ಕರ್ನಾಟಕ

karnataka

20ರ ಪ್ರಾಯದಲ್ಲಿ ಎಮ್ಮೆ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ.. 78ನೇ ವಯಸ್ಸಿನಲ್ಲಿ ಬಂಧನ!

By ETV Bharat Karnataka Team

Published : Sep 12, 2023, 8:23 PM IST

Updated : Sep 12, 2023, 10:01 PM IST

ಎಮ್ಮೆಕದ್ದು ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎಮ್ಮೆ ಕಳುವು ಪ್ರಕರಣ
ಎಮ್ಮೆ ಕಳುವು ಪ್ರಕರಣ

ಬೀದರ್:ಎಮ್ಮೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 58 ವರ್ಷಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 1965ರಲ್ಲಿ ಮೇಹಕರ್‍ನಲ್ಲಿ ನಡೆದ ಎರಡು ಎಮ್ಮೆ, ಒಂದು ಕರು ಕಳುವಾದ ಕುರಿತು ಮುರಳೀಧರರಾವ್ ಕುಲಕರ್ಣಿ ಎನ್ನುವವರು ಮೇಹಕರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆ ನಂತರ ಮಹಾರಾಷ್ಟ್ರದ ಉದಗೀರ್ ಮೂಲದ ಕಿಶನ್ ಚಂದರ್ (30) ಹಾಗೂ ಗಣಪತಿ ವಾಗ್ಮೋರೆ (20) ಅವರನ್ನು ಬಂಧಿಸಲಾಗಿತ್ತು.

ಆದರೆ, ಜಾಮೀನು ಪಡೆದ ಬಳಿಕ ಈ ಆರೋಪಿಗಳು ನ್ಯಾಯಾಲಯಕ್ಕೆ ಬರದೇ ತಲೆ ಮರೆಸಿಕೊಂಡಿದ್ದರು. ಸಮನ್ಸ್, ವಾರಂಟ್​​ ಜಾರಿ ಮಾಡಿದ್ದರೂ ಹಾಜರಾಗಿರಲಿಲ್ಲ. ಮೊದಲ ಆರೋಪಿ ಕಿಶನ್ ಮೃತಪಟ್ಟಿದ್ದರಿಂದ ಆತನ ವಿರುದ್ಧದ ಪ್ರಕರಣ ರದ್ದಾಗಿತ್ತು. ಇನ್ನೊಬ್ಬ ಗಣಪತಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ವಿಶೇಷ ತಂಡವು ಗಣಪತಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಕಳ್ಳತನ ನಡೆದಾಗ ಗಣಪತಿ ವಯಸ್ಸು ಕೇವಲ 20 ವರ್ಷವಾಗಿತ್ತು. ಆತನಿಗೆ ಈಗ 78 ವರ್ಷ ವಯಸ್ಸಾಗಿದೆ.

ಈ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹೇಳಿದ್ದಿಷ್ಟು:​ ಹಳೆ ಪ್ರಕರಣಗಳ ತನಿಖೆಗೆ ವಿಶೇಷ ತಂಡ ರಚನೆ ಮಾಡಿದ್ದೆವು. ಈ ಸಂದರ್ಭದಲ್ಲಿ 58 ವರ್ಷಗಳ ಹಿಂದಿನ ಈ ಪ್ರಕರಣ ಪತ್ತೆ ಯಾಗಿದೆ. ಹಾಗಾಗಿ ವ್ಯಕ್ತಿಯನ್ನು ಪತ್ತೆ ಹಚ್ಚಿ ನಮ್ಮ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಎಸ್​​​​ಪಿ ಚನ್ನಬಸವಣ್ಣ ಹೇಳಿದ್ದಾರೆ.

’’ಸುಮಾರು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳು, ಆರೋಪಿಗಳು ಕೋರ್ಟ್‌ಗೆ ಹಾಜರಾಗದೇ ಇರುವ ಎಲ್​ಪಿಆರ್ ಪ್ರಕರಣಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಈ ತಂಡವು ಇದೀಗ 58 ವರ್ಷಗಳ ಬಳಿಕ ಆರೋಪಿಯನ್ನು ಪತ್ತೆ ಮಾಡಿರುವುದು ಸೇರಿ ಇಂತಹ ಒಟ್ಟು 7 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ‘‘ -ಚನ್ನಬಸವಣ್ಣ ಎಸ್ ಎಲ್, ಬೀದರ್ ಎಸ್​ಪಿ.

ಇದನ್ನೂ ಓದಿ:ಮಟಮಟ ಮಧ್ಯಾಹ್ನವೇ ಶಾಲಾ ಮಕ್ಕಳ ಅಪಹರಣಕ್ಕೆ ಯತ್ನ.. ಕಿಡಿಗೇಡಿಗಳ ಕೃತ್ಯಕ್ಕೆ ಬೆಚ್ಚಿಬಿದ್ದ ಪೋಷಕರು

Last Updated :Sep 12, 2023, 10:01 PM IST

ABOUT THE AUTHOR

...view details