ಕರ್ನಾಟಕ

karnataka

ಬೊಮ್ಮಾಯಿಯವರೇ ಬಿಎಸ್‌ವೈ ಜೊತೆ ತಿರುಗಾಡಿದ್ರೆ ನೀವೂ ಲಾಗ ಹೊಡಿಯುತ್ತೀರಿ: ಯತ್ನಾಳ್​

By

Published : Oct 8, 2022, 7:25 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಇಲ್ಲವಾದ್ರೆ, ನೀವು ಪರ್ಮನೆಂಟ್ ಆಗಿ ಮಾಜಿ ಸಿಎಂ ಆಗುತ್ತೀರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.

yatnal
ಬಸನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ: ಬೊಮ್ಮಾಯಿಯವರೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ. ಇಲ್ಲವಾದ್ರೆ ನೀವು ಪರ್ಮನೆಂಟ್ ಆಗಿ ಮಾಜಿ ಮುಖ್ಯಮಂತ್ರಿ ಆಗ್ತೀರಿ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದರು.

ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಪಂಚಮಸಾಲಿ ಲಿಂಗಾಯತ ‌ಸಮುದಾಯಕ್ಕೆ 2ಎ ಮೀಸಲಾತಿ ಸಂಬಂಧ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದರು. ಬೊಮ್ಮಾಯಿಯವರೇ ಬಿಎಸ್‌ವೈ ಜೊತೆ ತಿರುಗಾಡಿದ್ರೆ ನೀವು ಲಾಗ ಹೊಡೆಯುತ್ತೀರಿ. ಮೊನ್ನೆ ಅಧಿವೇಶನದಲ್ಲಿ ನಾನು ಪಂಚಮಸಾಲಿ ವಿರೋಧಿ ಅಲ್ಲಾ ಅಂತ ಯಡಿಯೂರಪ್ಪ ಭಾಷಣ ಮಾಡಿದ್ರು. ಹಾಗಾದ್ರೆ, ಸಿಎಂ ಆದ ವೇಳೆ ಪಂಚಮಸಾಲಿ ಸಮುದಾಯಕ್ಕೆ ಏಕೆ ಮೀಸಲಾತಿ ನೀಡಲಿಲ್ಲ. ಮೀಸಲಾತಿಗಾಗಿ ಸೂಚಿಸಿದ್ದೇನೆ ಅಂದ್ರು, ಸಿಎಂ ಆಗಿದ್ದವರು ಸೂಚಿಸುತ್ತಾರಾ. ಬೊಮ್ಮಾಯಿಯವರೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಇಲ್ಲವಾದ್ರೆ ನೀವು ಪರ್ಮನೆಂಟ್ ಆಗಿ ಮಾಜಿ ಸಿಎಂ ಆಗುತ್ತೀರಿ ಎಂದು ಎಚ್ಚರಿಕೆ ರವಾನಿಸಿದರು.

ಇದನ್ನೂ ಓದಿ:ಮುಂದೆ ಬಂದ್ರೆ ಹಾಯಲ್ಲ, ಹಿಂದೆ ಬಂದ್ರೆ ಒದೆಯಲ್ಲ.. ನಮ್ಮನ್ನು ಹಗುರವಾಗಿ ತಿಳಿಯಬೇಡಿ ಎಂದ ಲಕ್ಷ್ಮೀ ಹೆಬ್ಬಾಳ್ಕರ್

'ಯಡಿಯೂರಪ್ಪ, ಬೊಮ್ಮಾಯಿ ತಿರುಪತಿಯಲ್ಲಿ ಏನು ಮಾತನಾಡಿದ್ದಾರೆ ಅನ್ನೋದು ನನಗೆ ಗೊತ್ತು. ಮೂರು ಪ್ರಮುಖ ಅಂಶಗಳ ಕುರಿತು ಮಾತನಾಡಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬಾರದು. ನನ್ನ ಮಗನನ್ನು ಮಂತ್ರಿ ಮಾಡಬೇಕು. ಯತ್ನಾಳ್ ಮಂತ್ರಿ ಮಾಡಬೇಡಿ ಅಂದಿದ್ದಾರೆ. ನಮ್ಮನ್ನೆಲ್ಲರೂ ಬಳಸಿಕೊಂಡು ಶೇಕಡಾ 2ರಷ್ಟು ಇರುವವವರು ಸಿಎಂ ಆಗಿದ್ದಾರೆ. ನನಗೂ ಸಿಎಂ ಆಗಿ ಒಳ್ಳೆಯ ಆಡಳಿತ ನೀಡುವ ತಾಕತ್ತು ಇದೆ. ನಮ್ಮವರ ಮುಂದೆ ಕೈಕಟ್ಟಿ ನಿಂತು ಮಂತ್ರಿ ಸ್ಥಾನ ಕೇಳುವ ಸ್ಥಿತಿ ಬಂತು. ಕೆಲ ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ನನ್ನ ಜೊತೆಗೆ ಕ್ಲೋಸ್ ಡೋರ್ ಮೀಟಿಂಗ್ ಮಾಡಿದ್ರು. ಬಸನಗೌಡ ಅವರೇ ನೀವು ಸ್ವಲ್ಪ ಶಾಂತವಾಗಿರಿ, ನಿಮ್ಮನ್ನು ಮಂತ್ರಿ ಮಾಡ್ತಿನಿ ಅಂದಿದ್ದಾರೆ. ನನಗೇನೂ ಮಂತ್ರಿಸ್ಥಾನ ಕೊಡಬೇಡಿ, ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಿ ಎಂದಿದ್ದೇನೆ. ಚುನಾವಣೆಗೆ 6ತಿಂಗಳು ಬಾಕಿ ಇದೆ. ಮಂತ್ರಿ ಆಗಲು ನಾನೇನು ಹುಚ್ಚ ಇದ್ದೇನಾ?' ಎಂದು ಪ್ರಶ್ನಿಸಿದರು.

