ಕರ್ನಾಟಕ

karnataka

ಪ್ರಧಾನಿ ಮೋದಿಗೆ 6 ಬಹಿರಂಗ ಪ್ರಶ್ನೆ ಕೇಳಿದ ಸುರ್ಜೇವಾಲಾ

By

Published : Feb 27, 2023, 10:48 PM IST

ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿರುವ ಸುರ್ಜೇವಾಲಾ ಪ್ರಧಾನಿ ಮೋದಿಗೆ ಆರು ಪ್ರಶ್ನೆಗಳನ್ನು ಕೇಳಿದ್ದಾರೆ.

Surjewala asked PM Modi six questions
ಪ್ರಧಾನಿ ಮೋದಿಗೆ ಆರು ಪ್ರಶ್ನೆ ಮುಂದಿಟ್ಟ ಸುರ್ಜೇವಾಲಾ

ಬೆಂಗಳೂರು :ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೇಳಿರುವ ಬಹಿರಂಗ ಪ್ರಶ್ನೆಗಳು ಹೀಗಿವೆ.

1) ಭಾರತೀಯ ಜನತಾ ಪಕ್ಷ ಕರ್ನಾಟಕದ ಉದ್ದಗಲಕ್ಕೂ "ಬಿಜೆಪಿಯೇ ಭರವಸೆ" ಅನ್ನೋ ಅಭಿಯಾನ ನಡೆಸುತ್ತಿದ್ದು, 40% ಸರ್ಕಾರ ತನ್ನ ಅಕ್ರಮ ಗಳಿಕೆಯ ಹಣದಲ್ಲಿ ಎಲ್ಲಾ ರಸ್ತೆಗಳ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವ ಮೂಲಕ ಚುನಾವಣೆಗೆ ಮುಂದಾಗಿದೆ. ಆದರೆ ಕಳೆದ ಬಾರಿ ನಿಮ್ಮ ನೇತೃತ್ವದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ 600 ಭರವಸೆಗಳ ಪೈಕಿ ಶೇ 10% ಭರವಸೆಗಳನ್ನೂ ನಿಮ್ಮ ಪಕ್ಷದ ಸರಕಾರದಿಂದ ಪೂರೈಸಲಾಗಿಲ್ಲ ಯಾಕೆ? ಈ ಬಗ್ಗೆ ಸರ್ಕಾರದ ಹಣದಲ್ಲಿ ನೀವು ನಡೆಸುತ್ತಿರುವ ಪ್ರಚಾರ ಸಭೆಯಲ್ಲಿಯಾದರೂ ಜನರಿಗೆ ಉತ್ತರದಾಯಿ ಆಗಬಲ್ಲಿರಾ?

2) ನಿಮ್ಮ"ರೋಡ್ ಷೋ(ಕಿ)" ಗಾಗಿ ಇಂದು ನಡೆಯಬೇಕಿದ್ದ ಪ್ರಥಮ ಪಿಯುಸಿ ಪರೀಕ್ಷೆಯನ್ನು ಬೆಳಗಾವಿಯಲ್ಲಿ ರದ್ದು ಮಾಡಲಾಗಿದೆ. ಈ ಬಗ್ಗೆ ನೀವು ಉತ್ತರಿಸುವಿರಾ? ಅಲ್ಲದೇ ಕರ್ನಾಟಕದ 13,000 ಅನುದಾನ ರಹಿತ ಶಾಲೆಗಳ ಒಕ್ಕೂಟವಾದ 'ರುಪ್ಸಾ', ರಾಜ್ಯದ ಬಿಜೆಪಿ ಸರ್ಕಾರದಲ್ಲಿ 40% ಲಂಚ ನೀಡದೆ ಯಾವುದೇ ಸೇವೆ ಪಡೆಯಲು ಸಾಧ್ಯವಿಲ್ಲ ಎಂದು ತಮಗೆ ಪತ್ರ ಬರೆದು ಆರೋಪ ಮಾಡಿದ್ದರು. ಇದಕ್ಕೆ ತಾವು ಉತ್ತರವೇ ಕೊಟ್ಟಿಲ್ಲ ಯಾಕೆ? "ಪರೀಕ್ಷೆ ಪೇ ಚರ್ಚೆ" ನಡೆಸುವ ತಾವು "ಶಿಕ್ಷಣದ ಬಗ್ಗೆ ಚರ್ಚೆಗೆ" ಯಾವಾಗ ಬರ್ತೀರಾ?

