ಕರ್ನಾಟಕ

karnataka

ಮಾಣಿಪ್ಪಾಡಿ ವರದಿ ಮಂಡನೆ: ಕಾಂಗ್ರೆಸ್​​ನ ಪಾಯಿಂಟ್ ಆಫ್ ಆರ್ಡರ್ ತಿರಸ್ಕರಿಸಿದ ಸಭಾಪತಿ

By

Published : Sep 23, 2022, 1:10 PM IST

speaker of legislative council
ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ()

ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪಾಯಿಂಟ್ ಆಫ್ ಆರ್ಡರ್ ಪ್ರಸ್ತಾಪಿಸಿದರು. ವಕ್ಫ್ ಅಕ್ರಮ ವರದಿಯನ್ನು ಸದನದಲ್ಲಿ ಗದ್ದಲ ನಡೆಯುವಾಗಲೇ ನಿನ್ನೆ ಸಚಿವರು ಮಂಡಿಸಿದ್ದಾರೆ. ಇದು ನಿಯಮಾವಳಿ ವಿರುದ್ದವಾಗಿದೆ. ನಿಯಮ ಮೀರಿ ವರದಿ ಮಂಡನೆ ಆಗಿದೆ. ಈ ಬಗ್ಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು:ವಕ್ಫ್ ಹಗರಣ ಕುರಿತು ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಗದ್ದಲ ನಡುವೆ ವೇಳೆ ಮಂಡಿಸಿ ನಿಯಮ ಉಲ್ಲಂಘಿಸಲಾಗಿದೆ ಎಂದು ಕಾಂಗ್ರೆಸ್ ಎತ್ತಿದ ಪಾಯಿಂಟ್ ಆಫ್ ಆರ್ಡರ್(ಕ್ರಿಯಾಲೋಪ)ನ್ನು ತಿರಸ್ಕಾರ ಮಾಡಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ರೂಲಿಂಗ್ ನೀಡಿದರು.

ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪಾಯಿಂಟ್ ಆಫ್ ಆರ್ಡರ್ ಪ್ರಸ್ತಾಪಿಸಿದರು. ವಕ್ಫ್ ಅಕ್ರಮ ವರದಿಯನ್ನು ಸದನದಲ್ಲಿ ಗದ್ದಲ ನಡೆಯುವಾಗಲೇ ನಿನ್ನೆ ಸಚಿವರು ಮಂಡಿಸಿದ್ದಾರೆ. ಇದು ನಿಯಮಾವಳಿ ವಿರುದ್ದವಾಗಿದೆ. ನಿಯಮ ಮೀರಿ ವರದಿ ಮಂಡನೆ ಆಗಿದೆ. ಈ ಬಗ್ಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.

ನಮ್ಮ ಪರಿಷತ್​ನಲ್ಲಿ ನಿಯಮ ಇದೆ. ನಿಯಮ ಮೀರಿ ವರದಿ ಮಂಡನೆ ಆಗಿದೆ. ಉದ್ದೇಶ ಪೂರ್ವಕವಾಗಿ ಸರ್ಕಾರ ಕ್ರೈಂ ಮಾಡಿದೆ. ನಮಗೂ ಶೇ 40ರಷ್ಟು ಭ್ರಷ್ಟಾಚಾರ ಆರೋಪ ಕುರಿತ ಚರ್ಚೆಗೆ ಅವಕಾಶ ಕೊಡಿ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸುಪ್ರೀಂಕೋರ್ಟ್ ವರದಿ ಮಂಡನೆ ಮಾಡಲು ಹೇಳಿದೆ. ಕೆಳಮನೆಯಲ್ಲಿ ವರದಿ ಮಂಡನೆ ಆಗಿದೆ. ಹೀಗಾಗಿ ಇಲ್ಲೂ ಕೂಡಾ ವರದಿ ಮಂಡನೆ ಮಾಡಿದ್ದೇವೆ ಎಂದರು.

ಚರ್ಚೆಗೆ ಅವಕಾಶ ಕೊಡುವಂತೆ ಆಗ್ರಹ:ಸರ್ಕಾರದ ಈ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತು. ಸದನದಲ್ಲಿ ಗದ್ದಲ ಗಲಾಟೆಯಾಗಿ ಬಿಜೆಪಿ, ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ನಡೆಯಿತು. 40 ಪರ್ಸೆಂಟ್​ ಕಮಿಷನ್ ಚರ್ಚೆಗೆ ಅವಕಾಶ ಕೊಡುವಂತೆ ಕಾಂಗ್ರೆಸ್ ಆಗ್ರಹಿಸಿತು. ಈ ವೇಳೆ ಸದನಕ್ಕೆ ಕಾಂಗ್ರೆಸ್ ಸದಸ್ಯರು 40 ಪರ್ಸೆಂಟ್ ಹೆಸರು ಇರುವ ಮಾಸ್ಕ್ ಧರಿಸಿ ಬಂದಿದ್ದರು.

ಕಾಂಗ್ರೆಸ್ ಮಾಸ್ಕ್​​ಗೆ ವಿರೋಧ ಮಾಡಿದ ಬಿಜೆಪಿ ಯಾಕೆ ಮಾಸ್ಕ್ ಹಾಕಿದ್ದಾರೆ. ಇದು ಸರಿಯಲ್ಲ ಎಂದರು. ಇದಕ್ಕೆ ಟಾಂಗ್ ನೀಡಿದ ಕಾಂಗ್ರೆಸ್ ಸದಸ್ಯ ರವಿ, ಕುಂಬಳಕಾಯಿ ಕಳ್ಳ ಎಂದರೆ ನೀವು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತೀರಾ. ಬಿಜೆಪಿ ಸರ್ಕಾರ ಇಳಿಸೋವರೆಗೂ ಮಾಸ್ಕ್ ಹಾಕುತ್ತೇವೆ ಎಂದರು.

