ಕರ್ನಾಟಕ

karnataka

ಯತ್ನಾಳ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ಸತೀಶ್ ಜಾರಕಿಹೊಳಿ

By

Published : Mar 26, 2023, 6:41 PM IST

ಯತ್ನಾಳ್​ ಮಾತನಾಡುತ್ತಾನೆ ಎಂಬ ಕಾರಣಕ್ಕೆ ನಾನು ಮಾತನಾಡುವುದಿಲ್ಲ ಎಂದು ಸತೀಶ್​ ಜಾರಕಿಹೊಳಿ ಹೇಳಿದರು.

KPCC Working President Satish Jarakiholi
ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ

ಯತ್ನಾಳ್​ ವಿರುದ್ದ ಸತೀಶ್​ ಜಾರಕಿಹೊಳಿ ಹೇಳಿಕೆ

ಬೆಳಗಾವಿ :ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಾರ್ಯ ವ್ಯಾಪ್ತಿ ವಿಜಯಪುರಕ್ಕೆ ಅಷ್ಟೇ. ನನ್ನ ಕಾರ್ಯವ್ಯಾಪ್ತಿ ವಿಸ್ತಾರವಾಗಿರುವುದರಿಂದ ಅವನು ಮಾತನಾಡುತ್ತಾನೆ. ಯತ್ನಾಳ್​ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ನಾನು ಮಾತನಾಡುವುದಕ್ಕೆ ಆಗುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಯತ್ನಾಳ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಮಾತನಾಡುವುದೇಒಂದು ಚಟ, ಆ ಚಟದಿಂದ ಮಾತನಾಡುತ್ತಾರೆ. ನಮಗೆ ನಮ್ಮ ಸಂಘಟನೆ, ಪಕ್ಷ ಇರುವುದರಿಂದ ಮಾತನಾಡುವುದಕ್ಕೆ ಸಮಯವಿಲ್ಲ. ಆದರೆ ಯತ್ನಾಳ್ ಮೀಡಿಯಾ ನೋಡಿದರೆ ಮಾತನಾಡುವುದಕ್ಕೆ ಕಾಲುಕೆದರಿ ಮಾತನಾಡುತ್ತಾನೆ. ನೀವು ಕೇಳುವವುದಕ್ಕಿಂತಲೂ ಮೊದಲೇ ಪ್ರತಿಕ್ರಿಯಿಸಿರುತ್ತಾನೆ. ಆದ್ರೆ ಪ್ರತಿಕ್ರಿಯೆ ನೀಡಲು ನನಗೆ ಸಮಯವಿಲ್ಲ ಎಂದು ಹೇಳಿದರು.

ಯತ್ನಾಳ್ ಮಾತನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ, ಏಕೆಂದರೇ ಸ್ವಪಕ್ಷದವರಾದ ಸಚಿವ ಮುರುಗೇಶ್ ನಿರಾಣಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿಯ ಹಲವು ನಾಯಕರನ್ನು ಆತ ಬೈಯುತ್ತಾನೆ. ಇನ್ನು ನಾವು ಯಾವ ಲೆಕ್ಕ? ಹೀಗಾಗಿ ಅವನು ಮಾತನಾಡಲಿ ಎಂದು ಯತ್ನಾಳ್​ಗೆ​, ಸತೀಶ್​ ಜಾರಕಿಹೊಳಿ ತಿರಗೇಟು ನೀಡಿದರು.

