ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷ ಬಸವಣ್ಣವರ ತತ್ವಕ್ಕೆ ವಿರುದ್ಧವಾಗಿದೆ. ಕರ್ನಾಟಕ ರಾಜ್ಯವನ್ನು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎಟಿಎಂ ನಂತೆ ನೋಡುತ್ತಿದ್ದಾರೆ ಎಂದು ಬಿಜೆಪಿಯ ಕರ್ನಾಟಕ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಹೇಳಿದರು. ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಭಾನುವಾರ ಡಿಜಿಟಲ್ ಮೀಡಿಯಾ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಲಿಂಗಾಯತ ಸಮುದಾಯದ ಬಗ್ಗೆ ಸಿದ್ದರಾಮಯ್ಯನವರು ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲಾ ಜನರ ಪರವಾಗಿದ್ದೀವಿ, ನಮ್ಮ ದೇಶ ಮೊದಲು ಎನ್ನುವ ಪಕ್ಷ ಬಿಜೆಪಿ. ಎಲ್ಲಾ ಜಾತಿಯವರು ನಮ್ಮ ಪಕ್ಷದಲ್ಲಿದ್ದಾರೆ. ಯಾರಿಗೂ ದ್ರೋಹ ಮಾಡಿಲ್ಲ, ಯಾರ ವಿರುದ್ಧವೂ ನಾವು ಕೆಲಸ ಮಾಡಿಲ್ಲ, ಅದಕ್ಕೆ ಎಲ್ಲ ಜಾತಿಯವರು ಬಿಜೆಪಿಯಲ್ಲಿದ್ದಾರೆ. ಅವರು ಕರ್ನಾಟಕದಲ್ಲಿ ಕನ್ನಡಿಗರಾಗಿದ್ದಾರೆ. ತಮಿಳುನಾಡಿನಲ್ಲಿ ತಮಿಳುಗರಿದ್ದಾರೆ. ಕರ್ನಾಟಕದಲ್ಲಿ ಒಂದು ಸಮುದಾಯಕ್ಕೆ ಕಪ್ಪು ಚುಕ್ಕೆ ತರುವಂತ ಕೆಲಸವನ್ನು ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ. ಇದನ್ನು ಎಲ್ಲಾ ಸಮುದಾಯವರು ಸೇರಿ ವಿರೋಧಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದವರು ಜಾತಿ ಇಟ್ಟುಕೊಂಡೇ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಕೆಲವರು ಪಕ್ಷ ಬಿಟ್ಟು ಬಿಜೆಪಿ ಸೇರುತ್ತಾರೆ. ಇವರ್ಯಾರು ಜಾತಿ ಬಗ್ಗೆ ಮಾತನಾಡಲ್ಲ. ಬಿಜೆಪಿ ಬಿಟ್ಟು ಹೋಗುವವರು ಮಾತ್ರ ಜಾತಿ ಜಾತಿ ಅನ್ನುತ್ತದ್ದಾರೆ. ಕನ್ನಡಿಗರೆಲ್ಲಾ ಸೇರಿ ಇದಕ್ಕೆ ಉತ್ತರ ಕೊಡಬೇಕು. ಕನ್ನಡಿಗರೆಲ್ಲಾ ಎಷ್ಟು ಒಳ್ಳೆಯವರು ಎಂದು ತಮಿಳವನಾದ ನನಗೆ ಗೊತ್ತು. ಈ ಬಾರಿ ಬಿಜೆಪಿ 130 ಗಡಿ ದಾಟುತ್ತದೆ ಎಂದು ಭವಿಷ್ಯ ನುಡಿದ್ದಾರೆ.