ನಂತರ ಮಾತನಾಡಿದರೆ ಹರಿಪ್ರಸಾದ್, ವರದಿ ಮಂಡನೆ ಆಗಬೇಕಾದರೆ ವರದಿ ಗೌಪ್ಯವಾಗಿ ಇಡಬೇಕು. ನಿನ್ನೆ ಒಬ್ಬ ಸದಸ್ಯರು ಹೆಸರು ಓದಿದ್ದಾರೆ. ವರದಿ ಗೌಪ್ಯತೆ ಕಾಪಾಡಿಲ್ಲ. ವರದಿಯನ್ನು ಬಿಜೆಪಿ ಸದಸ್ಯರಿಗೆ ಮಾತ್ರ ಯಾಕೆ ಕೊಡಲಾಯಿತು. ಎಲ್ಲರಿಗೂ ಕೊಡಬೇಕಲ್ಲವೇ ಎಂದು ಪ್ರಶ್ನಿಸಿದರು.

ಗೌಪ್ಯತೆ ನಿಯಮ ವಿಫಲ:ಜೆಡಿಎಸ್ ನಾಯಕ ಭೋಜೇಗೌಡ ಮಾತನಾಡಿ, ವರದಿ ಮಂಡನೆ ಆಗಬೇಕಾದರೆ ಗೌಪ್ಯತೆ ಕಾಪಾಡಬೇಕು. ನಿಯಮ ಅದನ್ನ ಹೇಳಿತ್ತು. ಮಂಡನೆ ಆಗಿ ಕೂಡಲೇ ಆಡಳಿತ ಪಕ್ಷದ ಸದಸ್ಯರು ಹೆಸರುಗಳನ್ನು ಹೇಳಿದರು. ವರದಿ ಗೌಪ್ಯತೆ ಹಾಳಾಗಿದೆ. ಗೌಪ್ಯತೆ ನಿಯಮ ವಿಫಲವಾಗಿದೆ ಎಂದು ಆರೋಪಿಸಿದರು.

ಪಾಯಿಂಟ್ ಆಫ್ ಆರ್ಡರ್ ತಿರಸ್ಕಾರ: ಗೌಪ್ಯತೆ ನಿಯಮ ಉಲ್ಲಂಘನೆ ಆರೋಪ ಕುರಿತು ಸ್ಪಷ್ಟೀಕರಣ ನೀಡಿದ ಸಭಾ ನಾಯಕ‌ ಕೋಟಾ ಶ್ರೀನಿವಾಸ ಪೂಜಾರಿ ಇದು ಸದನ ಸಮಿತಿ ವರದಿ ಅಲ್ಲ ಹಾಗಾಗಿ ಗೌಪ್ಯವಾಗಿಡಬೇಕಿಲ್ಲ ಎಂದರು. ಆಡಳಿತ ಮತ್ತು ಪ್ರತಿಪಕ್ಷಗಳ ವಾದ ಪ್ರತಿವಾದ ಆಲಿಸಿದ ಸಭಾಪತಿಗಳು ಸರ್ಕಾರ ವರದಿ ಮಂಡನೆ ಮಾಡಿದ್ದು ಆಯೋಗದ ವರದಿ. ಅದು ವಿಧಾನ ಮಂಡಲದ ವರದಿ ಅಲ್ಲ. ಹೀಗಾಗಿ ಕಾಂಗ್ರೆಸ್​​ನ ಪಾಯಿಂಟ್ ಆಫ್ ಆರ್ಡರ್ ತಿರಸ್ಕಾರ ಮಾಡುತ್ತಿದ್ದೇನೆ ಎಂದು ರೂಲಿಂಗ್ ನೀಡಿದರು.

ಸಭಾಪತಿ ರೂಲಿಂಗ್​ಗೆ ಕಾಂಗ್ರೆಸ್ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದು ಏಕಪಕ್ಷೀಯ ನಿರ್ಧಾರ. ವರದಿ ಮಂಡನೆ ಸರಿಯಾಗಿ ಆಗಿಲ್ಲ. ಬಿಜೆಪಿ ಅವರಿಗೆ ಮಾತ್ರ ವರದಿ ಕೊಟ್ಟಿದ್ದಾರೆ. ಎಲ್ಲಾ ಸದಸ್ಯರಿಗೂ ವರದಿ ಕಾಪಿ ಕೊಡಿ ಎಂದರು.ಇದಕ್ಕೆ ಪ್ರತಿಯಾಗಿ ಇದು ಆಯೋಗದ ವರದಿ. ಸರ್ಕಾರದ ವರದಿ ಅಲ್ಲ ಹಾಗಾಗಿ ನಿಮ್ಮ ಪ್ರಸ್ತಾಪ ತಿರಸ್ಕರಿಸಿದ್ದೇನೆ ಎಂದು ಮತ್ತೊಮ್ಮೆ ತಿಳಿಸಿದ ಸಭಾಪತಿಗಳು ವರದಿ ಪ್ರತಿ ಕೊಡಿಸುತ್ತೇವೆ ಎಂದರು. ಇದಕ್ಕೆ ಒಪ್ಪಿ ಹರಿಪ್ರಸಾದ್ ಗದ್ದಲ ಕೈಬಿಟ್ಟರು.

ಇದನ್ನೂ ಓದಿ:ವಕ್ಫ್ ಆಸ್ತಿ ಕಬಳಿಕೆ: ಪರಿಷತ್​ನಲ್ಲಿ ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆ, ಕಾಂಗ್ರೆಸ್ - ಬಿಜೆಪಿ ಸದಸ್ಯರ ವಾಗ್ವಾದ

ABOUT THE AUTHOR

...view details