11ರೂ. ಪಟ್ಟಿ ಸೇರಿಸಿ ಜಾರಕಿಹೊಳಿಯನ್ನು ಸೋಲಿಸಿ ಯತ್ನಾಳ್ ಕರೆ ವಿಚಾರಕ್ಕೆ ಪ್ರತಿಕ್ರಿಯೆ :ಬಳಿಕ 11ರೂ. ಪಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸತೀಶ್​ ಜಾರಕಿಹೊಳಿ ಅವರು,ಕೆಲವರು ನಾನು ಹೇಳಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ನನ್ನ ವಿರುದ್ಧ ಷಡ್ಯಂತರ ಹೆಣೆಯುತ್ತಿದ್ದಾರೆ. ನಾನು ಒಂದು ಭಾಷಣದಲ್ಲಿ ನಮ್ಮ ಎದುರಾಳಿಗಳಿಗೆ 11 ರೂಪಾಯಿ ಪಟ್ಟಿ ಕೊಡುವ ಯೋಗ್ಯತೆ ಇಲ್ಲ ಎಂದು ಹೇಳಿಕೆ ನೀಡಿದ್ದೆ. ಆದರೆ ಅದನ್ನೇ ಇಟ್ಟುಕೊಂಡು ಲಿಂಗಾಯತರಿಗೆ ಎಂದು ಯತ್ನಾಳ್​ ಅವರು ಬಿಂಬಿಸುತ್ತಿದ್ದಾರೆ. ನಾನು ಎಲ್ಲೂ ಕೂಡ ಲಿಂಗಾಯತ ಪದ ಬಳಕೆ ಮಾಡಿಲ್ಲ. ಈ ಹೇಳಿಕೆಗೆ ಕುರಿತು ನನ್ನ ಕಡೆ ಸಾಕ್ಷಿ ಇದೆ, ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇನೆ. ಅಪಪ್ರಚಾರ ಜೊತೆ ಧರ್ಮ, ಜಾತಿ ಎತ್ತಿ ಕಟ್ಟುತ್ತಿದ್ದಾರೆ. ಅವರ ಹತ್ತಿರ ಅಷ್ಟೇ ರಾಜಕೀಯ ಅಸ್ತ್ರಗಳು ಇಲ್ಲಾ, ನಮ್ಮ ಹತ್ತಿರ ಕೂಡ ಇವೆ ಎಂದು ಹೇಳಿದರು.

ನಮಗೆ ಗೆಲ್ಲುವುದು ಮುಖ್ಯ :ಬೆಳಗಾವಿ ಜಿಲ್ಲೆಯಲ್ಲಿ ಒಂಬತ್ತು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಇನ್ನೂ 9 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಲ್ಲಿ ಐದು ಕ್ಷೇತ್ರಗಳ ಸಮಸ್ಯೆ ಇಲ್ಲ, ನಾಲ್ಕು ಕ್ಷೇತ್ರಗಳಲ್ಲಿ ಸ್ವಲ್ಪ ಗೊಂದಲವಿದೆ. ಹೊಂದಾಣಿಕೆ ಸಂಧಾನ ಮಾತುಕತೆ ಮುಖಾಂತರ ಎಲ್ಲವನ್ನೂ ಸರಿ ಪಡಿಸಲಾಗುವುದು. ಕೆಲವು ಕ್ಷೇತ್ರಗಳಲ್ಲಿ ಆಶ್ಚರ್ಯ ಪಡುವ ಅಭ್ಯರ್ಥಿಗಳು ಲಿಸ್ಟಲ್ಲಿ ಆಯ್ಕೆ ಆಗಬಹುದು. ನಮಗೆ ಗೆಲುವು ಒಂದೇ ಮುಖ್ಯ ಎಂದು ಸತೀಶ್​ ಜಾರಕಿಹೊಳಿ ತಿಳಿಸಿದರು. ಜೊತೆಗೆ ಮಾಜಿ ಸಂಸದ ರಮೇಶ್ ಕತ್ತಿ ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ಜಿಲ್ಲಾ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸತೀರ್ಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ರಾಗ ಸದಸ್ಯತ್ವ ರದ್ದು ಇದು ದೇಶದಲ್ಲಿ ದುರಂತ ಕಥೆ- ಸತೀಶ್​ :ಮೋದಿ ಸರ್ಕಾರ ಆಡಳಿತದಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಂಸದ ರಾಹುಲ್ ಗಾಂಧಿಯವರ ಸದಸ್ಯತ್ವವನ್ನು ರದ್ದುಗೊಳಿಸಿರುವುದು ಈ ದೇಶದಲ್ಲಿ ಅತ್ಯಂತ ದುರಂತ ಕಥೆ ಅಂತ ಹೇಳಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಯಮಕರಮಡಿ ಕ್ಷೇತ್ರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸತೀಶ್​ ಜಾರಕಿಹೊಳಿ, ಇದು ದೇಶದಲ್ಲೇ ದುರಂತ ಕಥೆ ಎಂದು ಹೇಳಬಹುದು. ಹಿಂದೆ ನಮ್ಮಲ್ಲೂ ಇಂತಾ ಪ್ರಕರಣಗಳು ನಡದಿವೆ. ಆದರೆ ರಾಹುಲ್ ಗಾಂಧಿ ಅವರ ಪ್ರಕರಣದಲ್ಲಿ ಲೋಕಸಭಾ ಸ್ಪೀಕರ್ ತುರ್ತು ನಿರ್ಣಯದಿಂದ ಅಮಾನತು ಮಾಡಿದ್ದಾರೆ. ಇದು ಮೋದಿ ಅವರ ಆಡಳಿತದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ರೀತಿ ಮಾಡಿರುವುದನ್ನು ತೋರಿಸುತ್ತಿದೆ. ಜನರು ಅವರಿಗೆ ತಕ್ಕ ಉತ್ತರ ನೀಡುತ್ತಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಹೇಳಿದರು.

