ಕರ್ನಾಟಕ

karnataka

ಜನವರಿ 7ರಿಂದ ಬೀದರ್​ ಉತ್ಸವ, ಸಚಿವ ಪ್ರಭು ಚವ್ಹಾಣರಿಂದ ಉತ್ಸವ ಸಿದ್ಧತೆ ಪರಿಶೀಲನೆ

By

Published : Jan 4, 2023, 6:55 PM IST

Updated : Jan 4, 2023, 7:28 PM IST

ಬೀದರ್​ ಉತ್ಸವ ಜಿಲ್ಲೆಯ ಪ್ರತಿಯೊಬ್ಬ ಜನತೆಯ ಹಬ್ಬ - ಉತ್ಸವದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳಿಗೆ ಸಚಿವರಿಂದ ಸೂಚನೆ - ಉತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನ.

bidar-utsav-on-january-12-festival-preparation-review-by-minister-prabhu-chavan
ಜನವರಿ 12ರಂದು ಬೀದರ್​ ಉತ್ಸವ, ಸಚಿವ ಪ್ರಭು ಚವ್ಹಾಣರಿಂದ ಉತ್ಸವ ಸಿದ್ಧತೆ ಪರಿಶೀಲನೆ

ಜನವರಿ 7ರಿಂದ ಬೀದರ್​ ಉತ್ಸವ, ಸಚಿವ ಪ್ರಭು ಚವ್ಹಾಣರಿಂದ ಉತ್ಸವ ಸಿದ್ಧತೆಯ ಪರಿಶೀಲನೆ

ಬೀದರ್​: ಪಶು ಸಂಗೋಪನೆ ಸಚಿವರಾದ ಪ್ರಭು ಬಿ ಚವ್ಹಾಣ ಅವರು, ಬೀದರ್​ ಉತ್ಸವದ ನಿಮಿತ್ತ ಬೀದರ್​ ಕೋಟೆಗೆ ಭೇಟಿ ನೀಡಿ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದರು. ಶ್ವಾನ ಪ್ರದರ್ಶನ ಉದ್ದೇಶಿಸಿ ಆಯೋಜಿಸಲಾದ ಕೋಟೆ ಪ್ರವೇಶ ದ್ವಾರದ ಹತ್ತಿರದ ಸ್ಥಳವನ್ನು ವೀಕ್ಷಿಸಿ, ಶ್ವಾನ ಪ್ರದರ್ಶನ ಕಾರ್ಯಕ್ರಮಕ್ಕೆ ಬೇರೆ ಬೇರೆ ಪ್ರದೇಶಗಳಿಂದ ಶ್ವಾನಗಳು ಬರುತ್ತವೆ. ಹಾಗಾಗಿ, ಕಾರ್ಯಕ್ರಮ ಬಹಳ ವ್ಯವಸ್ಥಿತವಾಗಿ ನಡೆಯಬೇಕು ಮತ್ತು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಬೀದರ್​ ಉತ್ಸವ ನಡೆಯುವ ಮುಖ್ಯ ವೇದಿಕೆಯ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಎಲ್ಲ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆದರು. ವೇದಿಕೆಯ ಅಳತೆ, ವೇದಿಕೆ ಮುಂಭಾಗದಲ್ಲಿ ಹಾಕಲಾಗುತ್ತಿರುವ ಕುರ್ಚಿಗಳು, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಈವರೆಗೆ ಮಾಡಿಕೊಂಡಿರುವ ತಯಾರಿಗಳ ಬಗ್ಗೆ ಅಧಿಕಾರಿಗಳಾದ ಡಾ. ಗೌತಮ ಅರಳಿ ಹಾಗೂ ಅಭಯಕುಮಾರ ಅವರಿಂದ ವಿವರಣೆ ಪಡೆದುಕೊಂಡರು.

ಕುಸ್ತಿ ಪಂದ್ಯಾವಳಿ, ಗಾಳಿಪಟ ಉತ್ಸವ, ವಸ್ತು ಪ್ರದರ್ಶನ, ಮಕ್ಕಳ ಆಟದ ಸ್ಥಳ, ಬೋಟಿಂಗ್ ಆಯೋಜಿಸಲಾಗುವ ಬೊಮ್ಮಗೊಂಡೇಶ್ವರ ಕೆರೆ ಸೇರಿದಂತೆ ಕೋಟೆ ಆವರಣದ ವಿವಿಧೆಡೆ ಭೇಟಿ ನೀಡಿ ಅಗತ್ಯ ಸಲಹೆಗಳನ್ನು ನೀಡಿದರು.

