ಕರ್ನಾಟಕ

karnataka

ಪ್ರತಾಪ್ ಸಿಂಹ ವಿಚಾರಣೆಗೊಳಪಡಿಸಿ, ಸಂಸದ ಸ್ಥಾನ ರದ್ದುಪಡಿಸಬೇಕು: ಹೆಚ್. ವಿಶ್ವನಾಥ್

By ETV Bharat Karnataka Team

Published : Dec 14, 2023, 5:36 PM IST

Vishwanath insist to interrogate Pratap Simha: ಸಂಸತ್​ನಲ್ಲಿ ಭದ್ರತಾ ಲೋಪ ಪ್ರಕರಣದ ಆರೋಪಿಗೆ ಸದನದೊಳಗೆ ಎಂಟ್ರಿ ಪಾಸ್​ ನೀಡಿದ್ದ ಸಂಸದ ಪ್ರತಾಪ್​ ಸಿಂಹ ಅವರನ್ನು ಸಂಸದ ಸ್ಥಾನದಿಂದ ಅಮಾನತುಗೊಳಿಸಬೇಕು ಎಂದ ವಿಧಾನಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್​ ಒತ್ತಾಯಿಸಿದ್ದಾರೆ.

Legislative Council member H Vishwanath
ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್​

ಬೆಳಗಾವಿ: ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ವಿಚಾರಣೆ ಒಳಪಡಿಸಬೇಕು. ಹಾಗೂ ಅವರ ಸಂಸದ ಸ್ಥಾನ ರದ್ದು ಮಾಡಬೇಕು ಎಂದು ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಪಾರ್ಲಿಮೆಂಟ್​ನಲ್ಲಿ ಭದ್ರತಾ ಲೋಪ‌ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಪಾರ್ಲಿಮೆಂಟ್​ನಲ್ಲಿ ಆಗಿರುವ ಭದ್ರತಾ ಲೋಪ ಭಾರಿ ದೊಡ್ಡ ವಿಚಾರ. ದೇಶದ ಸೆಕ್ಯುರಿಟಿಗೆ ಸಂಬಂಧಿಸಿದೆ. ಪಾರ್ಲಿಮೆಂಟ್ ಒಳಗೆ ಯಾರು ಹೋಗಬೇಕು, ಯಾರು ಹೋಗಬಾರದು ಎನ್ನುವುದಿರುತ್ತದೆ. ಪ್ರತಾಪ್ ಸಿಂಹ ಅವರು ಹಿರಿಯ ಸದಸ್ಯರು. ತಮ್ಮ ಪಕ್ಷದವನಿಗೆ ಯಾರಿಗೋ ಪಾಸ್ ನೀಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಪ್ರತಾಪ್ ಸಿಂಹ ಅವರನ್ನು ಸಂಸದ ಸ್ಥಾನದಿಂದ ಅಮಾನತು ಮಾಡಬೇಕು ಎ‌ಂದು ವಾಗ್ದಾಳಿ ನಡೆಸಿದರು.

ಮೀಟಿಂಗ್​ಗಾ ಅಥವಾ ಈಟೀಂಗ್ ಅಂತ ಗೊತ್ತಾಗಿಲ್ಲ:ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಹೌದು ನಾನು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಗೆ ಹೋಗಿದ್ದೆ. ಡಿಸಿಎಂ ಡಿ.ಕೆ. ಶಿವಕುಮಾರ್​ ಅವರು ನನ್ನ ಗೆಳೆಯ. ಊಟಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಪಾರ್ಟಿ ಮಿಟೀಂಗ್ ಬನ್ನಿ ಅಂತ ಅವರೇನು ಕರೆದಿಲ್ಲ. ನಾನು ಹೋದ ಮೇಲೆ MEETING ಅಥವಾ EATING ಅಂತ ಗೊತ್ತಾಗಿಲ್ಲ. ನಾನು ಹೋಗೋ ಹೊತ್ತಿಗೆ ಆರಂಭ ಆಗಿತ್ತು. ಅರ್ಧ ಗಂಟೆ ಕುಳಿತೆ. ಕಾಂಗ್ರೆಸ್​ ನಮ್ಮ ಹಳೇ ಮನೆ. ಸಿಎಂ, ಡಿಸಿಎಂ, ಮಂತ್ರಿಗಳ ಜೊತೆ ಕುಳಿತಿದ್ದೆ ಎಂದು ಸ್ಪಷ್ಟನೆ ನೀಡಿದರು.