3) ಇಡೀ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಕರ್ನಾಟಕದಲ್ಲಿ ಸುಮಾರು ಎರಡುವರೆ ಲಕ್ಷ ಸರ್ಕಾರಿ ಉದ್ಯೋಗ ಮತ್ತು ಸುಮಾರು ಏಳುವರೆ ಲಕ್ಷ ಖಾಸಗಿ ಉದ್ಯೋಗಕ್ಕೆ ಅವಕಾಶವಿದ್ದು, ರಾಜ್ಯದ ಬಿಜೆಪಿ ಸರ್ಕಾರ ಯುವಜನರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ನೇಮಕಾತಿ ನಡೆಸುತ್ತಿರುವ ಹುದ್ದೆಗಳ ಹಂಚಿಕೆಯಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ.

ನಿಮ್ಮ ಬಿಜೆಪಿ ಶಾಸಕರು & ಮಂತ್ರಿಗಳು ಸರ್ಕಾರದ ಹುದ್ದೆಗಳನ್ನು ಕೋಟಿಗಟ್ಟಲೆ ಹಣಕ್ಕೆ ಮಾರಾಟಕ್ಕೆ ಇಟ್ಟುಬಿಟ್ಟಿದ್ದಾರೆ! ನಿಮ್ಮದೇ ಪಕ್ಷದ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಶಾಸಕರೊಬ್ಬರು ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳ ಪುತ್ರ PSI ನೇಮಕಾತಿ ಹಗರಣದ ನೇರ ರೂವಾರಿ ಎಂದು ಆರೋಪಿಸಿದ್ದರು. ಅದರ ಬಗ್ಗೆನೂ ನಿಮ್ಮ ಭಾಷಣಕಾರರಿಗೆ ಹೇಳಿ ಒಂದು ಉತ್ತರ ಬರೆಸಿ, ಅದನ್ನು ಓದಿ ಹೇಳಿ ನೋಡೋಣ?

4) ಶಿವಮೊಗ್ಗದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಲಕ್ಷಾಂತರ ಜನರ ಪಾಲಿಗೆ ಉದ್ಯೋಗ ಒದಗಿಸಿದ್ದ ದೇಶದ ಮಹತ್ತರ ಕಾರ್ಖಾನೆಯಾಗಿತ್ತು. ಈ ಕಾರ್ಖಾನೆಗೆ UPA ಸರಕಾರ 2013ರಲ್ಲಿಯೇ ಬಳ್ಳಾರಿಯಲ್ಲಿ 380 ಎಕರೆ ಗಣಿ ಪ್ರದೇಶವನ್ನು ಒದಗಿಸಿತ್ತು. ಆದರೆ ನಿಮ್ಮ ಸರ್ಕಾರ ಆ ಗಣಿ ಪ್ರದೇಶದ ಉಪಯೋಗವನ್ನೇ ಮಾಡದೇ, ಈಗ ಈ ಕಾರ್ಖಾನೆಗೆ ಶಾಶ್ವತವಾಗಿ ಬೀಗ ಹಾಕಿದ್ದು ಯಾಕೆ ಅಂತ ಶಿವಮೊಗ್ಗದ ಜನರಿಗೆ ಉತ್ತರಿಸಿಲ್ಲ ಏಕೆ?

