ಕರ್ನಾಟಕ

karnataka

ವಿಸಿಗಳ ನೇಮಕದಲ್ಲಿ ಲಂಚ ತೆಗೆದುಕೊಂಡ ಆರೋಪ: ಪರಿಷತ್ ಕಲಾಪದಲ್ಲಿ ಗದ್ದಲ ಕೋಲಾಹಲ

By

Published : Dec 22, 2022, 4:12 PM IST

ವಿಸಿಗಳ ನೇಮಕದಲ್ಲಿ ಲಂಚ ಪಡೆದಿದ್ದಾರೆ ಎಂದರೆ ಆರೋಪ ರಾಜ್ಯಪಾಲರ ಮೇಲೆ ಬರಲಿದೆ. ಯಾರಿಗೆ ಹಣ ಹೋಗಿದೆ. ಶಿಕ್ಷಣ ಸಚಿವರಿಗೋ, ಸಿಎಂಗೋ, ರಾಜ್ಯಪಾಲರಿಗೆ ಹೋಗಿದೆಯೋ ಎಂದು ಚರ್ಚೆಯಾಗಿ ಸತ್ಯಾಂಶ ಹೊರಬರಬೇಕಿದೆ. ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದರು.

ಪರಿಷತ್ ಕಲಾಪದಲ್ಲಿ ಗದ್ದಲ ಕೋಲಾಹಲ
ಪರಿಷತ್ ಕಲಾಪದಲ್ಲಿ ಗದ್ದಲ ಕೋಲಾಹಲ

ಬೆಳಗಾವಿ/ ಬೆಂಗಳೂರು:ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಯಲ್ಲಿ ಲಂಚ ಪಡೆಯಲಾಗಿದೆ ಎಂದು ಸಂಸದರೊಬ್ಬರು ಮಾಡಿದ ಆರೋಪ ಕುರಿತು ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸಿತು. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಪರಿಷತ್ ಕಲಾಪದಲ್ಲಿ ಗದ್ದಲ ಕೋಲಾಹಲ ಸೃಷ್ಟಿಸಿತು. ಕಾಂಗ್ರೆಸ್ ಧರಣಿ ಹಿನ್ನೆಲೆ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಯಿತು.

ಚರ್ಚೆಗೆ ಅವಕಾಶ ಕೋರಿಕೆ:ವಿಧಾನ ಪರಿಷತ್ ಕಲಾಪದ ಶೂನ್ಯವೇಳೆ ಬಳಿಕ ನಿಲುವಳಿ ಸೂಚನೆ ಮಂಡಿಸಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಲೋಕಸಭಾ ಸದಸ್ಯರೊಬ್ಬರ ಆರೋಪ ರಾಜ್ಯಪಾಲರ ಮೇಲಿದೆ. ವಿಸಿಗಳ ನೇಮಕದಲ್ಲಿ ಲಂಚ ಪಡೆದಿದ್ದಾರೆ ಎಂದರೆ ಆರೋಪ ರಾಜ್ಯಪಾಲರ ಮೇಲೆ ಬರಲಿದೆ. ಯಾರಿಗೆ ಹಣ ಹೋಗಿದೆ ಶಿಕ್ಷಣ ಸಚಿವರಿಗೋ ಸಿಎಂಗೋ, ರಾಜ್ಯಪಾಲರಿಗೆ ಹೋಗಿದೆಯೋ ಎಂದು ಚರ್ಚೆಯಾಗಿ ಸತ್ಯಾಂಶ ಹೊರಬರಬೇಕಿದೆ. ಚರ್ಚೆಗೆ ಅವಕಾಶ ಮಾಡಿಕೊಡಿ ಎಂದರು.

ಸಚಿವ ಮಾಧುಸ್ವಾಮಿ ಸಲಹೆ: ಇದಕ್ಕೆ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಪತ್ರಿಕೆ,ಮಾಧ್ಯಮಗಳಲ್ಲಿ ಬಂದ ಆರೋಪದ ಬಗ್ಗೆ ಇಲ್ಲಿ ಚರ್ಚೆ ಮಾಡಲು ಬರಲ್ಲ. ಆರೋಪದ ಬಗ್ಗೆ ದಾಖಲೆ ಕೊಟ್ಟು ಚರ್ಚೆಗೆ ಬರಲಿ. ಸಾಕ್ಷ್ಯಧಾರ ಕೊಟ್ಟರೆ ಚರ್ಚೆಗೆ ಅರ್ಹವಾಗಿದೆ ಎಂದರೆ ಅವಕಾಶ ಕೊಡಿ ನಾವು ಚರ್ಚೆಗೆ ಸಿದ್ದ. ಇಂತಹ ಪಾಪ ನಾವು ಮಾಡಿಲ್ಲ. ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿದೆ ಎಂದು ಕಂಡಬಂದರೆ ಚರ್ಚೆಗೆ ಕೈಗೆತ್ತಿಕೊಳ್ಳಲಿ. ಆದರೆ ರಾಜ್ಯಪಾಲರ ಬಗ್ಗೆ, ನ್ಯಾಯಾಧೀಶರ ಬಗ್ಗೆ ಇಲ್ಲಿ ಚರ್ಚೆಯಾಗಬಾರದು ಎನ್ನುವ ಸಲಹೆ ನೀಡಿದರು.

