ಕರ್ನಾಟಕ

karnataka

ಚಿಕ್ಕಮಗಳೂರು ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ:  'ಬದಲಾವಣೆ ಸಂಕಲ್ಪ ಯಾತ್ರೆ'ಗೆ ತಮ್ಮಯ್ಯ ನಿರ್ಧಾರ

By

Published : Feb 18, 2023, 7:49 AM IST

Updated : Feb 18, 2023, 9:43 AM IST

ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕಾರ್ಯಕರ್ತರು ಹಾಗೂ ಲಿಂಗಾಯತ ಮುಖಂಡರು ಬಿಜೆಪಿಗೆ ಶಾಕ್​ ಕೊಟ್ಟಿದ್ದಾರೆ.

Dissent erupts In Chikkamagaluru BJP
ಸಿ.ಟಿ ರವಿ ವಿರುದ್ಧ ಬದಲಾವಣೆ ಸಂಕಲ್ಪಯಾತ್ರೆ

ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಸಿ.ಟಿ ರವಿ ವಿರುದ್ಧ ಬದಲಾವಣೆ ಸಂಕಲ್ಪಯಾತ್ರೆ

ಚಿಕ್ಕಮಗಳೂರು:ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಕೆಲ ಬಿಜೆಪಿ ಕಾರ್ಯಕರ್ತರು ಹಾಗೂ ಲಿಂಗಾಯತ ಮುಖಂಡರು ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ. ಇದರ ಜತೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಚುನಾವಣೆ ರಣಾಂಗಣ ರಂಗೇರಲು ಪ್ರಾರಂಭವಾಗಿದೆ.

ಕಾಂಗ್ರೆಸ್​ ಸೇರಲು ನಿರ್ಧಾರ:ಶಾಸಕ ಸಿ.ಟಿ ರವಿ ಆಪ್ತ ಹೆಚ್​.ಡಿ ತಮ್ಮಯ್ಯ ಚಿಕ್ಕಮಗಳೂರು ಪ್ರೆಸ್ ಕ್ಲಬ್​​ನಲ್ಲಿ ಪತ್ರಿಕಾಗೋಷ್ಠಿ ಕರೆದು ಬಿಜೆಪಿಗೆ ರಾಜೀನಾಮೆ ನೀಡಿದ್ದರ ಕುರಿತು ಮಾಹಿತಿ ನೀಡಿದ ಬೆನ್ನಲ್ಲೇ ಬೆಂಬಲಿಗರ ಸಭೆ ನಡೆಸಿದರು . ಗುಜರಾತ್‌ ಮಾದರಿಯಲ್ಲಿ ಲಿಂಗಾಯತರಿಗೆ ಟಿಕೆಟ್‌ ನೀಡದ ಹಿನ್ನೆಲೆ ಆಕ್ರೋಶಗೊಂಡಿದ್ದು, ಹೆಚ್.ಡಿ ತಮ್ಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಸೇರಲು ನಿರ್ಧರಿಸಿದ್ದಾರೆ.

'ಬದಲಾವಣೆ ಸಂಕಲ್ಪ ಯಾತ್ರೆ':ಚಿಕ್ಕಮಗಳೂರಿನ ಸನ್‌ರೈಸ್ ಹೋಟೆಲ್​​ನಲ್ಲಿ 500ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಹಾಗೂ ಲಿಂಗಾಯತ ಮುಖಂಡ ಸಭೆ ನಡೆಸಿದರು. ಈ ಸಭೆಯಲ್ಲಿ 'ಬದಲಾವಣೆ ಸಂಕಲ್ಪ ಯಾತ್ರೆ'ಗೆ ನಿರ್ಧರಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹೆಚ್.ಡಿ ತಮ್ಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲು ಸಭೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿ ಸ್ಪಷ್ಟಪಡಿಸಿದ್ದಾರೆ.

ಚಿಕ್ಕಮಗಳೂರು ಶಾಸಕರ ಅತ್ಯಂತ ಆಪ್ತರೆಂದು ಗುರುತಿಸಿಕೊಂಡಿದ್ದ ಮತ್ತು ಚಿಕ್ಕಮಗಳೂರು ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ಹೆಚ್ ಡಿ ತಮ್ಮಯ್ಯ ಅವರು ನಿನ್ನೆ(ಶುಕ್ರವಾರ) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಮತ್ತೆ ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಚಿಕ್ಕಮಗಳೂರು ಕ್ಷೇತ್ರದಿಂದ ಟಕೆಟ್​​ಗಾಗಿ ಬಿಜೆಪಿ ಜಿಲ್ಲಾಧ್ಯಕ್ಷರ ಮುಖಾಂತರ ಟಿಕೆಟ್​​ಗಾಗಿ ಆಗ್ರಹಿಸಿದ್ದರು. ಇದೀಗ ಹೆಚ್​.ಡಿ ತಮ್ಮಯ್ಯ ಅವರ ಹಾದಿಯನ್ನೇ ತುಳಿಯಲು 500ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಹಾಗೂ ಲಿಂಗಾಯತ ಮುಖಂಡರು ನಿರ್ಧರಿಸಿದ್ದಾರೆ. ಇದರಿಂದ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಇತ್ತ ಬಿಜೆಪಿಯಲ್ಲಿ ಅಸಮಧಾನ ಸ್ಫೋಟಗೊಂಡಂತಾಗಿದೆ.