ನಿನ್ನೆ ನಡೆದಿದ್ದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿಯ ಮಾಜಿ ಸಚಿವರಾದ ಹಾಗೂ ಹಾಲಿ ಶಾಸಕರು ಎಸ್​.ಟಿ.ಸೋಮಶೇಖರ್​ ಹಾಗೂ ಶಿವರಾಮ್​ ಹೆಬ್ಬಾರ್​ ಅವರ ಜೊತೆಗೆ ವಿಧಾನಪರಿಷತ್​ ಸದಸ್ಯ ಎಚ್​. ವಿಶ್ವನಾಥ್​ ಅವರು ಪಾಲ್ಗೊಂಡಿದ್ದರು. ಬಿಜೆಪಿ ಶಾಸಕರ ಈ ನಡೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಪ್ರತಾಪ್​ ಸಿಂಹ ಅವರಿಂದ ಪಾಸ್​ ಪಡೆದಿದ್ದ ಆರೋಪಿ: ನಿನ್ನೆ ಲೋಕಸಭಾ ಅಧಿವೇಶನದ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಇಬ್ಬರು ಯುವಕರು ಸದನದ ಒಳಗೆ ಜಿಗಿದು, ಸ್ಮೋಕ್​ ಕ್ರ್ಯಾಕರ್​ ಸ್ಪ್ರೇ ಮಾಡಿದ್ದರು. 2001ರ ಸಂಸತ್​ ಭವನದ ಮೇಲಿನ ದಾಳಿಗೆ 22 ವರ್ಷದ ತುಂಬಿದ ದಿನವೇ ಸಂಸತ್​ ಭವನದ ಒಳದೆ ಭಾರಿ ಭದ್ರತಾ ಲೋಪ ನಡೆದಿರುವುದು ದೇಶಾದ್ಯಂತ ಚರ್ಚೆಯಾಗಿತ್ತು. ಈ ಪ್ರಕರಣ ಸಂಬಂಧ ಈವರೆಗೆ ಐದು ಆರೋಪಿಗಳನ್ನು ಬಂಧಿಸಲಾಗಿದೆ. ಐವರಲ್ಲಿ ಒಬ್ಬ ಮನೋರಂಜನ್​ ಎನ್ನುವವರು ಮೈಸೂರು ಮೂಲದವನು. ಈತ ಮೈಸೂರು ಸಂಸದ ಪ್ರತಾಪ್​ ಸಿಂಹ ಅವರಿಂದ ಎಂಟ್ರಿ ಪಾಸ್​ ಪಡೆದು ಸದನದ ಒಳಗೆ ಪ್ರವೇಶಿದ್ದ. ಆ ಹಿನ್ನೆಲೆ ಕಾಂಗ್ರೆಸ್​ ಪ್ರತಾಪ್​ ಸಿಂಹ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಪ್ರತಾಪ್​ ಸಿಂಹ ಅವರನ್ನು ವಿಚಾರಣೆಗೊಳಪಡಿಸುವಂತೆ ಒತ್ತಾಯಿಸಿತ್ತು.

ಇದನ್ನೂ ಓದಿ:ಬೆಳಗಾವಿಯಲ್ಲಿ ಮದ್ಯಪ್ರಿಯರ ಹೋರಾಟ ಸಂಘದ ಪ್ರತಿಭಟನೆ... ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ABOUT THE AUTHOR

...view details