ಕರ್ನಾಟಕ

karnataka

ಡಿಸಿ ಕಚೇರಿಯಲ್ಲಿ ಮೂವರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಯತ್ನ.. ಮಹಿಳಾ ದಿನಾಚರಣೆಯಂದು ಮನಕಲಕುವ ಘಟನೆ

By

Published : Mar 8, 2023, 6:17 PM IST

Updated : Mar 8, 2023, 7:06 PM IST

ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲೇ ಮೂವರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಯತ್ನ.

ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದು
ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದು

ಬೆಳಗಾವಿ: ವಿಶ್ವ ಮಹಿಳಾ ದಿನದಂದೇ ಮೂವರು ಹೆಣ್ಣು ಮಕ್ಕಳೊಂದಿಗೆ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿದ ಮನಕುಲಕುವ ಘಟನೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಗರದ ಅನಗೋಳದ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ್​​​ (40) ಆತ್ಮಹತ್ಯೆಗೆ ಯತ್ನಿಸಿದವರು ಎಂದು ತಿಳಿದುಬಂದಿದೆ. 14 ವರ್ಷ, 8 ಹಾಗೂ 3 ವರ್ಷ ವಯಸ್ಸಿನ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಮುಂದಾಗಿದ್ದರು. ಘಟನೆಯಿಂದ ನಾಲ್ವರು ಅಸ್ವಸ್ಥರಾಗಿದ್ದಾರೆ.

ಘಟನೆಯ ವಿವರ: ಕಳೆದ ಹಲವು ವರ್ಷಗಳಿಂದ ಪತಿಯ ಜೊತೆಗೆ ಬೆಳಗಾವಿಯ ಅನಗೋಳದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬ ಚಿಕ್ಕದೊಂದು ಸಲೂನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ‌ ಅದೃಶ್ಯಪ್ಪ ಹಂಪಣ್ಣನವರ್ ಕಳೆದ ಐದಾರು ವರ್ಷಗಳಿಂದ ಸಾಲಬಾಧೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಆದರೆ ಜೀವನ ನಡೆಸುವುದಕ್ಕೆ ಕಷ್ಟ ಆಗುತ್ತಿದ್ದಂತೆ ಕಳೆದ 15 ದಿನಗಳ ಹಿಂದೆಯೇ ಪತಿ ಅದೃಶ್ಯಪ್ಪ ಪತ್ನಿ ಹಾಗೂ ಮೂವರು ಹೆಣ್ಣು ‌ಮಕ್ಕಳನ್ನು ಬಿಟ್ಟು ‌ಹೋಗಿದ್ದಾರೆ. ಗಂಡ (ಯಜಮಾನ) ಕಾಣೆಯಾಗಿದ್ದರಿಂದ ಕುಟುಂಬ ತುತ್ತು ಅನ್ನಕ್ಕೂ ಗತಿಯಿಲ್ಲದೇ ಜಿಲ್ಲಾಧಿಕಾರಿ ಭೇಟಿಗಾಗಿ ಡಿಸಿ ಕಚೇರಿಗೆ ಮಕ್ಕಳ ಜೊತೆಗೆ ಮಹಿಳೆ ಸರಸ್ವತಿ ಆಗಮಿಸಿದ್ದರು. ಈ ವೇಳೆ ಕಚೇರಿಗೆ ಬರುತ್ತಿದ್ದಂತೆ ಮಕ್ಕಳೊಂದಿಗೆ ತಾಯಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

