ಕರ್ನಾಟಕ

karnataka

ಹೇಳಲು ಮಲೆನಾಡು, ರಸ್ತೆಯಲ್ಲಿ ಬದಿಯಲ್ಲಿ 2 ಮರ ಕಾಣುತ್ತಾ?: ಶಾಸಕ ಹೆಚ್​ಡಿ ತಮ್ಮಯ್ಯ ಪ್ರಶ್ನೆ

By

Published : Jun 6, 2023, 9:06 AM IST

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ವಿರುದ್ಧ ಶಾಸಕ ಹೆಚ್​ಡಿ ತಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

MLA HD Thammaiah
ಶಾಸಕ ಹೆಚ್​ಡಿ ತಮ್ಮಯ್ಯ

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಹೆಚ್​ಡಿ ತಮ್ಮಯ್ಯ

ಚಿಕ್ಕಮಗಳೂರು: ಹೇಳಿಕೊಳ್ಳೋದಕ್ಕೆ ಮಲೆನಾಡು ಎಂದು ಖ್ಯಾತಿಯಾಗಿದೆ. ಆದರೆ ರಸ್ತೆಯ ಎರಡೂ ಬದಿಯಲ್ಲಿ ನೋಡಿದರೂ ಒಂದೆರಡು ಮರಗಳು ಕೂಡ ಕಾಣಿಸುತ್ತಿಲ್ಲ ಏನ್ ಕರ್ಮನೋ ನಮ್ದು ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದಿನ ದಿನಗಳಲ್ಲಿ ಸರ್ಕಾರಿ ಕಾರ್ಯ ಕ್ರಮಗಳಲ್ಲಿ ತಡವಾಗಿ ಹಾಜರಾಗಿದ್ದೇ ಆದಲ್ಲಿ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ವೀಕ್ಷಣೆ ಮಾಡಿದ ಅವರು, ಹೇಳಿಕೊಳ್ಳಲು ಮಲೆನಾಡು ಆಗಿದ್ದರೂ ರಸ್ತೆಯಲ್ಲಿ ಎರಡು ಮರಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವಂತೆ ಸ್ಥಳೀಯ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಿಕ್ಕಮಗಳೂರು ನಗರದ ಎಐಟಿ ವೃತ್ತದಲ್ಲಿ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಗೈರು ಹಾಜರಿ ಬಗ್ಗೆ ಸಿಡಿಮಿಡಿಗೊಂಡ ಶಾಸಕರು ನಗರಸಭೆಯ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡು ಒಮ್ಮೆ ತಪ್ಪನ್ನು ಕ್ಷಮಿಸಬಹುದು. ಪದೇ ಪದೇ ಜರುಗಿಸಿದರೆ ಶಿಷ್ಟಾಚಾರ ಉಲ್ಲಂಘನೆಯಾದಂತೆ. ಆ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು. ಇದೇ ವೇಳೆ, ನಗರಸಭಾ ಅಧ್ಯಕ್ಷರ ಗಮನಕ್ಕೂ ತಂದು ಮುಂದಿನ ದಿನಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಸಮಯಕ್ಕೆ ಬಾರದಿರುವುದು ಹಾಗೂ ಗೈರಾಗುವ ಕೆಲಸ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ತಮ್ಮಯ್ಯ ಪರಿಸರಕ್ಕೆ ಪೂರಕವಾಗಿರುವ ಅರಳಿ, ಹೊಂಗೆ ಹಾಗೂ ನೇರಳೆ ತಳಿಗಳನ್ನೊಳಗೊಂಡ ಸಸಿಗಳನ್ನು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅತಿ ಹೆಚ್ಚು ನೆಡುವುದರಿಂದ ಜೀವ ಸಂಕುಲಕ್ಕೆ ಸ್ವಚ್ಚಂದ ಗಾಳಿ ಲಭಿಸುವ ಮೂಲಕ ಆರೋಗ್ಯದಿಂದ ಜೀವಿಸಲು ಸಾಧ್ಯ ಎಂದರು.

ಮಲೆನಾಡು ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಹಾಗೂ ಹಚ್ಚ ಹಸಿರಿನಿಂದ ಕೂಡಿರುವ ತಾಣವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪರಿಸರ ನಾಶದಿಂದ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಂಭವವಿರುವುದರಿಂದ ಅರಣ್ಯ ಇಲಾಖೆ ಅತಿಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಈ ತಿಂಗಳಲ್ಲೇ ರೂಪಿಸಿದರೆ ಜುಲೈನಲ್ಲಿ ಆರಂಭವಾಗುವ ಮಳೆಗಾಲಕ್ಕೆ ಸಸಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಪ್ರಕೃತಿ ಮಾನವನಿಗೆ ದೊರೆತ ಅತ್ಯಮೂಲ್ಯ ಸಂಪತ್ತು. ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು. ಮುಂದಿನ ಪೀಳಿಗೆಗಾಗಿ ಪರಿಸರ ಉಳಿವಿಗೆ ಕೈಜೋಡಿಸಬೇಕು. ಮಳೆ ನೀರು ಕೊಯ್ಲು, ನಗರ ಸಮೀಪದಲ್ಲಿ ನೂತನವಾಗಿ ಮನೆ ನಿರ್ಮಿಸುವವರು ಕಡ್ಡಾಯವಾಗಿ ಗಿಡ ಬೆಳೆಸಬೇಕು. ಮಳೆನೀರು ಕೊಯ್ಲು ಹಾಗೂ ಸೋಲಾರ್ ಅಳವಡಿಸಬೇಕು ಎಂದು ಕಾನೂನು ರೂಪಿಸಿದರೆ ಮುಂದಿನ ಪೀಳಿಗೆಗೆ ಪರಿಸರ ಉಳಿಸಲು ಸಾಧ್ಯವಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿಯು ಮುಂದಿನ ಜನಾಂಗಕ್ಕೆ ಉತ್ತಮ ಪರಿಸರವನ್ನು ಸಂರಕ್ಷಿಸಲು ಮುಂದಾಗದಿದ್ದ ಪಕ್ಷದಲ್ಲಿ ಆಮ್ಲ ಜನಕವನ್ನು ಹಣಕೊಟ್ಟು ಖರೀದಿಸುವ ಸಂಭವಿರುವಿದೆ. ಆ ನಿಟ್ಟಿನಲ್ಲಿ ಸಮಾಜದ ನಾಗರೀಕರು ಈಗಿನಿಂದಲೇ ಎಚ್ಚೆತ್ತುಕೊಂಡು ಸಸಿಗಳನ್ನು ನೆಡುವ ಪದ್ಧತಿ ರೂಢಿಸಿಕೊಂಡರೆ ಮುಂದಿನ ಪೀಳಿಗೆಗೆ ಪರಿಸರವನ್ನು ಕೊಂಡೊಯ್ಯವ ಸಾಧ್ಯ ಎಂದು ಸಲಹೆ ನೀಡಿದರು.

ಇದನ್ನೂ ಓದಿ:2 ಲಕ್ಷಕ್ಕೂ ಅಧಿಕ ಗಿಡ ನೆಟ್ಟು ವೃಕ್ಷ ಕ್ರಾಂತಿ: ಇದು ಪರಿಸರವಾದಿ ಶಿವಾಜಿ ಕಾಗಣಿಕರ್ ಅವರ ಯಶಸ್ಸಿನ ಕಥೆ47

ABOUT THE AUTHOR

...view details