ಕರ್ನಾಟಕ

karnataka

ಬೆಳಗಾವಿ ಕಬ್ಬು ಬೆಳೆಗಾರರಿಗೆ ಅವಮಾನ ಮಾಡುತ್ತಿದ್ದೀರಿ, ನಿಮ್ಮನ್ನು ಕಬ್ಬಿನಿಂದ ಹೊಡೆದು ಹಾಕುತ್ತಾರೆ: ಸವದಿ

By ETV Bharat Karnataka Team

Published : Dec 12, 2023, 7:33 AM IST

Updated : Dec 12, 2023, 8:33 AM IST

Belagavi assembly proceedings :ಬೆಳಗಾವಿ ವಿಧಾನಸಭೆ ಕಲಾಪದಲ್ಲಿ ಕಬ್ಬು ಬೆಳೆಗಾರರ ಕುರಿತು ಕಾಂಗ್ರೆಸ್​​​ ಶಾಸಕ ಲಕ್ಷ್ಮಣ್‌ ಸವದಿ ಮಾತನಾಡುವ ವೇಳೆ ಅಡ್ಡಿಪಡಿಸಿದ ವಿಪಕ್ಷದ ವಿರುದ್ಧ ಲಕ್ಷ್ಮಣ್‌ ಸವದಿ ಹರಿಹಾಯ್ದರು.

ಲಕ್ಷ್ಮಣ್‌ ಸವದಿ
ಲಕ್ಷ್ಮಣ್‌ ಸವದಿ

ಬೆಳಗಾವಿ ವಿಧಾನಸಭೆ ಕಲಾಪ

ಬೆಳಗಾವಿ/ಬೆಂಗಳೂರು:ಶಿವಮೊಗ್ಗದವರು ಉತ್ತರ ಕರ್ನಾಟಕದ ವಿರೋಧಿಗಳು, ಬೆಳಗಾವಿಯ ಕಬ್ಬು ಬೆಳೆಗಾರರಿಗೆ ನೀವು ಅವಮಾನ ಮಾಡಿತ್ತಿದ್ದೀರಿ. ನೀವು ಹೊರಗೆ ಹೋದರೆ ನಿಮ್ಮನ್ನು ಕಬ್ಬಿನಿಂದಲೇ ಹೊಡೆದು ಹಾಕುತ್ತಾರೆ ಎಂದು ಬೆಳಗಾವಿ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್​​​ ಶಾಸಕ ಲಕ್ಷ್ಮಣ್‌ ಸವದಿ ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಸೋಮವಾರ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚೆ ಆರಂಭಿಸಿದಾಗ ಬಿಜೆಪಿ ಸದಸ್ಯರು ಅಡ್ಡಿಪಡಿಸಿದರು. ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಬಿಜೆಪಿ ಶಾಸಕರ ಪೈಕಿ ಶಿವಮೊಗ್ಗ ನಗರ ಕ್ಷೇತ್ರದ ಸದಸ್ಯ ಚನ್ನಬಸಪ್ಪ ವಿರುದ್ಧ ಲಕ್ಷ್ಮಣ್‌ ಸವದಿ ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗದವರು ಉತ್ತರ ಕರ್ನಾಟಕದ ವಿರೋಧಿಗಳು. ಬೆಳಗಾವಿ ಕಬ್ಬು ಬೆಳೆಗಾರರಿಗೆ ಅವಮಾನ ಮಾಡುತ್ತಿದ್ದೀರಿ. ನಿಮ್ಮನ್ನು ಕಬ್ಬಿನಿಂದಲೇ ಹೊಡೆದು ಹಾಕುತ್ತಾರೆ. ನಿಮಗೆ ಮಾನ-ಮಾರ್ಯದೆ ಇದೆಯಾ? ಎಂದು ಕೆಂಡಾಮಂಡಲವಾದರು.

ಮುಂದುವರೆದು, ಪ್ರತಿಪಕ್ಷ ನಾಯಕ ಆರ್‌. ಅಶೋಕ್​ ಅವರಿಗೆ ಕೈ ಮುಗಿದು ಮಾತನಾಡಲು ಸಹಕರಿಸಬೇಕು ಎಂದು ಕೋರಿದರು. ಆದರೂ ಬಿಜೆಪಿ ಶಾಸಕರು ಅಡ್ಡಿಪಡಿಸಿದಾಗ ಕೋಪಗೊಂಡರು. ಈ ವೇಳೆ ಬಿಜೆಪಿಯ ಚನ್ನಬಸಪ್ಪ ಅವರು ಮತ್ತಷ್ಟು ಕೆಣಕಿದರು. ಈ ವೇಳೆ ಮತ್ತಷ್ಟು ಕೋಪಗೊಂಡ ಲಕ್ಷ್ಮಣ ಸವದಿ, ‘ಶಿವಮೊಗ್ಗದ ಶಾಸಕರು ಹೆಂಗೆ ಕೂಗಾಡುತ್ತಾರೆ ನೋಡಿ. ಚಾವಿ (ಬೀಗ) ಕೊಟ್ಟು ಯಾರು ಕಳುಹಿಸಿದ್ದಾರೆ ಎಂಬುದು ಗೊತ್ತಿದೆ. ನಿಮ್ಮ ಜನ್ಮಕ್ಕೆ ನಾಚಿಗೆಯಾಗಬೇಕು. ನಿಮ್ಮನ್ನು ಕಬ್ಬಿನಿಂದಲೇ ರೈತರು ಹೊಡೆದುಹಾಕುತ್ತಾರೆ. ಶಿವಮೊಗ್ಗದವರು ಉತ್ತರ ಕರ್ನಾಟಕ ವಿರೋಧಿಗಳು ಎಂದು ಕಿಡಿಕಾರಿದರು.

