ಬೆಳಗಾವಿ: 2018ರಲ್ಲಿ ನಡೆದ ಚುನಾವಣೆಯಲ್ಲಿ ಸೋಲಿಸಲು ಸ್ವಪಕ್ಷದ ನಾಯಕರು ಮಾಡಿದ ತಂತ್ರಗಾರಿಕೆ ಬಗೆಗಿನ ಗುಟ್ಟನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಹಿರಂಗ ಪಡಿಸಿದ್ದಾರೆ. 'ನನ್ನನ್ನು ಸೋಲಿಸಲು ಕ್ಷೇತ್ರದಲ್ಲಿ ಸ್ವಪಕ್ಷದವರೇ ಹಣ ಹಂಚಿಕೆ ಮಾಡಿದ್ರು. ನಾವು ಅವರನ್ನ ಸೋಲಿಸಲು ಪ್ರಯತ್ನ ಮಾಡಿದ್ವಿ ಎಂದು ಸಹ ಹೇಳಿಕೊಂಡಿದ್ದಾರೆ' ಅಂತಾ ಸ್ಫೋಟಕ ಹೇಳಿಕೆ ನೀಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಆದ ತಪ್ಪು ಈಗ ಆಗಲ್ಲ. ನನ್ನನ್ನು ಕಟ್ಟಿಹಾಕಲು ಕ್ಷೇತ್ರದಲ್ಲಿ ಈಗಾಗಲೇ ಪೂರಕವಾಗಿ ಬಿಜೆಪಿಯ ನಾಯಕರು ಕೆಲಸ ಮಾಡುತ್ತಿದ್ದಾರೆ. ಯಮಕನಮರಡಿ ಕ್ಷೇತ್ರಕ್ಕೆ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಕ್ಷೇತ್ರದ ಮೇಲೆ ಹಿಡಿತವಿದೆ. ಜನರು ಯಾರ ಪರವಾಗಿ ಇದ್ದಾರೆ ಅಂತ ಗೊತ್ತಿದೆ. ರಾಜ್ಯದ 224 ಕ್ಷೇತ್ರದಲ್ಲಿ ವಿರೋಧ ಅಲೆ ಇರೋದು ಸಹಜ ಎಂದರು.
ಯಮಕನಮರಡಿ ಕ್ಷೇತ್ರದಲ್ಲಿ ಆಪ್ತ ಸಹಾಯಕರ ಹಾವಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಮುಖ ಕಾರ್ಯಕರ್ತರು, ಆಪ್ತ ಸಹಾಯಕರು ಇಲ್ಲದೇ ಕೆಲಸ ಮಾಡಲು ಸಾಧ್ಯವಿಲ್ಲ. ತಪ್ಪನ್ನು ಸರಿ ಮಾಡಲು ನಿರಂತರ ಪ್ರಯತ್ನ ನಡೆಯಲಿದೆ. ಆಪ್ತ ಸಹಾಯಕರು ಇಲ್ಲದೇ ಶಾಸಕರು ಕೆಲಸ ಮಾಡಲು ಕಷ್ಟವಾಗುತ್ತದೆ. ಬಿಜೆಪಿಯವರು ಎಂಆರ್ಪಿ ಫಿಕ್ಸ್ ಎಂದು ಕುಳಿತಿದ್ದಾರೆ. ಇದು ರಾಜಕೀಯ, ಆಗಿನ ಸಂದರ್ಭ ಬೇರೆ ಇತ್ತು. ಈಗ ಬೇರೆ ಇದೆ. ಕ್ಷೇತ್ರದಲ್ಲಿ ಪ್ರಚಾರ ನಡೆಸದೇ, ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಇದರ ಅರಿವು ಬಿಜೆಪಿ ನಾಯಕರಿಗೆ ಇಲ್ಲ ಎಂದರು.
ಚುನಾವಣಾ ಹಣ ಹಂಚಿಕೆ: ಕಿತ್ತೂರು ಕರ್ನಾಟಕದ ಭಾಗದಲ್ಲಿ 56 ವಿಧಾನಸಭೆ ಕ್ಷೇತ್ರಗಳು ಇವೆ. 2019ರ ಲೋಕಸಭೆ ಚುನಾವಣೆ ಫಲಿತಾಂಶ ಬಿಜೆಪಿ ನಾಯಕರು ನೋಡಬೇಕು. 56 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪ್ಲಸ್ ಇರೋದು ಚಿಕ್ಕೋಡಿ ಕ್ಷೇತ್ರ ಮಾತ್ರ. ಅತಿ ಕಡಿಮೆ ಮೈನಸ್ ಇರೋದು ಯಮಕನಮರಡಿ ಕ್ಷೇತ್ರವಾಗಿದೆ.ಇನ್ನೂ ಅನೇಕ ನಾಯಕರ ಕ್ಷೇತ್ರದಲ್ಲಿ 30-40ಸಾವಿರ ಮೈನಸ್ ಆಗಿದೆ.