2ಎ ಮೀಸಲಾತಿ ಸಂಬಂಧ ಹಮ್ಮಿಕೊಂಡ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್​

ಇದನ್ನೂ ಓದಿ:2ಎ ಮೀಸಲಾತಿ ನೀಡಿದ್ರೆ ಮಠದಲ್ಲಿ ಸಿಎಂ ಫೋಟೋ ಹಾಕುತ್ತೇವೆ: ಬಸವ ಜಯಮೃತ್ಯುಂಜಯ ಶ್ರೀ

ಬಿಎಸ್‌ವೈ ಜೊತೆಗೆ ಸಿಎಂ ರಾಜ್ಯದ 50 ಕ್ಷೇತ್ರದಲ್ಲಿ ಜೋಡಿ ಪ್ರವಾಸ ಮಾಡಲಿದ್ದಾರಂತೆ. ಇಬ್ಬರ ಪ್ರವಾಸದಿಂದ ಏನೂ ಪ್ರಯೋಜನ ಆಗುವುದಿಲ್ಲ. ಸಿಎಂ ಬೊಮ್ಮಾಯಿ ಅವರು ಬಿಎಸ್​ವೈ ಜೊತೆ ಪ್ರವಾಸ ಮಾಡಿದ್ರೆ ಲಾಗ ಹೊಡೆಯುತ್ತಾರೆ. ರಾಜ್ಯದ ಎಲ್ಲ ಕಡೆಯೂ ಲಿಂಗಾಯತ ಪಂಚಮಸಾಲಿ ಸಮಾಜದ ಬಂಧುಗಳಿದ್ದಾರೆ. ಮೀಸಲಾತಿ ಕೊಡದಿದ್ರೆ ಅವರು ಪ್ರವಾಸ ಮಾಡಿದ ಕಡೆಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿ ಎಸ್‌ ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:2ಎ ಮೀಸಲಾತಿಗೆ ಅಂತಿಮ ಗಡುವು ನೀಡಿದ ಪಂಚಮಸಾಲಿ ಕೂಡಲಸಂಗಮ ಶ್ರೀ

ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಪಂಚಮಸಾಲಿ ಸಮಾಜದವರು ಎಂದು ರಾಜ್ಯಸಭೆಗೆ ಹೋಗಿದ್ದಾರೆ. ನನ್ನನ್ನು ಸೋಲಿಸಲು ನಮ್ಮ ಪಕ್ಷದವರೂ ಸೇರಿ ಹಲವರು ಈಗಲೇ ಹಣ ವಿತರಣೆ ಮಾಡ್ತಿದ್ದಾರೆ. ನಮ್ಮ ವಿಜಯಪುರದಲ್ಲಿ ಒಬ್ಬ ಮಲ್ಲಪ್ಪ ಶೆಟ್ಟಿ ಇದ್ದಾನೆ. ಅವನಿಗೆ ಹಣ ನೀಡುತ್ತಿದ್ದಾರೆ. ಬೆಳಗಾವಿಯಲ್ಲಿ ಇನ್ನು ಮುಂದೆ ನಮ್ಮ ಸಮಾಜಕ್ಕೆ ಗೌರವ ವೃದ್ಧಿ ಆಗಲಿದೆ. ಎಸ್‌ಸಿ, ಎಸ್‌ಟಿ ಬಳಿಕ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ಭರವಸೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನಗೆ ಭರವಸೆ ನೀಡಿದ್ದಾರೆ. ಮೀಸಲಾತಿ ಕೊಡಲೇಬೇಕು ಎಂದು ನಾನು ಆಗ್ರಹ ಮಾಡಿದ್ದೇನೆ. ಇಲ್ಲವಾದ್ರೆ ನವೆಂಬರ್ ಮೊದಲ ವಾರದಲ್ಲೇ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಸಮಾಜದ 25 ಲಕ್ಷ ಜನರು ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಬಸನಗೌಡ ಪಾಟೀಲ್ ಯತ್ನಾಳ್​ ಎಚ್ಚರಿಕೆ ನೀಡಿದರು.

ABOUT THE AUTHOR

...view details