ಕರ್ನಾಟಕ

karnataka

ಅನಾಹುತಕ್ಕೂ ಮೊದಲು ಎಚ್ಚೆತ್ತ ಪೊಲೀಸರಿಂದ ಜಿಲೆಟಿನ್ ವಶ: ಪ್ರಕರಣದಿಂದ ಮಾಲೀಕನ ಹೆಸರೇ ನಾಪತ್ತೆ

By

Published : Mar 5, 2021, 9:04 PM IST

ರಾಜಕೀಯ ಪಕ್ಷವೊಂದರ ಜೊತೆ ಗುರುತಿಸಿಕೊಂಡಿರುವ ಗುರುನಾಥ್ ಕೊಳ್ಳುರ್ ಪ್ರಭಾವಿ ವ್ಯಕ್ತಿ. ಮತ್ತು ಬೀದರ್​ನ ಕ್ಲಾಸ್ ಒನ್ ಗುತ್ತಿಗೆದಾರರೂ ಹೌದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನರ ಮೇಲೆ ಪ್ರಕರಣ ದಾಖಲಾಗಿದೆಯಾದರೂ ಅದರಲ್ಲಿ ಮೂವರ ಹೆಸರು ನಮೂದಿಸಲಾಗಿದೆ. ಆದರೆ ಎ1 ಆರೋಪಿಯ ಹೆಸರು ನಮೂದಿಸದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

police-raided-over-stone-mining-area-at-bider
ಅನಾಹುತಕ್ಕೂ ಮೊದಲೇ ಎಚ್ಚೆತ್ತಾ ಪೊಲೀಸರಿಂದ ಅಪಾರ ಜಿಲೆಟಿನ್ ವಶ

ಬೀದರ್: ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಫೋಟ ಘಟನೆ ಮಾಸುವ ಮುನ್ನವೇ ಗಡಿ ಜಿಲ್ಲೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್​​​ಗಳು ಪತ್ತೆಯಾಗಿದ್ದು ಜಿಲ್ಲೆಯ ನಾಲ್ಕು ಕಡೆ ಪೊಲೀಸರು ಭಾರೀ ಸ್ಫೋಟಕಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಜಿಲ್ಲೆಯ ಪ್ರಮುಖ ವ್ಯಕ್ತಿಯೊಬ್ಬರಿಗೆ ಸೇರಿದ್ದ ಕನ್ಸ್​​​ಟ್ರಕ್ಷನ್ ಒಂದರಲ್ಲೇ 16 ಕ್ವಿಂಟಲ್​ಗೂ ಅಧಿಕ ಜಿಲಿಟಿನ್ ಕಡ್ಡಿಗಳು ದೊರೆತಿದ್ದು, ಈವರೆಗೂ ಪ್ರಮುಖ ಆರೋಪಿಯನ್ನು ಬಂಧಿಸದೇ ಇರುವುದು ಮತ್ತು ಎಫ್​​​ಐಆರ್​​ನಲ್ಲಿ ಹೆಸರು ನಮೂದಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಜಿಲ್ಲೆಯ ವಿವಿಧೆಡೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟನ್​​ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ನಡೆದಿದ್ದು ಒಂದು ಪ್ರಕರಣದಲ್ಲಿ 6.875 ಕೆ.ಜಿ ಜಿಲೆಟಿನ್, 66 ನಾನ್ ಎಲೆಕ್ಟ್ರಿಕಲ್ ಡೆಟಾರಿನೆಟರ್ ವಶಕ್ಕೆ ಪಡೆದಿದ್ದಲ್ಲದೆ, ಇಬ್ಬರೂ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲೂ 24.875 ಜಿಲೆಟಿನ್ ಜಪ್ತಿ ಮಾಡಿ ಇಬ್ಬರನ್ನು ಬಂಧಿಸಲಾಗಿದೆ.

