ಚಿಕ್ಕಮಗಳೂರು: ಮನೆಯವರು ಜಾತ್ರೆಗೆ ಹೋದ ಸಂದರ್ಭದಲ್ಲಿ ಕಿಡಿಗೇಡಿಗಳು ಎರಡೂವರೆ ವರ್ಷದ ಸುಮಾರು 600 ಅಡಕೆ ಸಸಿಗಳನ್ನ ಕಡಿದು ಹಾಕಿ ವಿಕೃತಿ ಮೆರೆದಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಲ್ಲಾಪುರ ಗ್ರಾಮದ ರೇವಣ್ಣ ಎಂಬುವರಿಗೆ ಸೇರಿದ ಅಡಕೆ ಸಸಿಗಳು ಸಂಪೂರ್ಣ ನಾಶವಾಗಿವೆ. ಮಕ್ಕಳಂತೆ ಸಾಕಿದ್ದ ಗಿಡಗಳು ನೆಲಕ್ಕುರುಳಿರುವುದನ್ನು ಕಂಡು ಮಾಲೀಕ ರೇವಣ್ಣ ಕಣ್ಣೀರಿಟ್ಟಿದ್ದಾರೆ. ನಿನ್ನೆ(ಸೋಮವಾರ) ಅಂತರಗಟ್ಟೆ ಜಾತ್ರೆ ನಿಮಿತ್ತ ರೇವಣ್ಣ ಕುಟುಂಬದವರೆಲ್ಲ ಜಾತ್ರೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿದ ದುಷ್ಕರ್ಮಿಗಳು ಸಸಿಗಳನ್ನು ಕಡಿದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ದ್ವೇಷದ ಹಿನ್ನೆಲೆ ಕೃತ್ಯ: ಸಾಲ ಸೋಲ ಮಾಡಿ ಬೆಳೆಸಿದ್ದ ಅಡಕೆ ಗಿಡಗಳನ್ನ ಕ್ಷಣಾರ್ಧದಲ್ಲಿ ಕಡಿದು ಹಾಕಿದ್ದಾರೆ. ಗ್ರಾಮದ ಒಬ್ಬರ ಮೇಲೆ ಅನುಮಾನವಿದೆ. ಹಳೆ ದ್ವೇಷದ ಹಿನ್ನೆಲೆ ಉದ್ದೇಶ ಪೂರ್ವಕವಾಗಿ ಕೃತ್ಯ ಎಸಗಿದ್ದಾರೆ ಎಂದು ತೋಟದ ಮಾಲೀಕ ರೇವಣ್ಣ ಆರೋಪಿಸಿದ್ದಾರೆ. ವರ್ಷಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗಿಡಗಳನ್ನ ಬೆಳೆಸಲಾಗಿತ್ತು. ಈಗ ಎಲ್ಲ ಗಿಡಗಳನ್ನ ಬುಡಸಮೇತ ತೆಗೆದು ಮತ್ತೆ ಗಿಡಗಳನ್ನ ಹಾಕಿ ಬೆಳೆಸಬೇಕು. ಮತ್ತೆ ಡಬಲ್ ಖರ್ಚು ಆಗಲಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೃತ್ಯ ಎಸಗಿದ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ:ಹಾಸನ: 500ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ಹಾಕಿ ಕಿಡಿಗೇಡಿಗಳ ದುಷ್ಕೃತ್ಯ