ಕರ್ನಾಟಕ

karnataka

ಬಿಜೆಪಿಗೆ ಗುಡ್ ಬೈ: ಕಾಂಗ್ರೆಸ್​ ಕಡೆ ಮುಖ ಮಾಡಿದ ಸಿ ಟಿ ರವಿ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಹೆಚ್.ಡಿ ತಮ್ಮಯ್ಯ

By

Published : Feb 17, 2023, 7:32 AM IST

ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲೇ ಪಕ್ಷಾಂತರ ಪರ್ವ ಜೋರಾಗಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸಿ ಟಿ ರವಿ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಹೆಚ್.ಡಿ ತಮ್ಮಯ್ಯ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

H D Thammaiah resigns as BJP primary member
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಹೆಚ್ ಡಿ ತಮ್ಮಯ್ಯ ರಾಜೀನಾಮೆ

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಹೆಚ್ ಡಿ ತಮ್ಮಯ್ಯ ರಾಜೀನಾಮೆ

ಚಿಕ್ಕಮಗಳೂರು:ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲೇ ಒಂದು ಪಕ್ಷದಿಂದ ಮತ್ತೊಂದು ಪಕ್ಷದತ್ತ ಮುಖ ಮಾಡುತ್ತಿರುವ ರಾಜಕೀಯ ನಾಯಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೂಡ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಇದರ ಸಾಲಿಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿ ಟಿ ರವಿ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಹೆಚ್ ಡಿ ತಮ್ಮಯ್ಯ ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ಟಿಕೆಟ್ ನೀಡುವಂತೆ ಮನವಿ ಮಾಡಿದ್ದ ತಮ್ಮಯ್ಯ: ಚಿಕ್ಕಮಗಳೂರು ಮಾಜಿ ನಗರಸಭಾ ಅಧ್ಯಕ್ಷ, ಬಿಜೆಪಿ ಮುಖಂಡ ಹೆಚ್.ಡಿ ತಮ್ಮಯ್ಯ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ನಿನ್ನೆ(ಗುರುವಾರ) ಪಕ್ಷದ ಜಿಲ್ಲಾಧ್ಯಕ್ಷರಿಗೆ ಅವರು ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ನಾನು 2007 ರಿಂದಲೂ ಬಿಜೆಪಿ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಆದರೆ, ನಾನು ಈಗಿನ ರಾಜಕೀಯ ವಿದ್ಯಾಮಾನಗಳಿಂದ ಬೇಸರಗೊಂಡಿದ್ದು, ಆದ್ದರಿಂದ ಜಿಲ್ಲಾ ಪ್ರಕೋಷ್ಠಕರ ಸಂಯೋಜಕ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ತಮ್ಮಯ್ಯ ಅವರ 15 ವರ್ಷಗಳ ಬಿಜೆಪಿ ಯೊಂದಿಗಿನ ನಂಟಿಗೆ ತೆರೆ ಬಿದ್ದಿದೆ. ಕೆಲ ತಿಂಗಳ ಹಿಂದೆ ತಮ್ಮಯ್ಯ ತನಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬೇಕು ಎಂದು ಪ್ರಬಲವಾಗಿ ಹಕ್ಕೊತ್ತಾಯ ಮಾಡಿದ್ದರು. ಮೂಲತಃ ಜೆಡಿಎಸ್​​ನಲ್ಲಿದ್ದ ಹೆಚ್​. ಡಿ ತಮ್ಮಯ್ಯ ನಂತರ ಕಾಂಗ್ರೆಸ್​ ಸೇರಿ ಆ ಪಕ್ಚದಿಂದ ಒಂದು ಬಾರಿ ನಗರಸಭಾ ಸದಸ್ಯರಾಗಿದ್ದರು. 2007ರಲ್ಲಿ ಬಿಜೆಪಿಗೆ ಸೇರಿದ ನಂತರ ಸಿ.ಟಿ ರವಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಬಿಜೆಪಿಯಿಂದ ಎರಡು ಬಾರಿ ನಗರಸಭೆಗೆ ಆಯ್ಕೆಯಾಗಿ ಒಂದು ಅವಧಿಗೆ ಅಧ್ಯಕ್ಷರಾಗಿದ್ದರು.

