ಕರ್ನಾಟಕ

karnataka

ಕುಸ್ತಿ ಅಖಾಡಕ್ಕಿಳಿದ ಮೇಲೆ ಏನಾದರೂ ಆಗಲಿ, ನಾವೂ ಅಷ್ಟೇ ಗಟ್ಟಿಯಾಗಿದ್ದೇವೆ: ಸಚಿವೆ ಜೊಲ್ಲೆ

By

Published : Jan 20, 2023, 10:40 AM IST

Updated : Jan 20, 2023, 11:06 AM IST

ಸಚಿವೆ ಶಶಿಕಲಾ ಜೊಲ್ಲೆ ಅವರು ಸತೀಶ್ ಜಾರಕಿಹೊಳಿ ಅವರಿಗೆ ಪರೋಕ್ಷ ಸವಾಲು ಹಾಕಿದ್ದಾರೆ.

Haj and Waqf Minister Sasikala Jolla
ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ

ನಿಪ್ಪಾಣಿಯಲ್ಲಿ ಜೊಲ್ಲೆ ಗ್ರೂಪ್​ ವತಿಯಿಂದ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾವಳಿ ಆಯೋಜನೆ

ನಿಪ್ಪಾಣಿ (ಬೆಳಗಾವಿ) :ಒಂದು ಸಲ ಕುಸ್ತಿ ಮೈದಾನಕ್ಕಿಳಿದ ಮೇಲೆ ಏನಾದರೂ ಆಗಲಿ. ನಾವೂ ಕೂಡ ಅಷ್ಟೇ ಗಟ್ಟಿಯಾಗಿದ್ದೇವೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಪರೋಕ್ಷ ಸವಾಲೆಸೆದರು. ನಿಪ್ಪಾಣಿ ಪಟ್ಟಣದಲ್ಲಿ ಜೊಲ್ಲೆ ಗ್ರೂಪ್​ ವತಿಯಿಂದ ಆಯೋಜನೆಗೊಂಡಿದ್ದ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸತೀಶ್​ ಜಾರಕಿಹೊಳಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವೆ, ಚುನಾವಣೆ ಅಂದರೆ ಚುನಾವಣೆನೇ. ಯಾರು, ಎಲ್ಲಿಂದ ಬರುತ್ತಾರೋ ಬರಲಿ. ಒಂದು ಸಲ ಕುಸ್ತಿ ಪಂದ್ಯಾವಳಿಗೆ ಇಳಿದ ಮೇಲೆ ಏನಾದರೂ ಆಗ್ಲಿ, ನಾವು ಗಟ್ಟಿಯಾಗಿಯೇ ಇದ್ದೇವೆ, ಚುನಾವಣೆ ಎದುರಿಸುತ್ತೇವೆ ಎಂದರು. ಇತ್ತೀಚಿಗೆ ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಅವರು ಚುನಾವಣೆ ಸ್ಪರ್ಧಿಸುವ ವಿಚಾರವಾಗಿ ಬೆಂಗಳೂರು, ನಿಪ್ಪಾಣಿ, ಯಮಕಮರಡಿ ಕ್ಷೇತ್ರಕ್ಕೆ ಬರುತ್ತೀರ ಬನ್ನಿ ಎಂದು ಬಹಿರಂಗವಾಗಿ ಸವಾಲು ಹಾಕಿದ್ದರು. ಇದಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಜೊಲ್ಲೆ ಗ್ರೂಪ್‌ ವತಿಯಿಂದ ಕಳೆದ 32 ವರ್ಷಗಳಿಂದ ಕ್ರೀಡೆ, ಶಿಕ್ಷಣ, ಆರೋಗ್ಯ, ಆಧ್ಯಾತ್ಮಿಕ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಅಷ್ಟೇ ಅಲ್ಲದೇ, ಬಿಎಸ್​ಎಫ್​ ತಂಡ, ಸೆಂಟ್ರಲ್​ ಪೊಲೀಸ್ ತಂಡ ಹೀಗೆ ಪಂದ್ಯಾವಳಿಯಲ್ಲಿ 40 ತಂಡಗಳು ಪಾಲ್ಗೊಂಡಿವೆ. ನಮ್ಮ ದೇಶೀಯ ಆಟ ಉಳಿಸುವುದೇ ಪಂದ್ಯಾವಳಿಯ ಉದ್ದೇಶ ಎಂದರು.