ಸಭಾಧ್ಯಕ್ಷ ಯು ಟಿ ಖಾದರ್‌ ಸಮಾಧಾನ ಮಾಡಲು ಪ್ರಯತ್ನಿಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ. ಚನ್ನಬಸಪ್ಪ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದರು. ‘ಹುಚ್ಚುನಾಯಿ ಕಡಿದಿದೆಯಾ? ಎಂದು ಕೂಗಾಡಿದರು. ಇದೇ ವೇಳೆ ಕೆಲವು ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಮೋಸ ಮಾಡುತ್ತಿದ್ದು, ಅವರು ಸರ್ಕಾರವನ್ನು ವಂಚಿಸಬಹುದು. ಆದರೆ, ದೇವರನ್ನಲ್ಲ. ಅವರಿಗೆ ಪಾಶ್ವವಾರ್ಯು ಆಗಲಿದೆ ಎಂದು ವಾಗ್ದಾಳಿ ನಡೆಸಿದರು.

ಕಬ್ಬಿನ ಮಾಲೀಕರ ವಿರುದ್ಧ ಕ್ರಮ:ಸಕ್ಕರೆ ಕಾರ್ಖಾನೆಗಳಲ್ಲಿ ರೈತರ ಕಬ್ಬಿನ ತೂಕದಲ್ಲಿನ ಮೋಸ ತಡೆಗೆ ತಪ್ಪಿತಸ್ಥ ಕಾರ್ಖಾನೆಗಳ ಮಾಲೀಕರ ವಿರುದ್ಧ ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಸೋಮವಾರ ನಡೆದ ಕಲಾಪದಲ್ಲಿ ಸಕ್ಕರೆ ಕಾರ್ಖಾನೆಗಳಲ್ಲಿನ ಕಬ್ಬಿನ ತೂಕದಲ್ಲಿನ ಮೋಸ ವಿಷಯ ಕುರಿತ ನಡೆದ ಚರ್ಚೆಯ ಬಳಿಕ ಉತ್ತರಿಸಿದ ಅವರು, ಸಕ್ಕರೆ ಕಾರ್ಖಾನೆಗಳಲ್ಲಿನ ಕಬ್ಬಿನ ತೂಕದಲ್ಲಿನ ಮೋಸ ತಡೆಗೆ ಈಗಾಗಲೇ ಸಭೆಯನ್ನು ಮಾಡಲಾಗಿದೆ. ಕಾರ್ಖಾನೆಗಳಲ್ಲಿ ಡಿಜಿಟಲ್‌ ತೂಕದ ಯಂತ್ರಗಳನ್ನು ಅಳವಡಿಸಬೇಕಿದೆ. ಈ ಸಂಬಂಧ ಸುತ್ತೋಲೆಯನ್ನು ಹೊರಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 24 ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್‌ ತೂಕದ ಯಂತ್ರಗಳನ್ನು ಅಳವಡಿಸಿಕೊಂಡಿವೆ. ಪ್ರಸಕ್ತ ಸಾಲಿನ ಹಂಗಾಮಿನಲ್ಲಿ 76 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿವೆ ಎಂದರು.

ಮುಂದಿನ ವರ್ಷ ಇಲಾಖೆಯಿಂದಲೇ ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್‌ ತೂಕದಯಂತ್ರಗಳನ್ನು ಅಳವಡಿಸಲಾಗುವುದು. ಅಲ್ಲದೇ, ಸಕ್ಕರೆ ಸಂಸ್ಥೆಯ ಆಯುಕ್ತರ ಕಚೇರಿಯನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮಳೆ ಕೊರತೆ, ಬರಗಾಲದ ಪರಿಣಾಮ ಪ್ರಸಕ್ತ ಹಂಗಾಮಿನಲ್ಲಿ ಒಂದೂವರೆ ಲಕ್ಷ ಟನ್‌ ಕಬ್ಬು ನುರಿಸುವಿಕೆ ಪ್ರಮಾಣ ಕಡಿಮೆಯಾಗಿದೆ. 2 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ನೂತನ ಅಥಣಿ ಜಿಲ್ಲೆ ರಚನೆ ವಿಚಾರವಾಗಿ ಸದನದಲ್ಲಿ ಧ್ವನಿ ಎತ್ತುತ್ತೇನೆ: ಲಕ್ಷ್ಮಣ್ ಸವದಿ

Last Updated : Dec 12, 2023, 8:33 AM IST

ABOUT THE AUTHOR

...view details