ಕರ್ನಾಟಕ

karnataka

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ.. ನಿಲುವಳಿ ಸೂಚನೆ ನೀಡಲು ಕಾಂಗ್ರೆಸ್ ತೀರ್ಮಾನ

By

Published : Dec 20, 2022, 2:39 PM IST

ಕರ್ನಾಟಕ ‌ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ನೀಡಲು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ತೀರ್ಮಾನಿಸಿದ್ದಾರೆ.

Congress decides to issue resolution notice
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್

ಬೆಳಗಾವಿ:ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅವರು ಕರ್ನಾಟಕ-‌ಮಹಾರಾಷ್ಟ್ರ ಗಡಿ ವಿವಾದ ಕುರಿತು 59ನೇ ನಿಯಮದ ಪ್ರಕಾರ ನಿಲುವಳಿ ಸೂಚನೆ ನೀಡಲು ತೀರ್ಮಾನಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ 59ನೇ ನಿಯಮದ ಅಡಿ ಚರ್ಚೆಗೆ ಅವಕಾಶ ಕೋರಿ ಸಭಾಪತಿಗೆ ಈ ಮನವಿ ಮಾಡಲಿದ್ದಾರೆ.

ನಿಲುವಳಿ ಸೂಚನೆ ನೀಡಲು ಕಾಂಗ್ರೆಸ್ ತೀರ್ಮಾನ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಗಳು ದಶಕಗಳಿಂದಲೂ ಕರ್ನಾಟಕ ಮತ್ತು ಕನ್ನಡಿಗರನ್ನು ಪೀಡಿಸುತ್ತಲೇ ಬಂದಿವೆ. ಕರ್ನಾಟಕದ ಏಕೀಕರಣ ತರುವಾಯ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಮಹಾಜನ್ ವರದಿ ಹೇಳಿದೆ. ಹೀಗಿದ್ದರೂ ವರದಿಯನ್ನು ಒಪ್ಪಿಕೊಳ್ಳದ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಮೇಲೆ ಸಂಘರ್ಷದ ಹಾದಿಯಲ್ಲೇ ಬಂದಿದೆ.

ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣದ ನಂತರ ಪ್ರತಿ ಅಧಿವೇಶನ ಸಂದರ್ಭದಲ್ಲಿ ಮಹಾ ಮೇಳಾವ ನಡೆಸುವ ಮೂಲಕ ಕನ್ನಡಿಗರ ಶಾಂತಿಯನ್ನು ಕೆದಕುವ ಪ್ರಯತ್ನ ನಡೆಸಲಾಗುತ್ತಿದೆ. ಅವಿರತವಾಗಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ:21 ಕಾಂಗ್ರೆಸ್​ ಮುಖಂಡರ ಮೇಲೆ ಇಡಿ ದಾಳಿಗೆ ಸಿದ್ಧತೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ

1956ರಲ್ಲಿ ಭಾಷಾವಾರು ರಾಜ್ಯಗಳ ವಿಂಗಡಣೆಯಾದ ಸಂದರ್ಭದಲ್ಲಿ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರಿಸಲಾಗಿತ್ತು. ಆದಾಗ್ಯೂ ಬೂದಿ ಮುಚ್ಚಿದ ಕೆಂಡದಂತೆ ರಾಜ್ಯಗಳ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸುತ್ತ, ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್​​ಗಳಿಗೆ ಮಸಿ ಬಳಿದ ಪ್ರಕರಣವೂ ನಡೆದಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲೂ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಬಿಗುವಿನ ವಾತಾವರಣ ಮನೆ ಮಾಡಿದೆ ಎಂದಿದ್ದಾರೆ.

ರಾಜ್ಯದ ನೆಲ, ಜಲವನ್ನು ರಕ್ಷಿಸತಕ್ಕಂಥದ್ದು ಯಾವುದೇ ಸರ್ಕಾರದ ಆದ ಕರ್ತವ್ಯವಾಗಿದೆ. ಪ್ರಸಕ್ತ ಸರ್ಕಾರ ಗಡಿ ವಿವಾದವನ್ನು ಶಾಶ್ವತವಾಗಿ ಪರಿಹರಿಸುವಲ್ಲಿ ವಿಫಲವಾಗಿರುತ್ತದೆ. ಈ ವಿಷಯವು ಸಾರ್ವಜನಿಕವಾಗಿ ಮಹತ್ವವಾಗಿರುವುದರಿಂದ ದಿನಾಂಕ ಇಂದು ಸದನದಲ್ಲಿ ಪ್ರಸ್ತಾಪಿಸಲು ನಿಯಮ 59ರ ಕೆಳಗೆ ನಿಲುವಳಿ ಸೂಚನೆಯನ್ನು ನೀಡುತ್ತಿದ್ದೇವೆ ಎಂದು ಪತ್ರದಲ್ಲಿ ಬಿ ಕೆ ಹರಿಪ್ರಸಾದ್ ವಿವರಿಸಿದ್ದಾರೆ.

ABOUT THE AUTHOR

...view details