ಕಬಡ್ಡಿ ಮಣ್ಣಿನ ಆಟ. ಭೂತಾಯಿಗೆ ನಮಸ್ಕರಿಸಿ, ಭೂಮಿ ಮುಟ್ಟಿ ಆಡುವ ಆಟ ಎಂದು ಶಶಿಕಲಾ ಜೊಲ್ಲೆ ಹೇಳಿದರು. ಇಂದಿನ ದಿನಮಾನಗಳಲ್ಲಿ ಇಂತಹ ಆಟ ನಶಿಸಿ ಹೋಗಬಾರದು. ಕಬಡ್ಡಿ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಪರಿಚಯವಾಗಬೇತು, ಆಟ ಕಲಿತು ಆಡಬೇಕು ಎಂದರು.

ಕಬಡ್ಡಿ ಆಡುವುದರಿಂದ ದೇಹ ಮತ್ತು ಮನಸ್ಸು ಎರಡೂ ಕೂಡ ಸ್ವಚ್ಚ ಹಾಗೂ ಸದೃಢವಾಗುತ್ತದೆ. ಸಮಾಜದಲ್ಲಿ ಒಳ್ಳೆಯ ಕಾರ್ಯಗಳು ಇಂತಹ ಆಟಗಳಿಂದ ಆಗುತ್ತವೆ. ಇತ್ತೀಚಿನ ದಿನಗಳಲ್ಲಿ ದೇಶಿ ಕ್ರೀಡೆಗಳು ಸ್ವದೇಶದಲ್ಲೇ ನಶಿಸುತ್ತಿರುವುದು ಬೇಸರದ ಸಂಗತಿ. ಈ ಹಿನ್ನೆಲೆಯಲ್ಲಿ ನಮ್ಮ ಮುಂದಿನ ಪೀಳಿಗೆಗೆ ಈ ಕ್ರೀಡೆಯನ್ನು ಪರಿಚಯಿಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ನಿಪ್ಪಾಣಿಯಲ್ಲಿ ಎರಡನೇ ಬಾರಿಗೆ ಎ ಗ್ರೇಡ್ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆ ಹತ್ತಿರವಿರಲಿ, ದೂರ ಇರಲಿ. ಜೊಲ್ಲೆ ಗ್ರೂಪ್ ವತಿಯಿಂದ ಕಳೆದ ಹಲವು ವರ್ಷಗಳಿಂದ ವಿವಿಧ ದೇಶಿ ಸಂಸ್ಕೃತಿ, ಕ್ರೀಡೆ ಆಯೋಜನೆ ಮಾಡುತ್ತಾ ಬಂದಿದ್ದೇವೆ. ಚುನಾವಣೆ ದೃಷ್ಟಿಕೋನ ಇಟ್ಟುಕೊಂಡು ಮಾಡುವುದಕ್ಕಿಂತಲೂ ನಮ್ಮ ಸದೃಢ ಸಮಾಜಕ್ಕೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡುವುದು ಉತ್ತಮವಾಗಿದೆ ಎಂದು ಶಶಿಕಲಾ ಜೊಲ್ಲೆ ಸ್ಪಷ್ಟನೆ ಕೊಟ್ಟರು.

ಇದನ್ನೂ ಓದಿ:ಬಾಗಲಕೋಟೆ : ಎ ಗ್ರೇಡ್ ರಾಷ್ಟ್ರದ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿ ಆಯೋಜನೆ

Last Updated :Jan 20, 2023, 11:06 AM IST

ABOUT THE AUTHOR

...view details