ಹಾಗಾದ್ರೆ, ಅವರೆಲ್ಲ ಚುನಾವಣೆಯಲ್ಲಿ ಸೋಲಲಿದ್ದಾರೆಯೇ?. ಕಾಂಗ್ರೆಸ್ ಘಟಾನುಘಟಿ ನಾಯಕರ ಕ್ಷೇತ್ರದಲ್ಲಿ ಮೈನಸ್ ಇದೆ. ಕ್ಷೇತ್ರದ ಪ್ರಚಾರ ನಡೆಸದೇ ಚುನಾವಣೆ ಗೆಲ್ಲಬೇಕು ಎನ್ನುವ ಹಠ ಇತ್ತು. ಕಳೆದ ಚುನಾವಣೆಯಲ್ಲಿ ಪ್ರಚಾರ ನಡಸದೇ ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಹೀಗಾಗಿ, ನನ್ನ ಗೆಲುವಿನ ಅಂತರ ಕಡಿಮೆಯಾಗಿದೆ. ನಮ್ಮ ಬೆಂಬಲಿಗರು ಸಹ ಅತಿ ಆತ್ಮವಿಶ್ವಾಸದಿಂದ ಪ್ರಚಾರ ನಡೆಸಲಿಲ್ಲ.
ನಮ್ಮ ಪಕ್ಷದ ನಾಯಕರ ಹಣ ಸ್ವಲ್ಪ ವರ್ಕ್ ಮಾಡಿದೆ. ಬಿಜೆಪಿ ಮಾತ್ರವಲ್ಲದೇ, ನಮ್ಮ ಪಕ್ಷದವರೂ ಸಹ ಹಣ ಕಳುಹಿಸಿದ್ರು. ಇದರಿಂದ ನನ್ನ ಗೆಲುವಿನ ಅಂತರ ಕಡಿಮೆ ಆಗೋಕೆ ಕಾರಣವಾಯಿತು. ನಾವು ಆ ಕಡೆ ಹಣ ಕೊಟ್ಟಿದ್ದೆವು. ಅವರು ಇಲ್ಲಿ ಕೊಟ್ಟರು ಎಲ್ಲ ಸರಿಸಮ ಆಗಿದೆ. ಮುಂದಿನ ಚುನಾವಣೆಯಲ್ಲಿ ಅಂತಹ ತಪ್ಪು ಆಗಲ್ಲ. ಈ ಸಲ ಯಾವುದೇ ಹಣ ನಮ್ಮ ಕ್ಷೇತ್ರಕ್ಕೆ ಬರಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದರು.
ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್ಮೆಂಟ್ ನಡೆಯುತ್ತಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ ವಿಚಾರಕ್ಕೆ, ಮೊಟ್ಟೆ ಎಸೆದಿದ್ದು ಗೊತ್ತಿಲ್ಲ. ಪ್ರತಿಭಟನೆ ಮಾಡೋದನ್ನ ನೋಡಿದ್ದೇವೆ. ಈ ಬಗ್ಗೆ ಪೊಲೀಸರು ಕ್ರಮಕೈಗೊಳ್ಳಲು ನಮ್ಮ ಸಿಎಲ್ಪಿ ನಾಯಕರು ಅಗ್ರಹ ಮಾಡಿದ್ದಾರೆ. ಟೆನ್ಸ್ ಏರಿಯಾ ಇರೋದ್ರಿಂದ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಬೇಕಿತ್ತು. ಪೊಲೀಸರು ಏನು ಕ್ರಮ ವಹಿಸುತ್ತಾರೆ ಅದರ ಮೇಲೆ ಡಿಪೆಂಡ್ ಆಗಿರುತ್ತದೆ. ಈಗಾಗಲೇ ಮಂತ್ರಿಗಳು ಹೇಳಿದ್ದಾರಲ್ಲ ಮ್ಯಾನೇಜ್ಮೆಂಟ್ ಅಂತಾ. ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್ಮೆಂಟ್ ನಡೆಯುತ್ತಿದೆ ಎಂದರು.
ಇದನ್ನೂ ಓದಿ:ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿಗರಿಂದ ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