ಕರ್ನಾಟಕ

karnataka

ಬೆಳಗಾವಿಯಲ್ಲಿ ಮತದಾರರ ಹೆದರಿಸುವ ಯತ್ನ ನಡೆಯುತ್ತಿದೆ: ಡಿ.ಕೆ.ಶಿವಕುಮಾರ್

By

Published : Nov 29, 2021, 7:25 PM IST

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಪ್ರಚಾರ ಬಿರುಸು ಪಡೆದಿದೆ. ಈ ನಡುವೆ ಜಿಲ್ಲೆಯ ನಾಯಕರ ಭೇಟಿ ಮಾಡಿ ಸಭೆ ನಡೆಸಿರುವ ಡಿ.ಕೆ.ಶಿವಕುಮಾರ್ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಜೊತೆಗೆ ಬಿಜೆಪಿ ಮಣಿಸಲು ಪ್ರತಿತಂತ್ರ ಹೆಣೆದಿದ್ದಾರೆ.

DK Shivakumar
ಡಿ.ಕೆ ಶಿವಕುಮಾರ್

ಬೆಳಗಾವಿ: ಕಾಂಗ್ರೆಸ್ ಸೋಲಿಸುವುದೇ ನನ್ನ ಗುರಿ ಎಂದು ಜಿಲ್ಲೆಯಾದ್ಯಂತ ಸಂಚರಿಸಿ ಬಿರುಸಿನ ಮತಯಾಚನೆ ಮಾಡುತ್ತಿರುವ ರಮೇಶ್ ಜಾರಕಿಹೊಳಿ‌ ತಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿತಂತ್ರ ಹೆಣೆದಿದ್ದಾರೆ.

ಬೆಳಗಾವಿ ಪರಿಷತ್ ಅಖಾಡಕ್ಕೆ ಧುಮುಕಿರುವ ಡಿಕೆಶಿ, ಜಿಲ್ಲೆಯ ಕಾಂಗ್ರೆಸ್ ನಾಯಕರ ಜೊತೆಗೆ ಸುದೀರ್ಘ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮತದಾರರ‌ನ್ನು ಹೆದರಿಸುವ ಯತ್ನ ನಡೆಯುತ್ತಿದೆ. ಮತದಾರರ ಚೀಟಿ ಪಡೆದುಕೊಂಡು ಬೇರೆಯವರು ಮತ ಹಾಕುವುದು ನಡೆದುಕೊಂಡು ಬಂದಿದೆ. ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್-ಬಿಜೆಪಿ ಒಂದೇ ಸ್ಥಾನಕ್ಕೆ ಸ್ಪರ್ಧಿಸಿದೆ. ಆದರೆ ಪಕ್ಷೇತರ ಅಭ್ಯರ್ಥಿ ಪರವಾಗಿ ಆಡಳಿತ ಪಕ್ಷದ ಇಬ್ಬರು ಶಾಸಕರು ಚುನಾವಣೆ ಮಾಡುತ್ತಿದ್ದಾರೆ. ಇದು ನಮಗೂ ಗೊತ್ತಿದೆ, ನಿಮಗೂ ಗೊತ್ತಿದೆ, ಬಿಜೆಪಿಯವರಿಗೂ ಗೊತ್ತಿದೆ ಎಂದರು.

'ಬಿಜೆಪಿ ನಾಯಕರ ಭೇಟಿಗೆ ಕಡಿವಾಣ ಹಾಕಿ'

ಚುನಾವಣೆ ಸಮಯದಲ್ಲಿ ನಮ್ಮ ನಾಯಕರು ಬಿಜೆಪಿ ನಾಯಕರ ಭೇಟಿಗೆ ಅವಕಾಶ ನೀಡಬೇಡಿ. ನಿಮ್ಮ ಭೇಟಿಗೆ ಅವರೇಕೆ ಬರುತ್ತಾರೆ.? ಅದಕ್ಕೆಲ್ಲ ಆಸ್ಪದ ನೀಡಬೇಡಿ. ಈಗಾಗಲೇ ಅರಭಾವಿ ಕ್ಷೇತ್ರದಲ್ಲಿ 10 ಸಾವಿರ ರೂ. ಮುಂಗಡ ಹಣ ಕೊಟ್ಟಿದ್ದಾರೆಂಬ ಮಾಹಿತಿ ಇದೆ. ಮೂರ್ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಚೀಟಿ ಪಡೆದು ಇಂಡಿಪೆಂಡೆಂಟ್ ಕ್ಯಾಂಡಿಡೇಟ್‌ಗೆ ನಾವೇ ಮತ ಚಲಾಯಿಸುತ್ತೇವೆ ಅಂತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಭೆ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌, ಚುನಾವಣೆ ವೀಕ್ಷಕರಾದ ಹ್ಯಾರಿಸ್, ಐವನ್ ಡಿಸೋಜ, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ, ಮಾಜಿ ಸಚಿವ ಎಂ.ಬಿ ಪಾಟೀಲ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಹೆಬ್ಬಾಳ್ಕರ್ ಗೆ ಥೂ.. ಥೂ.. ಎಂದ ರಮೇಶ್ ಜಾರಕಿಹೊಳಿ‌ ವರ್ತನೆಗೆ ಡಿಕೆಶಿ ಏನಂದ್ರು?

ABOUT THE AUTHOR

...view details