ಅನಾಹುತಕ್ಕೂ ಮೊದಲೇ ಎಚ್ಚೆತ್ತಾ ಪೊಲೀಸರಿಂದ ಅಪಾರ ಜಿಲೆಟಿನ್ ವಶ

ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 30 ಮೀಟರ್ ಕಾರ್ ಡೆಸ್ಕ್ ಕೇಬಲ್​ಗಳು, 60 ಡಿಟೋನೆಟರ್​​ಗಳು, 9 ಬಾಕ್ಸ್ ಲಿಕ್ವಿಡ್ ಜಿಲೆಟಿನ್ ಜಪ್ತಿಯಾಗಿದೆ. ಬೀದರ್ ತಾಲೂಕಿನ ಸುಲ್ತಾನಪುರ ಗ್ರಾಮದ ಬಳಿಯ ಜಿ.ಕೆ ಕನ್ಸ್​ಟ್ರಕ್ಷನ್ (ಗುರುನಾಥ್ ಕೊಳ್ಳುರ್ ಕನ್ಸ್ ಟ್ರಕ್ಷನ್)ನಲ್ಲಿ 1,675 ಕೆ.ಜಿಯ ಜಿಲೆಟಿನ್, 500 ನಾನ್ ಎಲೆಕ್ಟ್ರಿಕ್ ಡೆಟರ್ ನೆಟರ್ ವಶಪಡಿಸಿಕೊಂಡು ನಾಲ್ವರ ಮೇಲೆ ಬೀದರ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ‌ ರಾಜಕೀಯ ಪಕ್ಷವೊಂದರ ಜೊತೆ ಗುರುತಿಸಿಕೊಂಡಿರುವ ಗುರುನಾಥ್ ಕೊಳ್ಳುರ್ ಪ್ರಭಾವಿ ವ್ಯಕ್ತಿಯಾಗಿದ್ದು ಮತ್ತು ಬೀದರ್​ನ ಕ್ಲಾಸ್ ಒನ್ ಗುತ್ತಿಗೆದಾರ ಕೂಡ ಆಗಿದ್ದಾರೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನರ ಮೇಲೆ ಪ್ರಕರಣ ದಾಖಲಾಗಿದೆಯಾದರೂ ಅದರಲ್ಲಿ ಮೂವರ ಹೆಸರು ನಮೂದಿಸಲಾಗಿದೆ. ಆದರೆ ಎ1 ಆರೋಪಿಯಾದ ಜಿಕೆ ಕನ್ಸ್​ಟ್ರಕ್ಷನ್ ಮಾಲೀಕ ಗುರುನಾಥ್ ಕೊಳ್ಳುರ ಹೆಸರು ಮಾತ್ರ ದಾಖಲಾಗದೆ ಪ್ರಕರಣದಲ್ಲಿ ಕೇವಲ ಜಿಕೆ ಕನ್ಸ್​​ಟ್ರಕ್ಷನ್ ಮಾಲೀಕರು ಎಂದು ನಮೂದಿಸಲಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಕೇಳಿದರೆ ಜಿಕೆ ಕನ್ಸ್​ಟ್ರಕ್ಷನ್ ಮಾಲೀಕರು ಯಾರೆಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ದಾಖಲಾತಿ ನೋಡಿಕೊಂಡು ಹೆಸರು ಹೇಳ್ತೀವಿ ಎಂದಿದ್ದಾರೆ.

ಬೀದರ್ ತಾಲೂಕಿನ ತೆಲಂಗಾಣ ಗಡಿಗೆ ಹೊಂದಿಕೊಂಡ ಸುಲ್ತಾನಪುರ ಬಳಿ ಜಿಕೆ ಕನ್ಸ್​ಟ್ರಕ್ಷನ್​​ನ ಕಲ್ಲು ಕ್ವಾರಿ ಇದ್ದು ಟಿಪ್ಪರ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳು ಪತ್ತೆಯಾಗಿತ್ತು. ಇನ್ನು, ಜಿಕೆ ಮಾಲೀಕತ್ವದ ಸ್ಟೋನ್ ಕಟಿಂಗ್ ಕ್ರಶರ್ ತೆಲಂಗಾಣದಲ್ಲಿದ್ದರೆ, ಪ್ರಮುಖ ಕಚೇರಿ ಬೀದರ್​​ನಲ್ಲಿದೆ ಮತ್ತು ಬೀದರ್ ತಾಲೂಕಿನ ಸುಲ್ತಾನಪುರದ ಬಳಿ ಕ್ವಾರಿ ಇರವುದರಿಂದ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ.

ದಿನವೂ ನಡೆಯುತ್ತಿತ್ತು ಸ್ಫೋಟ..

ಈ ವೇಳೆ ಕ್ವಾರಿಯಲ್ಲೇ ನಿಂತಿದ್ದ ಟಿಪ್ಪರ್​​ನಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ನಂಬರ ಪ್ಲೇಟ್ ಹೊಂದಿರದ ಯಾರ ಹೆಸರಲ್ಲಿ ಟಿಪ್ಪರ್ ಇದೆ ಅನ್ನೋ ಬಗ್ಗೆ ಕೂಡ ಮಾಹಿತಿ ಇಲ್ಲ. ಇನ್ನು ಈ ಬಗ್ಗೆ ಸುಲ್ತಾನಪುರ ಗ್ರಾಮಸ್ಥರೊಬ್ಬರು ಮಾತನಾಡಿದ್ದು, ನಮ್ಮ ಗ್ರಾಮದ ಕೂದಲೆಳೆ ಅಂತರದಲ್ಲೆ ಜಿಕೆ ಕನ್ಸ್​ಟ್ರಕ್ಷನ್​​ ಕ್ವಾರಿ ಇದ್ದು ಇಲ್ಲಿ ದಿನಾಲೂ ಪ್ರಮಾಣದಲ್ಲಿ ಸ್ಫೋಟ ಮಾಡಲಾಗುತ್ತದೆ. ಇದರಿಂದಾಗಿ ನಮ್ಮ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು‌ ಬಾರಿ ನಾವು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಚಿಕೂನ್​ಗುನ್ಯಾ ಭೀತಿ: ಜಾಪೂರವಾಡಿ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ

ABOUT THE AUTHOR

...view details