ಕಾಂಗ್ರೆಸ್​​ ಕಡೆ ಮುಖ ಮಾಡಿದ ಮಾಜಿ ನಗರಸಭಾ ಅಧ್ಯಕ್ಷ:ತಮ್ಮಯ್ಯ ಅವರ ನಿಲುವಿನಲ್ಲಿ ಆದ ದಿಢೀರ್ ಬದಲಾವಣೆ ಕ್ಷೇತ್ರದ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾವಗಲೂ ಸಿ ಟಿ ರವಿ ಹಿಂದೆಯೇ ಇದ್ದು ಅವರೊಂದಿಗೆ ವೇದಿಕೆ ಏರುತ್ತಿದ್ದ ತಮ್ಮಯ್ಯ ಹಾಗೂ ಸಿ ಟಿ ರವಿ ನಡುವಿನ ಸಂಬಂಧ ಇತ್ತೀಚೆಗೆ ಅಷ್ಟಕಷ್ಟೇ ಆಗಿತ್ತು. ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರಾಗಿದ್ದ ಅವರು ಕ್ಷೇತ್ರದಲ್ಲಿ ಪ್ರಬಲ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯಕ್ಕೆ ಸೇರಿದವರು. ತಾನೂ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂಬು ಮಹತ್ವಾಕಾಂಕ್ಷೆ ಇಟ್ಟು ಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ಬಿಜೆಪಿಯಲ್ಲಿ ಆ ಕನಸು ಈಡೇರುವುದು ಕಷ್ಟ ಎಂದು ಅರಿತು ಬೇರೆ ಪಕ್ಷದಿಂದ ಸ್ಪರ್ಧಿಯಾಗುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕಾಂಗ್ರೆಸ್​​ ಪಕ್ಷದಲ್ಲಿದ್ದ ತಮ್ಮಯ್ಯ ಮರಳಿ ಅದೇ ಪಕ್ಷಕ್ಕೆ ಸೇರುವ ತಯಾರಿಯಲ್ಲಿದ್ದಾರೆ. ನಿನ್ನೆ(ಗುರುವಾರ) ಬಿಜೆಪಿಗೆ ರಾಜೀನಾಮೆ ನೀಡಿ ಪತ್ರಕಾಗೋಷ್ಠಿ ನಡೆಸಿದ ತಮ್ಮಯ್ಯ ನಂತರ ಜಿಲ್ಲಾ ಕಾಂಗ್ರೆಸ್​ ಕಛೇರಿಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಫೆ.19ರಂದು ಕಾಂಗ್ರೆಸ್ ಸೇರ್ಪಡೆ: ಮೂಲಗಳ ಪ್ರಕಾರ ಅವರು ಫೆ.19 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ತಿಳಿದು ಬಂದಿದೆ. ತಮ್ಮಯ್ಯ ಕಾಂಗ್ರೆಸ್​​ ಸೇರ್ಪಡೆಯಾದರೆ ಅಲ್ಲಿ ಟಿಕೆಟ್‍ಗೆ ಬೇಡಿಕೆ ಇಡಬಹುದು. ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್​​‍ನಿಂದ ಗಾಯತ್ರಿ ಶಾಂತೇಗೌಡ, ಬಿ.ಹೆಚ್ ಹರೀಶ್, ಮಹಡಿಮನೆ ಮಹೇಶ್ ಸೇರಿದಂತೆ ಪ್ರಬಲ ಆಕಾಂಕ್ಷಿಗಳಿರುವುದರಿಂದ ತಮ್ಮಯ್ಯಗೆ ಅವಕಾಶ ಸಿಗುವುದು ಅಷ್ಟು ಸುಲಭವಲ್ಲ ಎನ್ನಲಾಗಿದೆ. ತಮ್ಮದೇ ಆದ ಬೆಂಬಲಿಗರ ಬಳಗ ಹೊಂದಿರುವ ಮತ್ತು ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ತಮ್ಮಯ್ಯ ಪಕ್ಷ ತೊರೆದಿರುವುದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಲಯದಲ್ಲಿ ಕೊಂಚ ತಳಮಳ ಸೃಷ್ಟಿಸಿದೆ.

ಇದನ್ನೂ ಓದಿ:ಚಿಕ್ಕಮಗಳೂರು ಶಾಸಕ ಸಿ ಟಿ ರವಿ ವಿರುದ್ಧ ಹೆಚ್​ಡಿ ತಮ್ಮಯ್ಯ ಬಂಡಾಯ

ABOUT THE AUTHOR

...view details