸಿಂಬಲ್ ತೋರಿಸುವ ಮೂಲಕ ಎಸ್ ವಿ ರಾಮಚಂದ್ರ ಅವರ ಕೈ ಎತ್ತಿ ಇವರಿಗೆ ಬೆಂಬಲಿಸುವಂತೆ ಮನವಿ ಮಾಡಿದರು.

ಹೆಬ್ಬುಲಿಯ​ ಅಬ್ಬರದ ಪ್ರಚಾರ

ಮೆರವಣಿಗೆ ಕೊನೆಯಾದ ಬಳಿಕ ಮಾತನಾಡಿದ ನಟ ಸುದೀಪ್, ಇಂತಹ ಸುಡು ಬಿಸಿಲನ್ನು ಲೆಕ್ಕಿಸದೇ ಇಷ್ಟು ಜನ ಸೇರಿದ್ದೀರಿ. ನಿಮ್ಮ ಅಭಿಮಾನ ದೊಡ್ಡದು. ಎಸ್ ವಿ ರಾಮಚಂದ್ರ ಬಹಳ ವರ್ಷಗಳಿಂದ ನನಗೆ ಅತ್ಮೀಯ ಸ್ನೇಹಿತರು. ರಾಜಕೀಯದಲ್ಲಿ ಬರಿ ಬಿಳಿ ಬಟ್ಟೆ ಹಾಕಿದರೆ ಸಾಲುದು, ರಾಮಚಂದ್ರ ಅವರ ತರಹ ಇರಬೇಕು. ‌ಜಗಳೂರಿನ ಅಭಿವೃದ್ಧಿಗೆ ರಾಮಚಂದ್ರ ಅವರು ಸದಾ ಇರುತ್ತಾರೆ. ಕಳೆದ ಬಾರಿಯೂ ಗೆಲ್ಲಿಸಿದ್ದೀರಾ, ಈ ಬಾರಿಯೂ ರಾಮಚಂದ್ರ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಪರ ಕಿಚ್ಚ ಸುದೀಪ್ ಪ್ರಚಾರ

ಜಗಳೂರು ಬಳಿಕ, ಮಾಯಕೊಂಡ, ದಾವಣಗೆರೆ ಉತ್ತರ ಮತ್ತು ದಕ್ಷಿಣ ಸೇರಿದಂತೆ ಒಟ್ಟು ಐದು ಕಡೆ ರೋಡ್ ಶೋ ಮೂಲಕ ಕ್ಯಾಂಪೇನ್ ಮಾಡಲಿದ್ದಾರೆ. ಮಾಯಕೊಂಡ ಕ್ಷೇತ್ರಕ್ಕೆ ತೆರಳಲಿರುವ ಸುದೀಪ್ ಮಾಯಕೊಂಡ ಸರ್ಕಾರಿ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯ್ಕ್ ಪರ ಪ್ರಚಾರ ನಡೆಸಲಿದ್ದಾರೆ.

ಬಳಿಕ ದಾವಣಗೆರೆಗೆ ತೆರಳಲಿರುವ ಸುದೀಪ್, ಸಂಜೆ ಅಲ್ಲಿಯೂ ರೋಡ್ ಶೋ ನಡೆಸಲಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಬಿಜಿ ಅಜಯ್ ಕುಮಾರ್ ಪರ ಮತ ಯಾಚಿಸಲಿದ್ದಾರೆ. ದಾವಣಗೆರೆ ಪ್ರಚಾರ ಮುಗಿಸಿ ವಿಜಯನಗರ ಜಿಲ್ಲೆಗೆ ತೆರಳಲಿರುವ ಹೆಬ್ಬುಲಿ ಸುದೀಪ್​, ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿ ಶಿಲ್ಪ ರಾಘವೇಂದ್ರ ಪರ ಮತಬೇಟೆ ನಡೆಸಲಿದ್ದಾರೆ. ಪಕ್ಷದ ವತಿಯಿಂದ ನಟ ಕಿಚ್ಚ ಸುದೀಪ್​ಗೆ ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಲಾಗಿದೆ.

ಖಾಸಗಿ ಹೆಲಿಕಾಪ್ಟರ್ ಬುಕ್ ಮಾಡಿರುವ ಬಿಜೆಪಿ, ಇಡೀ ದಿನ ಸುದೀಪ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ. ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸಲಿರುವ ಸುದೀಪ್ ಅವರು ಮುಖ್ಯಮಂತ್ರಿ ತಿಳಿಸುವ ಇತರ ಅಭ್ಯರ್ಥಿಗಳ ಪರವೂ ಪ್ರಚಾರ ಮುಂದುವರೆಸಲಿದ್ದಾರೆ.

ಇತ್ತೀಚೆಗೆ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಸಾಂಕೇತಿಕವಾಗಿ ಭಾಗಿಯಾಗಿ ಬೆಂಬಲ ಸೂಚಿಸಿ ಪ್ರಚಾರ ನಡೆಸಿದ್ದರು. ಇಂದಿನಿಂದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ: ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ.. ಕಾಂಗ್ರೆಸ್ 150 ಸ್ಥಾನ ಪಡೆಯಲಿದೆ: ಡಿ.ಕೆ ಶಿವಕುಮಾರ್

Last Updated : Apr 26, 2023, 7:33 PM IST

ABOUT THE AUTHOR

...view details