ಕರ್ನಾಟಕ

karnataka

ವಿಜಯನಗರ: ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಬಂದ ಆಫ್ರಿಕಾ ಜಿರಾಫೆ!

By

Published : Jan 28, 2023, 8:13 PM IST

ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನಕ್ಕೆ ಬಂದ ಬಿಹಾರದ ಪಟ್ನಾ ಮೃಗಾಲಯದ ಜಿರಾಫೆ - 4 ವರ್ಷದ ಈ ಜಿರಾಫೆಗೆ ಮೈಸೂರು ಮೃಗಾಲಯದಿಂದ ಆಗಮಿಸುವ ಮತ್ತೊಂದು ಜಿರಾಫೆ ಜೋಡಿ - ಸಚಿವ ಆನಂದ್ ಸಿಂಗ್ ಮಾಹಿತಿ.

Africa Giraffe in Atal Bihari Vajpayee Zoo
ವಿಜಯನಗರ:ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಬಂದ ಆಫ್ರಿಕಾ ಜಿರಾಫೆ!

ವಿಜಯನಗರ: ಉತ್ತರ ಕರ್ನಾಟಕದ ಅತಿ ದೊಡ್ಡ ಮೃಗಾಲಯ, ಹಂಪಿ ಕನ್ನಡ ವಿವಿ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನಕ್ಕೆ ಬಿಹಾರದಿಂದ ವಿಶೇಷ ಅತಿಥಿ ಆಗಮನವಾಗಿದೆ. ಅದೇ ಭೂಮಿಯ ಮೇಲೆ ವಾಸಿಸುವ ಎಲ್ಲ ಪ್ರಾಣಿಗಳಿಗಿಂತಲೂ ಅತ್ಯಂತ ಉದ್ದವಾದ, ಮತ್ತು ದೊಡ್ಡದಾಗಿ ಮೆಲಕುಹಾಕುವ ಪ್ರಾಣಿಯಾಗಿರುವ ಆಫ್ರಿಕಾ ಮೂಲದ ಜಿರಾಫೆ.

4 ವರ್ಷದ ಜಿರಾಫೆಗೆ ಮೈಸೂರು ಮೃಗಾಲಯ ಆಗಮಿಸುವ ಜಿರಾಫೆ ಜೋಡಿ:ಈ ಕುರಿತು ಮಲಪನಗುಡಿಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸುದ್ದಿಗಾರರೂಂದಿಗೆ ಮಾತನಾಡಿ, ಮೃಗಾಲಯದ ಡಿಸಿಎಫ್ ಕಿರಣ್ ಕುಮಾರ್ ಅವರು ಬಿಹಾರ ಪಟ್ನಾ ಮೃಗಾಲಯದಿಂದ ಜಿರಾಫೆ ತರುವಲ್ಲಿ ಆರು ತಿಂಗಳಿಂದ ಪ್ರಯತ್ನ ಪಟ್ಟಿದ್ದಾರೆ. ಇಲ್ಲಿನ ಮೃಗಾಲಯದಲ್ಲಿ ಜಿರಾಫೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಾಲ್ಕು ದಿನಗಳ ರಸ್ತೆ ಪ್ರಯಾಣದ ಮೂಲಕ ಬಿಹಾರದಿಂದ ಜಿರಾಫೆ ಕರೆ ತರಲಾಗಿದೆ. 4 ವರ್ಷದ ಈ ಜಿರಾಫೆಗೆ ಮೈಸೂರು ಮೃಗಾಲಯದಿಂದ ಆಗಮಿಸುವ ಮತ್ತೊಂದು ಜಿರಾಫೆ ಜೋಡಿಯಾಗಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಹೊಂದಿರುವ ಮೃಗಾಲಯ:2017ರಲ್ಲಿ ಪ್ರಾರಂಭಿಸಲಾದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಹೊಂದಿರುವ ಸ್ಥಳವಾಗಿದೆ. ಈಗಾಗಲೇ ಉದ್ಯಾನದಲ್ಲಿ ಹುಲಿ, ಸಿಂಹ, ಸ್ಪಾಟರ್ ಜಿಂಕೆ, ಸಾಂಬಾರ್, ಬಾರ್ಕಿಂಗ್ ಜಿಂಕೆ ಮತ್ತು ಇತರ ಪ್ರಾಣಿಗಳಿವೆ. ಮೊಸಳೆಗಳು, ಕತ್ತೆಕಿರುಬ, ಚಿರತೆ, ಕರಡಿ, ಆಮೆ, ನರಿ ಮತ್ತು ಲಂಗೂರ್ ಸೇರಿದಂತೆ 80ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳು ಹಲವಾರು ಪ್ರಾಣಿಗಳಿವೆ. ಇವುಗಳ ಗುಂಪಿಗೆ ಹೊಸದಾಗಿ ಜಿರಾಫೆ ಕೂಡ ಸೇರ್ಪಡೆಯಾಗಿದೆ. ಹೊಸ ಅತಿಥಿಯ ಆಗಮನದಿಂದ ಮೃಗಾಲಯದ ಕಳೆ ಹೆಚ್ಚಿದ್ದು, ಪ್ರಾಣಿ ಪ್ರಿಯರನ್ನು ಆಕರ್ಷಿಸುತ್ತಿದೆ.