5) ಕಳೆದ ಚುನಾವಣೆಯ ವೇಳೆ ದೇಶದ ಗೃಹ ಮಂತ್ರಿ "ಅಮಿತ್ ಶಾ" ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಶಿವಮೊಗ್ಗ ಜಿಲ್ಲೆಯಲ್ಲಿ 500 ಕೋಟಿ ವೆಚ್ಚದ ಅಡಿಕೆ ಸಂಶೋಧನಾ ಕೇಂದ್ರ ರಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಅದಕ್ಕೆ 5 ಪೈಸೆ ಸಹ ನೀಡಿಲ್ಲ ಏಕೆ? ಆತ್ಮನಿರ್ಭರ್ ಭಾರತದ ಹೆಸರಲ್ಲಿ ಪ್ರಚಾರ ಪಡೆಯುವ ತಾವು ನಮ್ಮ ದೇಶದಲ್ಲಿ ಬೆಳೆಸುವ ಉತ್ಕೃಷ್ಟ ದರ್ಜೆಯ ಅಡಿಕೆಗೆ ಪ್ರೋತ್ಸಾಹ ನೀಡದೇ, ಹೊರ ದೇಶದಿಂದ ಅಮದಾಗುವ ಅಡಿಕೆ ಮೇಲಿದ್ದ ಆಮದು ಸುಂಕವನ್ನು 110% ನಿಂದ ಕೇವಲ 10% ಇಳಿಸಿ ದೇಶೀ ಅಡಿಕೆಯ ಮಾರುಕಟ್ಟೆಯನ್ನು ಭಸ್ಮ ಮಾಡಿದ್ದು ಏಕೆ? ಇಡೀ ಮಲೆನಾಡು ಪ್ರದೇಶದಲ್ಲಿ ಎಲೆ ಚುಕ್ಕೆ ರೋಗದಿಂದ ಮುಂದಿನ ಮಳೆಗಾಲದ ಒಳಗೆ ಇಡೀ ಅಡಿಕೆ ಬೆಲೆ ಸರ್ವನಾಶಗುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ. ಆದರೂ ಈ ಎಲೆ ಚುಕ್ಕೆ ರೋಗಕ್ಕೆ ನಿಮ್ಮ ಡಬಲ್ ಇಂಜಿನ್ ಸರ್ಕಾರ ಔಷದ ಕಂಡು ಹಿಡಿಯಲು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಏಕೆ?

6) ಕರ್ನಾಟಕ - ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಪದೇ ಪದೇ ರಾಜ್ಯಗಳ ಮಧ್ಯೆ ಮಹಾರಾಷ್ಟ್ರದ ಬಿಜೆಪಿ ಮಂತ್ರಿಗಳು ಹಾಗೂ ಶಾಸಕರು ಕಂದಕ ಸೃಷ್ಟಿಸುತ್ತಿದ್ದಾರೆ. ಕರ್ನಾಟಕದ ಅಸ್ಮಿತೆಗೆ ಧಕ್ಕೆ ತಂದು ನಮ್ಮ ನಾಡಿನಲ್ಲಿ ಶಾಂತಿ ಭಂಗಪಡಿಸಲು ಯತ್ನಿಸುತ್ತಿರುವವವರಿಗೆ, "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ - ಇಲ್ಲಿ ಯಾರೂ ಅನಾವಶ್ಯಕವಾಗಿ ಹಾಗೂ ಉದ್ದೇಶಪೂರ್ವಕವಾಗಿ ಗಡಿ ವಿಚಾರದಲ್ಲಿ ರಾಜಕೀಯ ಮಾಡಬಾರದು" ಎಂದು ನೀವು ಇಂದು ಘೋಷಿಸಿ, ಮಹಾರಾಷ್ಟ್ರದ ಬಿಜೆಪಿ ಶಾಸಕರಿಗೆ ಪಾಠ ಹೇಳಬಲ್ಲಿರಾ?.

ಇದನ್ನೂ ಓದಿ :ಅಶಾಂತಿ, ಹಿಂಸೆಯನ್ನು ಮುಂದುವರಿಸುವುದು ಬಿಜೆಪಿಯ ಧೋರಣೆ: ಸುರ್ಜೇವಾಲಾ

ABOUT THE AUTHOR

...view details