ಮೋದಿ ಬಿಟ್ಟರೆ ರಾಜ್ಯ ಬಿಜೆಪಿ ನಾಯಕರಿಗೆ ಗತಿ ಇಲ್ಲ- ಸತೀಶ್​ ಜಾರಕಿಹೊಳಿ :ರಾಜ್ಯದಲ್ಲಿ 40% ಸರ್ಕಾರ ಇರುವುದರಿಂದ ಜನರು ಬೇಸತ್ತು ಹೋಗಿದ್ದು, ರಾಜ್ಯದ ಜನರು ರಾಜ್ಯದ ಬಿಜೆಪಿಯನ್ನು ತಿರಸ್ಕಾರ ಮಾಡಿದ್ದಾರೆ. ಮೋದಿ ಅವರನ್ನು ಬಿಟ್ಟರೆ ರಾಜ್ಯ ಬಿಜೆಪಿ ನಾಯಕರಿಗೆ ಯಾರಿಗೂ ಗತಿಯಿಲ್ಲ. ಅವರೇ ಭಾಷಣ ಮಾಡಿ ಇವರನ್ನು ಗೆಲ್ಲಿಸಬೇಕು. ಇದರಿಂದಾಗಿ ಪದೇ ಪದೇ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರು ಆಗಮಿಸುತ್ತಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಮೇಲೆ ಇವರು ಅವಲಂಬನೆ ಆಗಿದ್ದಾರೆ ಎಂದು ಬಿಜೆಪಿ ವಿರುದ್ಧ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.

ಎಐಸಿಸಿ ವತಿಯಿಂದ ರಾಜ್ಯ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಬಾರಿಗೆ 126 ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 18ರಲ್ಲಿ 9ಅಭ್ಯರ್ಥಿಗಳ ಹೆಸರು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಇನ್ನು 9 ಅಭ್ಯರ್ಥಿಗಳ ಹೆಸರನ್ನು ಎರಡೇ ಹಂತ ಹಾಗೂ ಮೂರನೇ ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣವಾಗುತ್ತದೆ ಎಂದು ತಿಳಿಸಿದರು.

ಈ ಅಭ್ಯರ್ಥಿಗಳ ಲಿಸ್ಟ್​ನಲ್ಲಿ ಹೊಸಬರಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಇನ್ನೂ ಹಲವು ಚರ್ಚೆ ಮತ್ತು ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಎರಡು ಮತ್ತು ಮೂರನೇ ಹಂತದಲ್ಲಿ ಆಯ್ಕೆ ಮಾಡಲಾಗುವುದು. ಈ ಆಯ್ಕೆಯಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಇವೆಲ್ಲಾ ಸಹಜವಾಗಿ ಇರುವಂತದ್ದೇ. ನಮ್ಮ ಪಕ್ಷದ ಹಿರಿಯರು ಅಸಮಾಧಾನ ಶಮನ ಮಾಡುವುದಕ್ಕೆ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು. ಇನ್ನು ಬಾರಿ ಕುತೂಹಲ ಕೆರಳಿಸಿದಂತಹ ಸಿದ್ದರಾಮಯ್ಯನವರ ಕ್ಷೇತ್ರ ಹುಡುಕಾಟಕ್ಕೆ ತೆರೆಬಿದ್ದಿದೆ. ಏಕೆಂದರೆ ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರದಿಂದ ಸ್ಪರ್ಧೆಗೆ ಎಐಸಿಸಿ ಯಿಂದ ಗ್ರೀನ್ ಸಿಗ್ನಲ್ ನೀಡಿದ್ದು, ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ ಎಂದು ಹೇಳಿದರು.

ಇದನ್ನು ಓದಿ :ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್​ ವಿರುದ್ಧ ಯತ್ನಾಳ್ ಆಕ್ರೋಶ

ABOUT THE AUTHOR

...view details