ಸತತ ಒಂದು ವಾರ ಕಾಲ ನಿಧಾನವಾಗಿ ಪ್ರಯಾಣಿಸಿ ಕಮಲಾಪುರದ ಮೃಗಾಲಯಕ್ಕೆ ಆಗಮನ:ಮೃಗಾಲಯದ ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿ ಮೈಸೂರು ಮೃಗಾಲಯ ನೀಡಿದ ಜೀಬ್ರಾ, ಕಾಡೆಮ್ಮೆ ಮತ್ತಿತರ ಪ್ರಾಣಿಗಳ ಬದಲಾಗಿ ನಾಲ್ಕು ವರ್ಷದ ಹೆಣ್ಣು ಜಿರಾಫೆಯನ್ನು ಪಟ್ನಾ ಮೃಗಾಲಯದಿಂದ ಹಂಪಿ ಮೃಗಾಲಯಕ್ಕೆ ನೀಡಲಾಗಿದೆ. ಇದನ್ನು ತರಲು ಇಲ್ಲಿಂದ ವಿಶೇಷ ಬೋನು, ವಾಹನಗಳಲ್ಲಿ ಹೋಗಿ, ಸತತ ಒಂದು ವಾರ ಕಾಲ ನಿಧಾನವಾಗಿ ಪ್ರಯಾಣಿಸಿ ಇಂದು ಕಮಲಾಪುರದ ಮೃಗಾಲಯಕ್ಕೆ ಕರೆತರಲಾಗಿದೆ.

ಜಿರಾಫೆಗಾಗಿ ವಿಶೇಷವಾದ ಆವರಣ:ಈ ಜಿರಾಫೆಗಾಗಿ ಈಗಾಗಲೇ ವಿಶೇಷವಾದ ಆವರಣವನ್ನು ಸಿದ್ಧಪಡಿಸಲಾಗಿದ್ದು, ಇದಕ್ಕೆ ಬೇಕಾದ ಆಹಾರ ಹಾಗೂ ಆರೈಕೆಯ ವ್ಯವಸ್ಥೆಯನ್ನು ಮಾಡಲಾಗಿದೆ, ಸುದೀರ್ಘ ಪ್ರಯಾಣದಿಂದ ಚೇತರಿಸಿಕೊಂಡ ಜಿರಾಫೆ ಲವ ಲವಿಕೆಯಿಂದ ಓಡಾಡುತ್ತಿದೆ ಎಂದು‌ ಹಂಪಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂಎನ್ ಕಿರಣ್ ಮಾಹಿತಿ ನೀಡಿದ್ದಾರೆ.

ಜಿರಾಫೆಯನ್ನು ಕರೆತರುವಲ್ಲಿ ಶ್ರಮವಹಿಸಿದ ಪಶುವೈದ್ಯಾಧಿಕಾರಿ ಸೇರಿದಂತೆ ಇತರೆ ಸಿಬ್ಬಂದಿಗಳನ್ನು ಸಚಿವ ಆನಂದ್ ಸಿಂಗ್ ಅಭಿನಂದಿಸಿದರು.

ಇದನ್ನೂ ಓದಿ:ಹಂಪಿ ಉತ್ಸವಕ್ಕೆ ಬೊಮ್ಮಾಯಿ ಚಾಲನೆ.. ಖ್ಯಾತ ಗಾಯಕರಿಂದ ಸಂಗೀತ ರಸಮಂಜರಿ

ABOUT THE AUTHOR

...view details