ಬೀದರ್​ ಉತ್ಸವವು ಕೇವಲ ಒಂದು ಕಾರ್ಯಕ್ರಮವಾಗಿರದೇ ಜಿಲ್ಲೆಯ ಪ್ರತಿಯೊಬ್ಬ ಜನತೆಯ ಹಬ್ಬವಾಗಿದೆ. ಈ ಉತ್ಸವ ಜಿಲ್ಲೆಯ ಪ್ರತಿಯೊಬ್ಬರಿಗೂ ಭಾವನಾತ್ಮಕವಾಗಿ ಸಂಬಂಧ ಹೊಂದಿರುವುದರಿಂದ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಆಗಮಿಸುತ್ತಾರೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಸಮಯ ಕಡಿಮೆ ಇದ್ದು, ಎಲ್ಲ ತಯಾರಿಗಳು ತೀವ್ರ ಗತಿಯಲ್ಲಿ ನಡೆಯಬೇಕು. ಕೋಟೆ ಆವರಣದಲ್ಲಿನ ರಸ್ತೆಗಳನ್ನು ಸರಿಪಡಿಸಿ ಧೂಳಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಬೀದರ್​ ಉತ್ಸವ ಯಶಸ್ವಿಯಾಗಿ ನಡೆಯುವುದಕ್ಕಾಗಿ ರಚಿಸಿರುವ ಎಲ್ಲ ಸಮಿತಿಗಳು ಸರಿಯಾಗಿ ಕೆಲಸಗಳನ್ನು ನೋಡಿಕೊಳ್ಳಬೇಕು ಮತ್ತು ಉತ್ಸವದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ಜರುಗದಂತೆ‌ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಣಾಧಿಕಾರಿ ಶಿಲ್ಪಾ ಎಂ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶಿಲವಂತ್, ಹಾಗೂ ಡಿವೈಎಸ್​ಪಿ ಸತೀಶ್ ಅವರಿಗೆ ನಿರ್ದೇಶನ ನೀಡಿದರು.

ಬೀದರ್​ ನಗರದಲ್ಲಿನ ಎಲ್ಲ ರಸ್ತೆ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಫಾಗಿಂಗ್ ಮಾಡಿಸಬೇಕು. ನಗರದಾದ್ಯಂತ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು ಎಂದು ನಗರಸಭೆಯ ಪ್ರಭಾರಿ ಆಯುಕ್ತರಾದ ರಾಜಶೇಖರ ಮಠ ಅವರಿಗೆ ಸೂಚಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೀದರ್​ನ ಪುರಾತನ ಕೋಟೆ, ಗುರುದ್ವಾರ, ಪಾಪನಾಶ, ಅನುಭವ ಮಂಟಪ, ನರಸಿಂಹ ಝರನಾದಂತಹ ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳನ್ನು ಹೊಂದಿರುವ ಐತಿಹಾಸಿಕ ಪ್ರಾಮುಖ್ಯತೆ ಇರುವ ಸುಂದರ ಜಿಲ್ಲೆಯಾಗಿದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಕಲೆ ಮತ್ತು ಸಂಸ್ಕೃತಿಯ ಉತ್ತೇಜನಕ್ಕಾಗಿ ಅದ್ಧೂರಿಯಾಗಿ ಬೀದರ್​ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಅಭಿವೃದ್ಧಿ ಸಚಿವರಾದ ಜಿ. ಕಿಶನ್ ರೆಡ್ಡಿ ಅವರಿಂದ ಜನವರಿ 7 ರಂದು ಬೀದರ್​ ಉತ್ಸವ ಉದ್ಘಾಟನೆಯಾಗಲಿದ್ದು, ಜನವರಿ 9 ರಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಅಧಿಕಾರಿಗಳು ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲಸಗಳು ಇನ್ನಷ್ಟು ತೀವ್ರಗತಿಯಿಂದ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೀದರ್​ ಪಶುವೈದ್ಯಕೀಯ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸದಸ್ಯರಾದ ವಸಂತ ಬಿರಾದಾರ, ನಗರಸಭೆ ಸದಸ್ಯರಾದ ಶಶಿಧರ ಹೊಸಳ್ಳಿ, ಹಾಗೂ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ರಮೇಶ ಉಪಾಸೆ ಹಾಗೂ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಬೀದರ್: ರಾಜ್ಯ ಹೆದ್ದಾರಿ ಕುಸಿತ - ಪರ್ಯಾಯ ಸಂಚಾರಕ್ಕೆ ಸೂಚನೆ

Last Updated :Jan 4, 2023, 7:28 PM IST

ABOUT THE AUTHOR

...view details