ಕರ್ನಾಟಕ

karnataka

ಯುವಕನ ಮುಖಕ್ಕೆ ಬಿಸಿ ನೀರು ಎರಚಿ ಮಹಿಳೆ ಪರಾರಿ!

By

Published : May 30, 2023, 11:18 AM IST

ಪ್ರಿಯಕರನಿಗೆ ವಿವಾಹವಾಗಿದೆ ಎಂದು ತಿಳಿದ ಮಾಜಿ ಪ್ರಿಯತಮೆ ಆತನ ಮುಖಕ್ಕೆ ಬಿಸಿನೀರು ಎರಚಿ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಿಸಿ ನೀರು ಎರಚಿ ಮಹಿಳೆ ಪರಾರಿ
ಬಿಸಿ ನೀರು ಎರಚಿ ಮಹಿಳೆ ಪರಾರಿ

ಬೆಂಗಳೂರು:ಪ್ರಿಯಕರನಿಗೆ ಮದುವೆಯಾಗಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ಮಹಿಳೆ ಯುವಕನ ಮುಖಕ್ಕೆ ಬಿಸಿ ನೀರು ಎರಚಿದ್ದಲ್ಲದೇ, ಬಾಟಲಿಯಿಂದ ಹಲ್ಲೆ ಮಾಡಿ ಎಸ್ಕೇಪ್‌ ಆಗಿರುವ ಘಟನೆ ಮೇ 26 ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಲಬುರಗಿಯ ವಿಜಯಶಂಕರ ಆರ್ಯ ಗಾಯಾಳು. ಅಫಜಲಪುರ ಮೂಲದ ಜ್ಯೋತಿ ದೊಡ್ಡಮನಿ ಆರೋಪಿ ಎಂದು ತಿಳಿದುಬಂದಿದೆ.

ಘಟನೆಯ ವಿವರ:ಚಾಮರಾಜಪೇಟೆಯ ಬೋರೋ ಕ್ಲಾತಿಂಗ್​ನಲ್ಲಿ ಎಡಿಟಿಂಗ್ ಕೆಲಸ ಮಾಡಿಕೊಂಡಿದ್ದ ವಿಜಯಶಂಕರ ಎಂಬಾತನಿಗೆ ನಾಲ್ಕು ವರ್ಷಗಳ ಹಿಂದೆ ಅಫಜಲಪುರದ ಜ್ಯೋತಿ ಪರಿಚಯವಾಗಿ, ಪ್ರೇಮಾಂಕುರವಾಗಿತ್ತು. ಎರಡು ವರ್ಷಗಳ ಹಿಂದೆ ಜ್ಯೋತಿಗೆ ಮದುವೆಯಾಗಿದೆ ಎಂಬ ವಿಚಾರ ತಿಳಿದ ವಿಜಯಶಂಕರ​ ಆಕೆಯಿಂದ ಅಂತರ ಕಾಯ್ದುಕೊಂಡಿದ್ದ. ಇದಾದ ನಂತರ ಬೆಂಗಳೂರಿಗೆ ಬಂದು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಜ್ಯೋತಿಗೆ ತಾನು ವಾಸವಿದ್ದ ಚಾಮರಾಜಪೇಟೆಯ ಎಂ.ಡಿ.ಬ್ಲಾಕ್​ನಲ್ಲಿರುವ ಬಾಡಿಗೆ ರೂಮ್ ಬಿಟ್ಟುಕೊಟ್ಟಿದ್ದ.

ಬೊಮ್ಮಸಂದ್ರ ಬಳಿಯ ಯಾರಂಡಳ್ಳಿಯಲ್ಲಿ ಸ್ನೇಹಿತನ ಜೊತೆಗೆ ವಿಜಯಶಂಕರ ವಾಸವಿದ್ದ. ಮೇ 5 ರಂದು ಬೇರೆ ಯುವತಿಯೊಂದಿಗೆ ವಿಜಯಶಂಕರನಿಗೆ ಮದುವೆಯಾಗಿದೆ. ಮೇ 23 ರಂದು ಪುನಃ ವಿಜಯಶಂಕರ ಬೆಂಗಳೂರಿಗೆ ಬಂದಿದ್ದಾನೆ. ಈತನನ್ನು ಮೇ 25 ರಂದು ಸಂಜೆ ಬರ್ತ್ ಡೇ ಸಿದ್ಧತೆಗೆ ಸಹಾಯ ಮಾಡುವಂತೆ ಜ್ಯೋತಿ ತನ್ನ ರೂಮಿಗೆ ಕರೆಸಿಕೊಂಡಿದ್ದಳು.

ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಬಂದಿದ್ದ ವಿಜಯಶಂಕರ, ಇಬ್ಬರಿಗೂ ಮದುವೆ ಆಗಿದೆ ಇನ್ನು ಮುಂದೆ ಸಿಗುವುದು ಬೇಡ ಎಂದಿದ್ದ. ಆ ಬಳಿಕ ಸುಮಾರು ಒಂದು ಗಂಟೆಗಳ ಕಾಲ ತನ್ನ ಪತ್ನಿ ಹಾಗೂ ಪೋಷಕರೊಂದಿಗೆ ಫೋನ್​ನಲ್ಲಿ ಮಾತನಾಡಿದ್ದ. ಇದನ್ನು ಕೇಳಿಸಿಕೊಂಡಿದ್ದ ಜ್ಯೋತಿ ಇದ್ದಕ್ಕಿದ್ದಂತೆ ಸಿಟ್ಟಿಗೆದ್ದಿದ್ದಳು.

ಈ ನಡುವೆ ವಿಜಯಶಂಕರ, ತನಗೆ ಮೈ ಹುಷಾರಿಲ್ಲ ಎಂದು ಜ್ಯೋತಿ ಬಳಿಯೇ ಡ್ರಿಪ್ಸ್ ಹಾಕಿಸಿಕೊಂಡು ನಿದ್ರೆಗೆ ಜಾರಿದ್ದಾನೆ. ಮಾರನೇ ದಿನ ಮೇ 26 ರ ಬೆಳಗ್ಗೆ ಜ್ಯೋತಿ ಅಡುಗೆ ಕೋಣೆಯಲ್ಲಿ ಬಿಸಿ ನೀರು ಕಾಯಿಸಿ ತಂದು ಏಕಾಏಕಿ ವಿಜಯಶಂಕರನ ಮುಖಕ್ಕೆ ಎರಚಿದ್ದಾಳೆ. ಬಿಯರ್​ ಬಾಟಲ್​ನಿಂದ ಆತನ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾಳೆ.

ತೀವ್ರ ಗಾಯಗಳಿಂದ ಒದ್ದಾಡುತ್ತಿದ್ದ ವಿಜಯಶಂಕರನ ಕಿರುಚಾಟ ಕೇಳಿ ಆಗಮಿಸಿದ ಮನೆ ಮಾಲೀಕ ಸೈಯದ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಜಯಶಂಕರನ ಮುಖಭಾಗಕ್ಕೆ ಶೇ 40-50 ರಷ್ಟು ಗಾಯವಾಗಿದೆ. ಇನ್ನು ಗಾಯಾಳುವಿನ ಹೇಳಿಕೆಯನ್ವಯ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಮಹಿಳೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ:ಮಗಳನ್ನು ಬರ್ಬರವಾಗಿ ಕೊಂದ ಸಾಹಿಲ್‌ ಖಾನ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಪೋಷಕರ ಆಗ್ರಹ

ABOUT THE AUTHOR

...view details