ಕರ್ನಾಟಕ

karnataka

ಬೆಳಗಾವಿಯಲ್ಲಿ ವ್ಯಕ್ತಿಯ ರುಂಡ ಕತ್ತರಿಸಿದ ಪ್ರಕರಣ: ಕೊಟ್ಟ ಹಣ ವಾಪಸ್ ಕೊಡದಿದ್ದಕ್ಕೆ ಸ್ನೇಹಿತನಿಂದ ಕೊಲೆ

By

Published : Aug 27, 2022, 11:04 PM IST

ಕೊಲೆಯಾದ ಗದಗಯ್ಯ ಹಿರೇಮಠ ತನ್ನ ಸ್ನೇಹಿತನಾದ ವಿಠ್ಠಲ ಸಾಂಬ್ರೇಕರ್ ಎಂಬಾತನಿಂದ ಎರಡು ಲಕ್ಷ ಹಣ ಸಾಲ ಪಡೆದಿದ್ದರು. ಈ ಹಣ ಪಾಪಸ್​ ಕೊಡದ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಬಯಲಾಗಿದೆ.

belagavi-murder-case-accused-arrested-by-police
ಬೆಳಗಾವಿಯಲ್ಲಿ ವ್ಯಕ್ತಿಯ ರುಂಡ ಕಡಿದ ಪ್ರಕರಣ: ಕೊಟ್ಟ ಹಣ ವಾಪಸ್ ಕೊಡದಿದ್ದಕ್ಕೆ ಸ್ನೇಹಿತನಿಂದ ಕೊಲೆ

ಬೆಳಗಾವಿ: ತಾಲೂಕಿನ ಹಲಗಾ ಬಳಿ ನಡೆದ ಬೈಕ್ ಮೇಲೆ ಹೋಗುತ್ತಿದ್ದ ವ್ಯಕ್ತಿಯ ರುಂಡ ಕಡಿದು ಭೀಕರ ಹತ್ಯೆ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊಟ್ಟ ಸಾಲ ಮರಳಿ ಕೊಡಲಿಲ್ಲವೆಂಬ ಕಾರಣಕ್ಕೆ ಆಪ್ತ ಸ್ನೇಹಿತನೇ ಈ ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗದಗಯ್ಯ ಹಿರೇಮಠ (40) ಎಂಬುರನ್ನು ಶುಕ್ರವಾರ ಭೀಕರ ಹತ್ಯೆ ಮಾಡಲಾಗಿತ್ತು. ಮೂಲತಃ ಧಾರವಾಡ ತಾಲೂಕಿನ‌ ಮುಗದ ಗ್ರಾಮದ ನಿವಾಸಿಯಾದ ಗದಗಯ್ಯ ಹಿರೇಮಠ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಬಂದು ನೆಲೆಸಿದ್ದರು. ಇದೇ ಕೊಂಡಸಕೊಪ್ಪ ಗ್ರಾಮದ ನಿವಾಸಿ ವಿಠ್ಠಲ ಸಾಂಬ್ರೇಕರ್ ಎಂಬಾತನೇ ಕೊಲೆ ಆರೋಪಿ.

ಏನಿದು ಹಿನ್ನೆಲೆ?:ಕೊಲೆಯಾದವ ಗದಗಯ್ಯ ಹಿರೇಮಠ ಕಳೆದ 9 ವರ್ಷಗಳ ಹಿಂದೆ ಧಾರವಾಡ ಬಿಟ್ಟು ಕೊಂಡಸಕೊಪ್ಪ ಗ್ರಾಮದಲ್ಲಿ ವಾಸವಾಗಿದ್ದರು. ಆಸ್ತಿಯೂ ಇರಲಿಲ್ಲ. ಕೆಲಸಕ್ಕೂ ಹೋಗದ ಗದಗಯ್ಯ ಇದೇ ಊರಲ್ಲಿ ಮನೆಯೊಂದನ್ನು ತೆಗೆದುಕೊಂಡು ಗ್ರಾಮದಲ್ಲಿ ಬಸವೇಶ್ವರ ಮಠ ಅಂತಾ ಮಾಡಿಕೊಂಡು ಬಂದ ಭಕ್ತರಿಗೆ ಜ್ಯೋತಿಷ್ಯ ಹೇಳಿಕೊಂಡು ಬಂದ ಹಣದಿಂದ ಜೀವನ‌ ನಡೆಸುತ್ತಿದ್ದರು.

ಆರೋಪಿ ವಿಠ್ಠಲ ಸಾಂಬ್ರೇಕರ್ ಗದಗಯ್ಯ ಅವರಿಗೆ ಪರಿಚಯ ಆಗಿ ಸ್ನೇಹ ಕೂಡ ಬೆಳೆದಿರುತ್ತದೆ. ಕಷ್ಟಸುಖ ಅಂತಾ ಬಂದರೆ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಜೊತೆಗೆ ಹಣಕಾಸಿನ ವ್ಯವಹಾರ ಕೂಡ ನಡೆಸುತ್ತಿದ್ದರು. ಹೀಗೆ ವಿಠ್ಠಲ ಕಡೆಯಿಂದ ಎರಡು ಲಕ್ಷ ಹಣವನ್ನು ಸಾಲವಾಗಿ ಗದಗಯ್ಯ ಪಡೆದಿದ್ದರು ಎನ್ನಲಾಗುತ್ತಿದೆ.

ಆದರೆ, ಈ ಹಣವನ್ನು ಮರಳಿಸುವ ಕುರಿತು ವಿಠ್ಠಲ ಹಲವು ಬಾರಿ ಕೇಳಿದರೂ ಗದಗಯ್ಯ ಸ್ಪಂದಿಸಿರಲಿಲ್ಲ. ಕೆಲ ದಿನಗಳ ಹಿಂದೆ ಐವತ್ತು ಸಾವಿರ ಕೊಟ್ಟು ಹಣ ಕೊಡಲು ಆಗಲ್ಲಾ ಅನ್ನೋ ಭಾವನೆಯಂತೆ ಗದಗಯ್ಯ ಮಾತನಾಡಿದ್ದರು. ಹೀಗಾಗಿಯೇ ಅಂದಿನಿಂದ ಹಣ ಕೊಟ್ಟಿದ್ದ ವಿಠ್ಠಲ ಆಕ್ರೋಶಗೊಂಡು ಗದಗಯ್ಯನನ್ನು ಮಟನ್ ಕಟ್ ಮಾಡುವ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರವೀಂದ್ರ ಗಡಾದಿ ಮತ್ತು ಹಿರೇಬಾಗೇವಾಡಿ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯ ರುಂಡ ಕಡಿದು ಕೊಲೆ

ABOUT THE AUTHOR

...view details