ಕಾಂಗ್ರೆಸ್​​ ಕಡೆ ಮುಖ ಮಾಡಿದ ಮಾಜಿ ನಗರಸಭಾ ಅಧ್ಯಕ್ಷ:ಯಾವಗಲೂ ಅಲ್ಲಿನ ಸ್ಥಳೀಯ ಶಾಸಕರ ಜತೆ ಇದ್ದು ಅವರೊಂದಿಗೆ ವೇದಿಕೆ ಏರುತ್ತಿದ್ದ ತಮ್ಮಯ್ಯ ಹಾಗೂ ಶಾಸಕರ ನಡುವಿನ ಸಂಬಂಧ ಇತ್ತೀಚೆಗೆ ಅಷ್ಟಕಷ್ಟೇ ಆಗಿತ್ತು. ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರಾಗಿದ್ದ ಅವರು ಕ್ಷೇತ್ರದಲ್ಲಿ ಪ್ರಬಲ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯಕ್ಕೆ ಸೇರಿದವರು. ತಾನೂ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂಬು ಮಹತ್ವಾಕಾಂಕ್ಷೆ ಇಟ್ಟು ಕೊಂಡಿದ್ದಾರೆ. ಸದ್ಯ ಬಿಜೆಪಿಯಲ್ಲಿ ಆ ಕನಸು ಈಡೇರುವುದು ಕಷ್ಟ ಎಂದು ಅರಿತು ಈ ಹಿಂದೆ ಕಾಂಗ್ರೆಸ್​​ ಪಕ್ಷದಲ್ಲಿದ್ದ ತಮ್ಮಯ್ಯ ಮರಳಿ ಅದೇ ಪಕ್ಷಕ್ಕೆ ಸೇರುವುದಾಗಿ ಇದೇ ವೇಳೆ ಘೋಷಿಸಿದ್ದಾರೆ.

ಫೆ.19ರಂದು ಕಾಂಗ್ರೆಸ್ ಸೇರ್ಪಡೆ:ಫೆ.19 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ, ಎಲ್ಲ ಬೆಂಬಲಿಗರು ಅಂದು ಬೆಂಗಳೂರಿಗೆ ಬರಬೇಕೆಂದು ಕೇಳಿದ್ದೇನೆ. ಅವರೆಲ್ಲ ಬಂದರೆ ಅವರೂ ಕಾಂಗ್ರೆಸ್​ ಸೇರಲಿದ್ದಾರೆ ಎಂದೇ ಅರ್ಥ ಎಂದು ತಮ್ಮಯ್ಯ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ. ತಮ್ಮಯ್ಯ ಕಾಂಗ್ರೆಸ್​​ ಸೇರ್ಪಡೆಯಾದರೆ ಅಲ್ಲಿ ಟಿಕೆಟ್‍ಗೆ ಬೇಡಿಕೆ ಇಡಬಹುದು.

ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್​​‍ನಿಂದ ಗಾಯತ್ರಿ ಶಾಂತೇಗೌಡ, ಬಿ.ಹೆಚ್ ಹರೀಶ್, ಮಹಡಿಮನೆ ಮಹೇಶ್ ಸೇರಿದಂತೆ ಪ್ರಬಲ ಆಕಾಂಕ್ಷಿಗಳಿರುವುದರಿಂದ ತಮ್ಮಯ್ಯಗೆ ಅವಕಾಶ ಸಿಗುವುದು ಅಷ್ಟು ಸುಲಭವಲ್ಲ. ತಮ್ಮದೇ ಆದ ಬೆಂಬಲಿಗರ ಬಳಗ ಹೊಂದಿರುವ ಮತ್ತು ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ತಮ್ಮಯ್ಯ ಪಕ್ಷ ತೊರೆದಿರುವುದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಲಯದಲ್ಲಿ ಕೊಂಚ ತಳಮಳ ಸೃಷ್ಟಿಸಿದೆ.

ಇದನ್ನೂ ಓದಿ:ಬಿಜೆಪಿಗೆ ಗುಡ್ ಬೈ: ಕಾಂಗ್ರೆಸ್​ ಕಡೆ ಮುಖ ಮಾಡಿದ ಸಿ ಟಿ ರವಿ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಹೆಚ್.ಡಿ ತಮ್ಮಯ್ಯ

Last Updated : Feb 18, 2023, 9:43 AM IST

ABOUT THE AUTHOR

...view details