ಮಾಧುಸ್ವಾಮಿ ಹೇಳಿಕೆಗೆ ಕಿಡಿಕಾರಿದ ಹರಿಪ್ರಸಾದ್ ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿದೆ ಎಂದು ನೋಡಿಯೇ ಇಡಿ, ಸಿಬಿಐ ಕಳಿಸುತ್ತೀರಾ? ಕಾನೂನು ಸಚಿವರು ಹರಿಶ್ಚಂದ್ರರು ಇವರು ಏನೂ ಮಾಡಲ್ಲ. ಅವರ ಪಕ್ಷದವರೇ ಮಾಡಿರುವ ಗಂಭೀರ ಆರೋಪ. ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದರು.

ಚರ್ಚೆಗೆ ಕಾಂಗ್ರೆಸ್​ ಸದಸ್ಯರ ಪಟ್ಟು: ಈ ವೇಳೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಸಿಡಿ ಕೊಟ್ಟಿದ್ದಾರೆ ಅದನ್ನು ನಾನು ನೋಡಿ ನಿರ್ಧರಿಸುತ್ತೇನೆ ಎಂದರು. ಆದರೆ ಇದಕ್ಕೆ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್ ಕುಮಾರ್, ಎಂಪಿ ಬಗ್ಗೆ ಆರೋಪ ಕುರಿತು ಲೋಕಸಭೆಯಲ್ಲಿ ಚರ್ಚೆ ಮಾಡಲಿ ಇಲ್ಲಿ ಬೇಡ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಪಾಲರ ರಕ್ಷಣೆಗಾಗಿ ನಾವು ಇಲ್ಲಿ ಚರ್ಚೆ ಮಾಡಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟುಹಿಡಿದರು.

ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್, ಚರ್ಚೆಗೆ ನಮ್ಮದೇನು ತಕರಾರಿಲ್ಲ. ನಾವು ಸಿದ್ದರಿದ್ದೇವೆ. ಆದರೆ ಕಾಂಗ್ರೆಸ್ ಶಾಸಕರೊಬ್ಬರು ಸಾರ್ವಜನಿಕ ಭಾಷಣ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆಯಾಗಿದೆ. ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿ ಮೂರು ನಾಲ್ಕು ತಲೆಮಾರು ಆಗುವಷ್ಟ ಗಳಿಸಿಕೊಂಡಿದ್ದೇವೆ. ಭ್ರಷ್ಟಾಚಾರ ಮಾಡಿದ್ದೇವೆ ಎಂದಿದ್ದರು. ಅದರ ಬಗ್ಗೆಯೂ ಚರ್ಚೆಯಾಗಬೇಕು. ಯಾರು, ಎಷ್ಟು ಗಳಿಸಿಕೊಂಡಿದ್ದಾರೆ ಎಲ್ಲವೂ ಚರ್ಚೆಯಾಗಲಿ ಎಂದು ಪತ್ರಿಕಾ ವರದಿಯ ತುಣುಕು ಪ್ರದರ್ಶಿಸಿದರು.

ಕಾಂಗ್ರೆಸ್​ ಸದಸ್ಯರಿಂದ ಧರಣಿ: ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತು, ಗಳಿಸಿಕೊಂಡಿದ್ದೇವೆ ಎಂದಿದ್ದಾರೆ ಭ್ರಷ್ಟಾಚಾರ ಮಾಡಿದ್ದೇವೆ ಎಂದಿಲ್ಲ. ಈ ಬಗ್ಗೆಯೂ ದಾಖಲೆ ಕೊಡಿ. ಅಲ್ಲದೆ ತಮ್ಮ ಪಕ್ಷದ ನಾಯಕರ ಹೆಸರು ಪ್ರಸ್ತಾಪ ಖಂಡಿಸಿ ಸದನದ ಬಾವಿಗಳಿದು ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು.

ಧರಣಿ ನಡುವೆ ಮಾತನಾಡಿದ ಬಿಕೆ ಹರಿಪ್ರಸಾದ್, ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡುವ ಕಲೆ ಹಾವಿನಪುರದಲ್ಲಿ ಕಲಿತುಕೊಂಡು ಬಂದಿದ್ದಾರೆ. ಅದು ಇಲ್ಲಿ ನಡೆಯಲ್ಲ ಎಂದರು. ಇದಕ್ಕೆ ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಹಾವಿನ ಪುರ ಎಂದರೆ ಹೇಗೆ? ಕಡತದಿಂದ ಆ ಪದ ತೆಗೆಸಿ ಎಂದು ಆಗ್ರಹಿಸಿ ನೀವು ಇಟಲಿಯಿಂದ ಕಲಿತುಕೊಂಡು ಬಂದಿದ್ದೀರಾ ಎಂದು ತಿರುಗೇಟು ನೀಡಿದರು.

ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ:ಈ ವೇಳೆ ಸದನದಲ್ಲಿ ಗದ್ದಲ ಕೋಲಾಹಲವುಂಟಾಯಿತು. ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸದನ ಮುಂದೂಡುವ ಕುರಿತು ಸಭಾಪತಿ ಎಚ್ಚರಿಕೆ ನೀಡಿದರೂ ಸದಸ್ಯರು ಸಹಕಾರ ನೀಡದ ಹಿನ್ನೆಲೆಯಲ್ಲಿ ಈ ಸದನದ ಸದಸ್ಯರಲ್ಲದವರ ಬಗ್ಗೆ ಇಲ್ಲಿ ಮಾತನಾಡಿದರೆ ಅದಕ್ಕೆ ಬೆಲೆ ಇಲ್ಲ. ಅದನ್ನು ಕಡತದಿಂದ ತೆಗೆದುಹಾಕಲಾಗಿದೆ ಎಂದು ಪ್ರಕಟಿಸಿ ಸದನವನ್ನು 15 ನಿಮಿಷ ಮುಂದೂಡಿಕೆ ಮಾಡಿದರು.

ABOUT THE AUTHOR

...view details