ಕರ್ನಾಟಕ

karnataka

ಇಂದು ವಿಜಯನಗರ ಜಿಲ್ಲೆ ಉದ್ಘಾಟಿಸಲಿರುವ ಸಿಎಂ: ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು

By

Published : Oct 2, 2021, 10:52 AM IST

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 'ವಿಜಯನಗರ ಉತ್ಸವ' ಮತ್ತು 'ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ' ನೆರವೇರಿಸಲಿದ್ದಾರೆ.

CM to inaugurate Vijayanagar district today
ವಿಜಯನಗರ ಜಿಲ್ಲೆ ಉದ್ಘಾಟನೆಗೆ ಸಿದ್ಧಗೊಂಡ ವೇದಿಕೆ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಅಧಿಕೃತ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. 'ವಿಜಯನಗರ ಉತ್ಸವ' ಮತ್ತು 'ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ'ವು ಇಂದು ಮತ್ತು ನಾಳೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರಣ್ಯ ವೇದಿಕೆಯನ್ನು ಸಿದ್ಧಗೊಳಿಸಲಾಗಿದೆ. ವೇದಿಕೆ ಮೇಲೆ ಕಣ್ಣು ಹಾಯಿಸಿದರೆ ಹಂಪಿ ಮಾತಂಗ ಪರ್ವತ ಹಾಗೂ ವಿರೂಪಾಕ್ಷೇಶ್ವರ ಗೋಪುರ ರಾಚುತ್ತದೆ. ವಿದ್ಯುತ್ ದೀಪಗಳಿಂದ ವೇದಿಕೆ ಝಗಮಗಿಸುತ್ತಿದೆ. ಅಲ್ಲದೇ, ಕ್ರೀಡಾಂಗಣದ ಸುತ್ತಲೂ ಹಂಪಿ ಕಲಾತ್ಮಕ ಚಿತ್ರಗಳನ್ನು ಅಳಪಡಿಸಲಾಗಿದೆ. ಉದ್ಘಾಟನೆ ಕಾರ್ಯಕ್ರಮದ ಸಂದರ್ಭದಲ್ಲಿ 464 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಮತ್ತು ಶಂಕು ಸ್ಥಾಪನೆ ಕಾರ್ಯವನ್ನು ಸಿಎಂ ನೆರವೇರಿಸಲಿದ್ದಾರೆ.

ವಿಜಯನಗರ ಜಿಲ್ಲೆ ಉದ್ಘಾಟನೆಗೆ ಸಿದ್ಧಗೊಂಡ ವೇದಿಕೆ

ವೈವಿಧ್ಯಮಯ ಕಲೆ ಅನಾವರಣ:

ಸಂಜೆ 4ಕ್ಕೆ ವಡಕರಾಯ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ವಿಜಯನಗರ ವೈಭವ ಮೆರವಣಿಗೆ ನಡೆಯಲಿದೆ. ಈ ಕಲಾತಂಡಗಳ ಜೊತೆಗೆ ಆಳ್ವಾಸ್ ಸಂಸ್ಥೆಯ 25 ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಪ್ರಧಾನ ವೇದಿಕೆಗೆ ವಿದ್ಯಾರಣ್ಯರ ಹೆಸರಿಡಲಾಗಿದೆ.

ಖ್ಯಾತ ಡ್ರಮ್ಮರ್ ಶಿವಮಣಿ, ರಾಜೇಶ್ ವೈದ್ಯ ಮತ್ತು ಪ್ರವೀಣ್ ಗೋಡ್ಖಿಂಡಿ ಅವರು ರಾತ್ರಿ 10ಕ್ಕೆ ವಾದ್ಯ ಸಂಗೀತದ ರಸದೌತಣ ಉಣ ಬಡಿಸಲಿದ್ದಾರೆ. ಅಲ್ಲದೇ, ಸೋಜುಗದ ಸೂಜಿಮಲ್ಲಿಗೆ ಖ್ಯಾತಿಯ ಗಾಯಕಿ ಅನನ್ಯ ಭಟ್, ಕಲಾವಿದರಾದ ಕಲಾವತಿ ದಯಾನಂದ, ಶಹನಾಜ್‍ ಅಖ್ತರ್ ಮುಂತಾದವರು ಕಾರ್ಯಕ್ರಮ ನೀಡಲಿದ್ದಾರೆ.

ಮಂಗ್ಲಿ ಗಾಯನ :

ನಾಳೆ (ಅ. 3) ಕನ್ನೇ ಅದಿರಿಂದಿ (ಕಣ್ಣು ಹೊಡಿಯಾಕ) ಹಾಡಿನ ಖ್ಯಾತಿಯ ಗಾಯಕಿ ಮಂಗ್ಲಿ ಅವರು ಜಾನಪದ ಮತ್ತು ಚಲನಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಖ್ಯಾತ ಗಾಯಕಿಯರಾದ ಅನುರಾಧಾ ಭಟ್, ಶಮಿತಾ ಮಲ್ನಾಡ್, ಗಾಯಕ ವಿಜಯಪ್ರಕಾಶ್ ಮತ್ತು ಅವರ ತಂಡವು ಚಲನಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಸ್ಥಳೀಯ ಗಾಯಕಿ ಸರಿಗಮಪ ಸೂಪರ್ ಸಿಂಗರ್ ರನ್ನರ್ ಅಪ್ ಮೀರಾ ಹಾಗೂ ಇನ್ನೋರ್ವ ಗಾಯಕಿ ಭೂಮಿಕಾ ಅವರು ಕೂಡ ಭಾಗವಹಿಸಲಿದ್ದಾರೆ. ಸಂಜೆ 4:30ರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ, ಸ್ಥಳೀಯ ಕಲಾವಿದರು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ABOUT THE AUTHOR

...view details