ತದ ನಂತರ ಕಚೇರಿಯಲ್ಲಿ ಮಕ್ಕಳು ವಾಂತಿ ಮತ್ತು ಸಂಕಷ್ಟ ಪಡುತ್ತಿದ್ದಂತೆ ಕಚೇರಿಯಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದು ಕೇಳಿದಾಗ ಹಿರಿಯ ಮಗಳು ತನ್ನ ತಾಯಿ ಕುಡಿಯಲು ಕೊಟ್ಟ ದ್ರವ ಪದಾರ್ಥದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾಳೆ. ಆಗ ಕಚೇರಿ ಸಿಬ್ಬಂದಿ ತಕ್ಷಣವೇ ತಾಯಿ ಹಾಗೂ ಮಕ್ಕಳನ್ನು ನಗರದ ಸಮುದಾಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಎರಡು ಶವಗಳು ಪತ್ತೆ : ಇನ್ನೊಂದೆಡೆ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಎರಡು ಶವಗಳು ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ನಿಡಗುಂದಿ ನಿವಾಸಿಯಾದ ಯಲ್ಲಪ್ಪ ಗುಡದಪ್ಪ ಗೋಳ(30), ರಾಜಾಸಾಬ ಕಲಾಲ್(35) ಅವರ ಶವ ಪತ್ತೆಯಾಗಿದೆ. ಕುಡಿದ ಮತ್ತಿನಲ್ಲಿ ಮೂರು ದಿನಗಳ ಹಿಂದೆ ಕಾಲುವೆಗೆ ಬಿದ್ದಿದ್ದ ಯಲ್ಲಪ್ಪ ಹಾಗೂ ನಿನ್ನೆ ಬಟ್ಟೆ ತೊಳೆಯಲು ಹೋಗಿ ಕಾಲುವೆಯಲ್ಲಿ ಬಿದ್ದಿದ್ದ ರಾಜಾಸಾಬ್ ಮೃತದೇಹ ಇಂದು ಪತ್ತೆಯಾಗಿದೆ. ಅಣತಿ ದೂರದಲ್ಲಿ ಇಬ್ಬರ ಶವಗಳು ಇಂದು ಪತ್ತೆಯಾಗಿವೆ. ನಿಡಗುಂದಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ ಎಂಬುದು ತಿಳಿದುಬಂದಿದೆ.

ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ : ಇದು ವಿಜಯಪುರದ ಘಟನೆ. ಆದರೆ, ದಾವಣಗೆರೆಯಲ್ಲಿ ಇನ್ನೊಂದು ಭಯಾನಕ ಘಟನೆ ನಡೆದಿದೆ. ವಸತಿ ನಿಲಯದಲ್ಲಿ ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ನಡೆದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಮಾತ್ರ ತಿಳಿದು ಬಂದಿಲ್ಲ. ವರ್ಷಿತಾ(18) ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ. ಜಿಲ್ಲೆಯ ಹರಿಹರ ನಗರದ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ವರ್ಷಿತಾ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೋಷಕರನ್ನು ದಿಗ್ಭ್ರಮೆಗೊಳಿಸಿದೆ.

ಮೃತ ಬಾಲಕಿ ವರ್ಷಿತಾ ಮೂಲತ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಬಸ್ಸಾಪುರ ಗ್ರಾಮದ ನಿವಾಸಿಯಾಗಿದ್ದಾರೆ. ಹರಿಹರದಲ್ಲಿ ವ್ಯಾಸಂಗ ಮಾಡ್ತಿದ್ದಳು. ಇನ್ನು ಮೃತ ವರ್ಷಿತಾ ಪೋಷಕರು ಆತ್ಮಹತ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹಾಸ್ಟೆಲ್ ವಾರ್ಡನ್, ಸಿಬ್ಬಂದಿ ವರ್ಗ ವಿದ್ಯಾರ್ಥಿಯ ಆತ್ಮಹತ್ಯೆ ಕಾರಣರಾಗಿದ್ದಾರೆ ಎಂದು ಅವರು ಆರೋಪಿಸಿದರು.

ಮೃತ ವರ್ಷಿತಾಳಿಗೆ ನ್ಯಾಯ ಒದಗಿಸುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ. ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಪೋಷಕರು ಒತ್ತಾಯಿಸಿದರು. ಈ ಕುರಿತು ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ವಿಜಯಪುರ: ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಎರಡು ಶವಗಳು ಪತ್ತೆ..!

Last Updated : Mar 8, 2023, 7:06 PM IST

ABOUT THE AUTHOR

...view details